ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಾ ಕುಳಾಯಿ ಕ್ರಿಮಿನಲ್ ಕೇಸ್
ಮಂಗಳೂರು ಏಪ್ರಿಲ್ 14: ಕಾಂಗ್ರೆಸ್ ವಿರುದ್ಧ ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಚಾರ್ಜ್ಶೀಟ್ನಲ್ಲಿ ಮಂಗಳೂರಿನ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ಭಾವಚಿತ್ರವನ್ನು ತಪ್ಪಾಗಿ ಬಳಸಿದ್ದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ತಮ್ಮ ಚಿತ್ರ ಬಳಸಿಕೊಂಡಿದ್ದರ ವಿರುದ್ಧ ಪ್ರತಿಭಾ ಕುಳಾಯಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸಹಿತ ಐವರ ವಿರುದ್ಧ ಮಂಗಳೂರಿನ ಜೆ.ಎಂ.ಎಫ್.ಸಿ 2ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.
ಸಣ್ಣ ಪುಸ್ತಕ ನಿಭಾಯಿಸದ ಬಿಜೆಪಿ ದೇಶ ಮುನ್ನಡೆಸುತ್ತಾ: ಪ್ರತಿಭಾ ಕುಳಾಯಿ
ಬಿಜೆಪಿ ಬಿಡುಗಡೆ ಮಾಡಿದ್ದ ರಾಜ್ಯ ಸರಕಾರದ ವಿರುದ್ಧದ ಚಾರ್ಜ್ಶೀಟ್ನಲ್ಲಿ ತನ್ನ ಫೋಟೊ ಬಳಸುವ ಮೂಲಕ ಮಾನಹಾನಿ ಮಾಡಲಾಗಿದೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯೂ ಆಗಿರುವ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಾ ಅವರು ಇದಕ್ಕೂ ಮುನ್ನ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್ .ಸುರೇಶ್ ಅವರಿಗೆ ದೂರು ನೀಡಿದ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಬಿಬಿಎಂಪಿ ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಅವರ ಸೀರೆ ಎಳೆದಾಡಿದ್ದ ಘಟನೆಯ ವಿವರವನ್ನು ಬಿಜೆಪಿ ಬಿಡುಗಡೆಗೊಳಿಸಿದ್ದ ಚಾರ್ಜ್ಶೀಟ್ನಲ್ಲಿ ನೀಡಲಾಗಿತ್ತು. ಆದರೆ, ಅದರಲ್ಲಿ ಮಂಜುಳಾ ನಾರಾಯಣ ಸ್ವಾಮಿ ಅವರ ಬದಲು ಪ್ರತಿಭಾ ಕುಳಾಯಿ ಅವರ ಚಿತ್ರ ಪ್ರಕಟಿಸಿ ಬಿಜೆಪಿ ಯಡವಟ್ಟು ಮಾಡಿಕೊಂಡಿತ್ತು.
ಪ್ರತಿಭಾ ಕುಳಾಯಿ ಅವರು ಸಲ್ಲಿಸಿರುವ ದೂರಿನ ವಿಚಾರಣೆ ಏಪ್ರಿಲ್ 19 ರಂದು ನಡೆಯಲಿದೆ.