ದ.ಕ ಮತ್ತು ಉಡುಪಿ ಹಿಂದುತ್ವದ ಫ್ಯಾಕ್ಟರಿ, ಕೋಮುವಾದ ಹುಟ್ಟುವ ಲ್ಯಾಬೋರೇಟರಿ-ಸಿದ್ದರಾಮಯ್ಯ
ಮಂಗಳೂರು, ಜನವರಿ 6: ದ.ಕ ಮತ್ತು ಉಡುಪಿ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ. ಕೋಮುವಾದ ಹುಟ್ಟುವ ಲ್ಯಾಬೋರೇಟರಿ ಮಂಗಳೂರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳೂರಿನ ಹರೇಕಳದಲ್ಲಿ ನಡೆದ ಕಾಂಗ್ರೆಸ್ನ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯಲ್ಲಿ ಭಾಷಣ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರಾವಳಿ ಹಿಂದುತ್ವದ ಫ್ಯಾಕ್ಟರಿ ಆಗಿದೆ. ಮಂಗಳೂರನ್ನು ಕೋಮುವಾದದ ಲ್ಯಾಬೋರೇಟರಿ ಆಗಿ ಬಿಜೆಪಿ ಮಾರ್ಪಾಟು ಮಾಡಿದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಮಾತು ಮುಂದುವರಿಸಿದ ಅವರು, ಬಿಜೆಪಿಯವರು ಚುನಾವಣೆ ಹೊತ್ತಲ್ಲಿ ಬಹಳಷ್ಟು ಭರವಸೆ ಕೊಡುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಭರವಸೆಗಳನ್ನು ಮರೆತು ಸಮಾಜ ಒಡೀತಾರೆ. ಭಾರತ ಬಹುತ್ವದ ದೇಶ, ಅನೇಕ ಜಾತಿ, ಧರ್ಮ, ಸಂಸ್ಕೃತಿ ಇದೆ. ಬಿಜೆಪಿಗೆ ಅಂಬೇಡ್ಕರ್ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಬಿಜೆಪಿಗೆ ಸಮಾನತೆ ಕೊಡುವುದು, ಅವಕಾಶ ಕೊಡುವುದು ಇಷ್ಟ ಇಲ್ಲ. ಅವರಿಗೆ ಅಸಮಾನತೆ, ಜಾತಿ ವ್ಯವಸ್ಥೆ ಮೂಲಕ ಎತ್ತಿ ಕಟ್ಟುವ ಕೆಲಸ ಆಗಬೇಕು ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದು ಅಂತಾ ಹೇಳಿದ್ದರು
ಅನಂತ ಕುಮಾರ್ ಹೆಗಡೆ ಗ್ರಾ.ಪಂ ಸದಸ್ಯನಾಗೋದಕ್ಕೂ ನಾಲಾಯಕ್. ಆ ವ್ಯಕ್ತಿ ನಾವು ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದು ಅಂತಾ ಹೇಳಿದ್ದರು. ಆಗ ಬಿಜೆಪಿಗೆ ಅಮಿತ್ ಶಾ ಅಧ್ಯಕ್ಷ, ಮೋದಿ ದೇಶದ ಪ್ರಧಾನಿಯಾಗಿದ್ದರು. ಇವರ ಮೇಲೆ ಅಮಿತ್ ಶಾ ಅಥವಾ ಮೋದಿ ಶಿಸ್ತಿನ ಕ್ರಮ ತೆಗೊಂಡ್ರಾ..? ಇದರ ಅರ್ಥ, ಇವರೇ ಅನಂತ್ ಕುಮಾರ್ ಹೆಗಡೆ ಬಾಯಲ್ಲಿ ಹೇಳಿಸಿದ್ದು. ಈ ಅನಂತ ಕುಮಾರ್ ಹೆಗಡೆ ಪರಮೇಶ ಮೇಸ್ತ ಮರ್ಡರ್ ಆಗಿದೆ ಅಂತ ಅಪಪ್ರಚಾರ ಮಾಡಿದ. ಅದೂ ಕಾಂಗ್ರೆಸ್ನವರೇ ಮಾಡಿದ್ದಾರೆ ಅಂತ ಹೇಳಿದ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಆರ್.ಎಸ್.ಎಸ್ ಕೈ ಗೊಂಬೆ
ನಾನು ತಕ್ಷಣ ಪರಮೇಶ ಮೇಸ್ತ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟೆ. ಆದರೆ ಈಗ ಇದು ಕೊಲೆಯಲ್ಲ, ಆಕಸ್ಮಿಕ ಸಾವು ಅಂತ ಸಿಬಿಐ ವರದಿ ಬಂದಿದೆ. ಈಗ ಅನಂತ ಕುಮಾರ್ ಹೆಗಡೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ ಬೇಡ್ವಾ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗಳಾಗಿದೆ. ಒಂದು ಧರ್ಮದ ಕೊಲೆಯಾದ ಜಾಗಕ್ಕೆ ಹೋಗಿ ಪರಿಹಾರ ಕೊಡುತ್ತಾರೆ. ಇನ್ನೊಂದು ಧರ್ಮದವರತ್ರ ಹೋಗಲ್ಲ, ಇದು ಯಾರಪ್ಪನ ಮನೆಯ ದುಡ್ಡು. ಸಿಎಂ ನೋಡಕ್ಕೂ ಹೋಗಲ್ಲ, ಪರಿಹಾರ ಘೋಷಣೆ ಮಾಡಲ್ಲ. ಈ ಮುಖ್ಯಮಂತ್ರಿ ಆರ್.ಎಸ್.ಎಸ್ ಕೈ ಗೊಂಬೆ ಎಂದು ವ್ಯಂಗ್ಯವಾಡಿದ್ದಾರೆ.
ಯಕ್ಷಗಾನದಲ್ಲೂ ಬಿಜೆಪಿ ವಿಚಾರ ಪ್ರಸ್ತಾಪಿಸಿ ಅಂತಾನಂತೆ
ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಒಬ್ಬ ವಿಧೂಷಕ. ಅವನನ್ನ ಹೇಗೆ ಅಧ್ಯಕ್ಷ ಮಾಡಿದ್ದಾರೋ ಗೊತ್ತಿಲ್ಲ. ಅವನು ಯಕ್ಷಗಾನದಲ್ಲೂ ಬಿಜೆಪಿ ವಿಚಾರ ಪ್ರಸ್ತಾಪಿಸಿ ಅಂತಾನಂತೆ. ಒಂದು ಕಲೆ, ಸಂಸ್ಕೃತಿಯಲ್ಲಿ ಹಿಂದುತ್ವ ತೂರುವ ಇವರಿಗೆ ನಾಚಿಕೆ ಇದ್ಯಾ..? ಎಂದು ನಳೀನ್ ಕುಮಾರ್ ಕಟೀಲ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇಡೀ ದೇಶದಲ್ಲಿ 40% ಕಮಿಷನ್ ಸರ್ಕಾರ ಎಂದು ಚರ್ಚೆ ಆಗುತ್ತಿದೆ
ಇನ್ನು ವಿಧಾನಸೌಧದ ಗೋಡೆಗಳೂ ಲಂಚ ಲಂಚ ಎಂದು ಪಿಸುಗುತ್ತಿದೆ. ಇಡೀ ದೇಶದಲ್ಲಿ 40% ಕಮಿಷನ್ ಸರ್ಕಾರ ಎಂದು ಚರ್ಚೆ ಆಗುತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಪತ್ರ ಬರೆದು ವರ್ಷ ಕಳೆದರೂ ಮೋದಿ ತನಿಖೆ ಮಾಡಿಸಿಲ್ಲ. ಎಲ್ಲಾ ಕಡೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಂತೋಷ್ ಪಾಟೀಲ್ ಈಶ್ವರಪ್ಪ ಹೆಸರು ಬರೆದು ಸತ್ತರೂ ಮೂರೇ ತಿಂಗಳಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಪ್ರದೀಪ್ ಎನ್ನುವವನು ಡೆತ್ ನೋಟ್ನಲ್ಲಿ ಲಿಂಬಾವಳಿ ಹೆಸರು ಬರೆದಿದ್ದಾನೆ. ಇಂತಹ ಕೊಲೆ ಗಡುಕ ಸರ್ಕಾರ ಇರಬೇಕಾ ಬೇಡ್ವಾ ಎಂದು ಜನ ತೀರ್ಮಾನಿಸಬೇಕು. ಮಂಗಳೂರು, ಉಡುಪಿ ಜನ ರಾಜಕೀಯವಾಗಿ ಪ್ರಬುದ್ಧರು. ಕೋಮುವಾದಿ ಬಿಜೆಪಿಯನ್ನು ಬೇರು ಸಹಿತ ಕಿತ್ತೆಸೆಯುವ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಜನರಿಗೆ ಮನವಿ ಮಾಡಿದ್ದಾರೆ.