ಆಹಾರ ಕಟ್ಟಲು ಪ್ಲಾಸ್ಟಿಕ್ ಬದಲು ಬಾಳೆ ಎಲೆ ಬಳಸಿ; ವೇದವ್ಯಾಸ್ ಕಾಮತ್ ಮನವಿ
ಮಂಗಳೂರು ಜೂನ್ 20: ಝೊಮೊಟೋ, ಸ್ವಿಗ್ಗಿ, ಊಬರ್ ಈಟ್ಸ್ ಮೂಲಕ ಆರ್ಡರ್ ಮಾಡಿ ಆಹಾರವನ್ನು ಮನೆ ಬಾಗಿಲಿಗೆ ತರಿಸುವುದು ಈಗ ಟ್ರೆಂಡ್ ಆಗಿದೆ. ಇದರಲ್ಲಿ ಬರುವ ಆಹಾರಗಳು ಪ್ಲಾಸ್ಟಿಕ್ ಕವರ್ ಗಳಲ್ಲಿ ಪ್ಯಾಕ್ ಆಗಿಬರುವುದೇ ಹೆಚ್ಚು. ಇದನ್ನು ಗಮನಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಪ್ಲಾಸ್ಟಿಕ್ ಬದಲು ಬಾಳೆ ಎಲೆ ಉಪಯೋಗಿಸಿ ಎಂದು ಝೊಮೊಟೋ, ಸ್ವಿಗ್ಗಿ, ಊಬರ್ ಈಟ್ಸ್ ಗೆ ಮನವಿ ಮಾಡಿದ್ದಾರೆ.
ಆಹಾರವನ್ನು ಬಾಳೆ ಎಲೆಯಲ್ಲಿ ಕಟ್ಟುವುದು ಕರಾವಳಿಯ ಸಂಪ್ರದಾಯ. ಕರಾವಳಿಯ ಹೆಚ್ಚಿನ ಹೋಟೆಲ್ ಗಳಲ್ಲಿ ತಿಂಡಿ ಅಥವಾ ಊಟವನ್ನು ಬಾಳೆ ಎಲೆಯಲ್ಲೇ ಬಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ಪೊಟ್ಟಣ ಕಟ್ಟಲು ಬಾಳೆ ಎಲೆ ಬಳಸಿ ಎಂದು ಆಹಾರ ಡೆಲಿವರಿ ಸಂಸ್ಥೆಗಳಿಗೆ ಶಾಸಕರು ಮನವಿ ಮಾಡಿದ್ದಾರೆ.
ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿರುವ ವೇದವ್ಯಾಸ್ ಕಾಮತ್, ನಗರದಲ್ಲಿ ಪ್ಲಾಸ್ಟಿಕ್ ಹಾವಳಿಯನ್ನು ಕಡಿಮೆ ಮಾಡಲು ಆಹಾರ ಡೆಲಿವರಿ ಸಂಸ್ಥೆಗಳಿಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಲಿಖಿತ ಮನವಿ ಮಾಡಿದ್ದಾರೆ. ಸಾಂಬಾರು ಪದಾರ್ಥಗಳನ್ನು ಬಿಟ್ಟು ಉಳಿದ ಆಹಾರವನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುವಂತಹ ಕಾರ್ಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ. ಕರಾವಳಿಯ ಖಾದ್ಯಗಳಾದ ಮೂಡೆ, ಕೊಟ್ಟಿಗೆ, ಗಟ್ಟಿ ಮುಂತಾದುವುಗಳನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿಕೊಟ್ಟರೆ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ.

ಶಾಸಕರ ಮನವಿಗೆ ಸ್ವಿಗ್ಗಿ ಸಂಸ್ಥೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಭರವಸೆ ನೀಡಿದೆ. ವೇದವ್ಯಾಸ್ ಅವರ ಪರಿಸರ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.












Click it and Unblock the Notifications