ಖೈದಿಗಳ ಪಾಲಿಗೆ ಧರೆಗಿಳಿದ ಸ್ವರ್ಗ ಮಂಗಳೂರು ಜೈಲು
ಮಂಗಳೂರು, ಅಕ್ಟೋಬರ್ 19: ಚಿಕನ್ ಬಿರಿಯಾನಿ, ಒಂದೇ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಸುಮಾರು 200 ಜನರಿಗಾಗುವಷ್ಟು ಅಕ್ಕಿ ಕಡುಬು, ದೊಡ್ಡ ಗಾತ್ರದ ಪಾತ್ರೆ ತುಂಬಾ ಕರಾವಳಿಯ ಸ್ಪೆಷಲ್ ಫಿಶ್ ಪುಳಿಮುಂಚಿ, ಭಾರೀ ಪ್ರಮಾಣದ ತಂಬಾಕು, ಗುಟ್ಕಾ, ಸಿಗರೇಟ್ ಪ್ಯಾಕೇಟ್, ಪ್ಲಾಸ್ಟಿಕ್ ಗೋಣಿ ತುಂಬಾ ಕಲ್ಲಂಗಡಿ..
ಇದೆಲ್ಲವೂ ಕಾರ್ಯಕ್ರಮದ ಅಥವಾ ಪಾರ್ಟಿಯ ತಯಾರಿ ಅಂದು ಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಇವೆಲ್ಲ ಯಾವುದೋ ಕಾರ್ಯಕ್ರಮಕ್ಕೆ ತಂದ ಸಾಮಾನುಗಳಲ್ಲ. ಬದಲಾಗಿ ಮಂಗಳೂರು ಜೈಲಿನ ಒಳಗೆ ಸಾಗಿಸಲಾಗುತ್ತಿರುವ ವಸ್ತುಗಳು.
ಖೈದಿಗಳ ಭೇಟಿಗೆ ಬರುವ ಅವರ ಸಂಬಂಧಿಕರು ಹಾಗೂ ಸ್ನೇಹಿತರು ಜೈಲಿನೊಳಗೆ ಯಾವುದೇ ಅಡ್ಡಿಯಿಲ್ಲದೆ ಈ ಎಲ್ಲ ವಸ್ತುಗಳನ್ನು ನಿರಾತಂಕವಾಗಿ ಸಾಗಿಸುತ್ತಿದ್ದಾರೆ.
ಹೀಗೆ ಮಂಗಳೂರು ಜೈಲು ಖೈದಿಗಳ ಪಾಲಿಗೆ ಸ್ವರ್ಗ ಅನ್ನೋದು ಮತ್ತೆ ಸಾಬೀತಾಗಿದೆ. ಪೊಲೀಸರ ಸಮ್ಮುಖದಲ್ಲೇ ಎಲ್ಲವೂ ಖುಲ್ಲಾಂ ಖುಲ್ಲಾ ನಡೆಯುತ್ತಿದ್ದರೂ, ಹಿರಿಯ ಅಧಿಕಾರಿಗಳು ಮಾತ್ರ ಏನೂ ಗೊತ್ತೇ ಇಲ್ಲ ಎನ್ನುವಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಜೈಲಲ್ಲೇ ಭೂರಿ ಭೋಜನ
ಸೇಬು, ದಾಳಿಂಬೆ, ಕಿತ್ತಾಳೆ, ಅನಾನಸು, ಜಿಲೇಬಿ, ಸಾಟು, ಅಕ್ಕಿ ಗೋಣಿ, ಬೆಳ್ತಿಗೆ ಅಕ್ಕಿ, ನೀರುಳ್ಳಿ, ಮೆಣಸು, ಟೊಮೆಟೋ, ಸೌತೆಕಾಯಿ, ಕೊತ್ತಂಬರಿ, ತೊಂಡೆ ಕಾಯಿ ಸಹಿತ ದಿನದ ಅಡುಗೆಗೆ ಬೇಕಾಗುವ ವಿವಿಧ ಸಾಮಗ್ರಿಗಳು ನಿರಾಂತಕವಾಗಿ ಒಳಗೆ ಸಫ್ಲೈ ಆಗುತ್ತಿವೆ. ಅಷ್ಟೇ ಅಲ್ಲ ಸುಮಾರು 200 ಮಂದಿಗೆ ಬಡಿಸುವಷ್ಟು ಉಪ್ಪಿನ ಕಾಯಿಯಯ ಭರಣಿಗಳನ್ನು ಜೈಲಿನೊಳಗೆ ಕಳುಹಿಸಲಾಗುತ್ತಿದೆ.
ಹಲ್ಲು ಕಿತ್ತ ಹಾವುಗಳಾದ್ರಾ ಜೈಲಾಧಿಕಾರಿಗಳು?
ಹಲ್ಲೆ,ಕೊಲೆ, ಡ್ರಗ್ಸ್ ವ್ಯವಹಾರ ಸಹಿತ ವಿವಿಧ ಗಂಭೀರ ಕೃತ್ಯಗಳಿಂದ ರಾಜ್ಯದ ಅಪಾಯಕಾರಿ ಜೈಲುಗಳಲ್ಲೊಂದು ಎಂದು ಗುರುತಿಸಲಾಗಿರುವ ಮಂಗಳೂರು ಜೈಲಿನಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಜೈಲಾಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಗಾಂಜಾ ಚಟದಲ್ಲಿ ಖೈದಿಗಳು
ಯಾಕಂದ್ರೆ ಈಗಾಗಲೇ ಗಾಂಜಾ ಚಟ ಅಂಟಿಸಿಕೊಂಡಿರುವ ವಿಚಾರಣಾಧೀನ ಖೈದಿಗಳಿಗೆ ಒಂದು ದಿನ ಗಾಂಜಾ ಸಿಗದಿದ್ದರೆ ವ್ಯಗ್ರರಾಗಿ ವರ್ತಿಸುತ್ತಾರೆ. ಸಹಖೈದಿಗಳ ಮೇಲೆಯೂ ಹಲ್ಲೆ ನಡೆಸುತ್ತಾರೆ.
ಇದಲ್ಲದೆ ಖೈದಿಗಳು ಜೈಲಿನಲ್ಲಿ ಸುಖು ಪುರುಷರಂತೆ ಕಾಲ ಕಳೆಯುತ್ತುದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಎರಡು ಕಳ್ಳತನ ಪ್ರಕರಣದ ಆರೋಪಿ ರವೂಫ್ ಹರೇಕಳ ಎಂಬ ಖೈದಿಯಿಂದ ರೌಡಿಯೋರ್ವ ಕಾಲೊತ್ತಿಸಿಕೊಳ್ಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಬ್ಬಂದಿ ಕೊರತೆ
ಮಂಗಳೂರು ಕೇಂದ್ರ ಕಾರಾಗೃಹದ ಭದ್ರತೆಯನ್ನು ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ವಹಿಸಿಕೊಂಡಿದ್ದು, ಇವರಲ್ಲಿ ಸಿಬ್ಬಂದಿ ಕೊರತೆಯೂ ಸಾಕಷ್ಟಿದೆ.
ಜೈಲಿನಲ್ಲಿ ಖೈದಿಗಳೇ ಪೊಲೀಸರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ದರ್ಪವನ್ನು ಬೆಳೆಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಾಲ್ಕು ತಿಂಗಳ ಹಿಂದೆ ಗೃಹ ರಕ್ಷಕ ದಳದ 15 ಸಿಬ್ಬಂದಿಯನ್ನು ಜೈಲಿನ ಭದ್ರತೆಗೆ ನಿಯೋಜಿಸಲಾಗಿತ್ತು. ಆದರೆ ಗೃಹ ರಕ್ಷಕ ದಳ ಸಿಬ್ಬಂದಿಗೆ ನಾಲ್ಕು ತಿಂಗಳಿನಿಂದ ಸಂಬಳವೇ ಸಿಕ್ಕಿಲ್ಲ.
ಜೈಲು ಹಕ್ಕಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ
ಜೈಲಿನ ಸೆಲ್ ಒಳಗೆ ಖೈದಿಗಳಿಗೆ ಸ್ವತಃ ಅಡುಗೆ ತಯಾರಿಸುವ ವ್ಯವಸ್ಥೆಯೂ ಇರುವುದಾಗಿ ಮಾಹಿತಿ ಕೂಡಾ ಇದೆ. ಹೀಗೆ ಮಂಗಳೂರಿನ ಜೈಲು ಹಕ್ಕಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಪೊಲೀಸ್ ಇಲಾಖೆ ದಯಪಾಲಿಸಿದೆ.