ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ಗೆ ಜಾಮೀನು
ಮಂಗಳೂರು, ಅಕ್ಟೋಬರ್ 07 : ಪುತ್ತೂರು ಪಿಎಸ್ಐ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿ ಬಂಧನಕ್ಕೊಳಗಾಗಿದ್ದ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಅವರಿಗೆ ಇಂದು (ಶನಿವಾರ) ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಸೆಪ್ಟೆಂಬರ್ 15ರಂದು ಪುತ್ತೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ, ಪೊಲೀಸ್ ಅಧಿಕಾರಿಗೆ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಕಾರಂತ್ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 20ರಂದು ಎಫ್ಐಆರ್ ದಾಖಲು ಮಾಡಲಾಗಿತ್ತು.

ಹೊರ ರಾಜ್ಯಕ್ಕೆ ತೆರಳಿದ್ದ ಕಾರಂತ್, ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಅವರನ್ನು ಬಂಧಿಸಲಾಗಿತ್ತು.
ಸೆಕ್ಷನ್ 41 ರ ಅಡಿ ಆರೋಪಿಗೆ ನೊಟೀಸ್ ಜಾರಿ ಮಾಡದೇ ಬಂಧನ ಮಾಡಿರುವುದು, ನ್ಯಾಯಾಲಯಕ್ಕೆ ಸತತ ರಜೆ ಮತ್ತು ಜಗದೀಶ್ ಕಾರಂತ್ ಅವರ ಆರೋಗ್ಯ ಸ್ಥಿತಿ ಗಮನಿಸಿ ನ್ಯಾಯಾಧೀಶರು ಕಾರಂತರಿಗೆ ಮದ್ಯಂತರ ಜಾಮೀನು ಮಂಜೂರು ಮಾಡಿದ್ದರು.
ಇದೇ ಅಕ್ಟೋಬರ್ 3 ರಂದು ಪ್ರಕರಣದ ಕುರಿತು ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಇಂದು ಜಗದೀಶ್ ಕಾರಂತ್ ಅವರಿಗೆ ಪೂರ್ಣಾವಧಿ ಜಾಮೀನು ನೀಡಿದೆ.
ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಕಾರಂತ್, "ಇದು ಸತ್ಯಕ್ಕೆ ಸಂದ ಜಯವಾಗಿದ್ದು, ಸರಕಾರ ದುರುದ್ದೇಶ ಪೂರಕವಾಗಿ ಮಾಡಿದಂತಹ ಕೇಸು ಇದಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಯತ್ನವನ್ನು ಪೊಲೀಸ್ ಇಲಾಖೆಯ ಮೂಲಕ ಸರಕಾರ ನಡೆಸುತ್ತಿದೆ. ಮತೀಯವಾಗಿ ಗುರುತಿಸಿಕೊಂಡಿರುವ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್ ಐ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.












Click it and Unblock the Notifications