ಭಾನುವಾರ ಮುನ್ನೂರು ಗ್ರಾಮಡೊಂಜಿ ಗೌಜಿ
ಮಂಗಳೂರು, ನ.7 : ಸೌಹಾರ್ದ ಕಲಾವಿದರು ಕುತ್ತಾರು ಹಾಗೂ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಇವರ ಜಂಟಿ ಸಹಯೋಗದಲ್ಲಿ ಮುನ್ನೂರು ಗ್ರಾಮಡೊಂಜಿ ಗೌಜಿ ನವೆಂಬರ್ 9ರ ಭಾನುವಾರ ದೆಪ್ಪೆಲಿಮಾರುಗದ್ದೆಯಲ್ಲಿ ನಡೆಯಲಿದೆ.
ಯುವಜನರನ್ನು ಜಾತಿ, ಧರ್ಮ, ಭಾಷೆ, ಗಡಿಯ ಎಲ್ಲೆಯನ್ನು ಮೀರಿ ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ. ಆದರೆ, ಇಂದು ಯುವಜನತೆಯನ್ನು ಕ್ರೀಡಾಕೂಟದ ಮೂಲಕ ಒಗ್ಗೂಡಿಸಿ ಸೌಹಾರ್ದ ವಾತಾವರಣವನ್ನು ಸೃಷ್ಟಿಸುವ ಕೆಲಸ ಸಮಂಜಸವಾಗಿ ನಡೆಯುತ್ತಿಲ್ಲ. ಆದ್ದರಿಂದ ಗ್ರಾಮೀಣ ಸಂಸ್ಕೃತಿ, ಇತಿಹಾಸವನ್ನು ಉಳಿಸಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಗ್ರಾಮಡೊಂಜಿ ಗೌಜಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಗೌಜಿಯಲ್ಲಿ ವಿಶೇಷ ಆಕರ್ಷಣೆಯಾಗಿ ಕೋಣಗಳ ಓಟ, ಗ್ರಾಮೀಣ ಬದುಕಿನ ವಸ್ತು ಪ್ರದರ್ಶನ ನಡೆಯಲಿದೆ. ತಂಡದ ವಿಭಾಗದಲ್ಲಿ ಕೆಸರಿಯಲ್ಲಿ ಹಗ್ಗ-ಜಗ್ಗಾಟ, ಕೆಸರಿನಲ್ಲಿ ಚೆಂಡೆಸತ, ಕೆಸರಿನಲ್ಲಿ ರಿಲೆ ಸ್ಪರ್ಧೆಗಳು ನಡೆಯಲಿವೆ.
ವೈಯಕ್ತಿಕ ವಿಭಾಗದ ಕ್ರೀಡಾಕೂಟದಲ್ಲಿ ಕೆಸರಿನಲ್ಲಿ ಓಟ, ಕೆಸರಿನಲ್ಲಿ ಮೂರು ಕಾಲು ಓಟ, ಮೀನು ಹಿಡಿಯುವುದು, ಕೆಸರಿನಲ್ಲಿ ಮಡಕೆ ಒಡೆಯುವುದು, ಚಮಚದಲ್ಲಿ ಲಿಂಬೆ, ಸೋಗೆ ಎಳೆಯುವುದು, ಅಕ್ಕಿಮುಡಿ ಕಟ್ಟುವುದು, ತೆಂಗಿನ ಗರಿಯಿಂದ ಆಕೃತಿ ರಚನೆ, ಮಣ್ಣಿನಿಂದ ಆಕೃತಿ ರಚನೆ, ಬುಟ್ಟಿ ಹೆಣೆಯುವುದು, ತೆಂಗಿನಗರಿ ಹೆಣೆಯುವುದು, ನಿಧಿ ಶೋಧ ಸ್ಪರ್ಧೆಗಳು ನಡೆಯಲಿವೆ.

ಎಲ್ಲಾ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುನ್ನೂರು ಗ್ರಾಮಡೊಂಜಿಯಲ್ಲಿ ಪಾಲ್ಗೊಳ್ಳಬೇಕು ಎಂದು ವ್ಯವಸ್ಥಾಪಕರು ಮನವಿ ಮಾಡಿದ್ದಾರೆ. ಎಲ್ಲಾ ಕ್ರೀಡಾಭಿಮಾನಿಗಳಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.












Click it and Unblock the Notifications