ಕೈಕಂಬ ಗುಡ್ಡಕುಸಿತ: ಮೃತ ಮಕ್ಕಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ
ಮಂಗಳೂರು, ಜುಲೈ 5: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಗುರುಪುರ ಹೋಬಳಿಯ ಮೂಳೂರು ಗ್ರಾಮದ ಬಂಗ್ಲೆಗುಡ್ಡ ಪ್ರದೇಶದಲ್ಲಿ ಸತತ ಮಳೆಯಿಂದ, ಗುಡ್ಡ ಕುಸಿತವಾಗಿ ಎರಡು ಮನೆಗಳು ಸಂಪೂರ್ಣ ನಾಶವಾಗಿದ್ದು ಮತ್ತು ಕೆಲವೊಂದು ಮನೆಗಳು ಭಾಗಶ: ಹಾನಿಯಾಗಿವೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ""ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರು ಹಾಗೂ ಸ್ಥಳೀಯ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎನ್.ಡಿ.ಆರ್.ಎಫ್ ಮತ್ತು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರ ಕಾರ್ಯಾಚರಣೆಯಿಂದ ಅವಶೇಷಗಳಡಿ ಸಿಲುಕಿದ್ದ 16 ವರ್ಷದ ಬಾಲಕ ಸಫ್ವಾನ್ ಮತ್ತು 10 ವರ್ಷದ ಬಾಲಕಿಯ ಮೃತ ದೇಹಗಳನ್ನು ಹೊರತೆಗೆಯಲಾಗಿರುತ್ತದೆ.''
ಆ ಗುಡ್ಡದ ಪ್ರದೇಶದಲ್ಲಿದ್ದ ಸದ್ಯ 19 ಮನೆಗಳನ್ನು ತೆರವುಗೊಳಿಸಿ ಸುಮಾರು 118 ಜನರನ್ನು ಸಮೀಪದ ಸರಕಾರಿ ಶಾಲೆ/ಗ್ರಾಮ ಪಂಚಾಯತ್ ಹಾಲ್/ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದ 60 ಮನೆಗಳ ಸದಸ್ಯರನ್ನು ಸಹ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.

ಜಿಲ್ಲಾಡಳಿತದ ಪರಿಶ್ರಮದ ಫಲವಾಗಿಯೂ ಬಾಲಕ ಮತ್ತು ಬಾಲಕಿಯ ಜೀವವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ಆದ ದುಃಖ ಭರಿಸುವ ಶಕ್ತಿ ನೀಡಲೆಂದು ದೇವರಲ್ಲ್ಲಿ ಪ್ರಾರ್ಥಿಸುತ್ತೇನೆ.
ಈಗಾಗಲೇ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಗಳಂತೆ ಪರಿಹಾರವನ್ನು ನೀಡಲು ಮತ್ತು ಆ ಗುಡ್ಡದ ಪ್ರದೇಶದಲ್ಲಿರುವ ಜನರಿಗೆ ಜಿಲ್ಲಾಡಳಿತ ವತಿಯಿಂದ ಬೋಂಡಂತಿಲ್ಲ ಗ್ರಾಮದ ಸರ್ವೇ ನಂ. 102 ರಲ್ಲಿ ಗುರುತಿಸಲಾದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಸ್ಥಳಾಂತರಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುತ್ತೇನೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.












Click it and Unblock the Notifications