ಮಂಗಳೂರು ಉದ್ಯಮಿ ಹತ್ಯೆಗೆ ಸ್ಕೆಚ್ - ಮೂವರು ಅಂದರ್
ದೇವಸ್ಥಾನದ ಆಡಳಿತ ಕೈತಪ್ಪಿ ಹೋಯಿತೆಂಬ ಕಾರಣಕ್ಕೆ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉದ್ಯಮಿ ಹತ್ಯೆಗೆ ಸ್ಕೆಚ್ ಹಾಕಿದ್ದು ಬಯಲಾಗಿದೆ. ಈ ಮಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಂಗಳೂರು, ಏಪ್ರಿಲ್ 7: ಮಂಗಳೂರಿನ ಉದ್ಯಮಿಯೊಬ್ಬರ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಮೂವರನ್ನು ಬಂಧಿಸಲಾಗಿದೆ.
ಇತಿಹಾಸ ಪ್ರಸಿದ್ದ ಪೆರಾರ ಶ್ರೀಬ್ರಹ್ಮ ಬಲಾಂಡಿ ಕ್ಷೇತ್ರದ ಆಡಳಿತ ಕೈತಪ್ಪಿ ಹೋಯಿತೆಂಬ ಕಾರಣಕ್ಕೆ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉದ್ಯಮಿ ಹತ್ಯೆಗೆ ಸ್ಕೆಚ್ ಹಾಕಿದ್ದು ಬಯಲಾಗಿದೆ. ಈ ಸಂಬಂಧ ನಗರದ ಸಿಸಿಬಿ ಪೊಲೀಸ್ ತಂಡ ಮೂವರನ್ನು ಬಂಧಿಸಿ ಬಜ್ಪೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ದೈವಸ್ಥಾನದ ದರ್ಶನ ಪಾತ್ರಿ ಬಾಲಕೃಷ್ಣ, ಕೈಕಂಬದ ರಿಕ್ಷಾ ಚಾಲಕ ಲಕ್ಷ್ಮೀಶ , ನಟೋರಿಯಸ್ ಕ್ರಿಮಿನಲ್ ಮೂಡಬಿದ್ರೆ ಮೂಲದ ಅಶೋಕ ಆಳ್ವ ಬಂಧಿತರಾಗಿದ್ದು, ಇನ್ನಷ್ಟು ಮಂದಿಯ ಬಂಧನವಾಗುವ ಸಾಧ್ಯತೆಯಿದೆ.[ರಾಜ್ಯ ಸರ್ಕಾರದ ಕೃಪೆಗಾಗಿ ಕಾಯುತ್ತಿದ್ದಾರೆ ಬಾರ್ ಮಾಲಕರು]

ಪ್ರಕರಣದ ವಿವರ
ಪೆರಾರ ಬ್ರಹ್ಮ ಬಲಾಂಡಿ ದೈವಸ್ಥಾನವು ತಮಗೆ ಸೇರಬೇಕು. ತಮ್ಮ ಕುಟುಂಬದ ದೈವಸ್ಥಾನ ಎಂಬುದಾಗಿ ಎರಡು ಗುತ್ತಿನ ಮನೆತನಗಳು ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ನಡೆಸುತ್ತಿದ್ದವು . ಇದರ ವಿರುದ್ದ ಸುಧೀರ್ ಶೆಟ್ಟಿ ಎಂಬವರು ನ್ಯಾಯಾಲಯಕ್ಕೆ ಹೋಗಿದ್ದು, ಪೆರಾರ ಕ್ಷೇತ್ರವು ಇಡೀ ಪೆರಾರ ಊರಿಗೆ ಸಂಬಂಧಿಸಿದ್ದು ಎಂದು ಆಕ್ಷೇಪಣೆ ಸಲ್ಲಿಸಿದ್ದರು. ನ್ಯಾಯಾಲಯವು ಕ್ಷೇತ್ರವನ್ನು ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಸೇರಿಸಬೇಕೆಂದು ತೀರ್ಪು ನೀಡಿತ್ತು. ಅದರಂತೆ ಕೆಲ ವರ್ಷಗಳಿಂದ ದೈವಸ್ಥಾನವು ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಗೆ ಸೇರಿತ್ತು.
ಪೆರಾರ ಕ್ಷೇತ್ರದಲ್ಲಿ ಪುನರ್ ನವೀಕರಣ ಕಾರ್ಯ, ಜೀರ್ಣೋದ್ದಾರ ಕಾರ್ಯವು ಬರೋಬ್ಬರಿ 4.5 ಕೋಟಿ ರೂ. ವೆಚ್ಚದಲ್ಲಿ ನಡೆದಿತ್ತು. ಇದೆಲ್ಲವೂ ಉದ್ಯಮಿ ಸುಧೀರ್ ಶೆಟ್ಟಿಯವರ ನೇತೃತ್ವದಲ್ಲೇ ನಡೆದಿತ್ತು. ಹೀಗಾಗಿ ಅಧಿಕಾರ ಕೈತಪ್ಪಿದ ಕಾರಣಕ್ಕೆ ಒಳಗಿಂದೊಳಗೆ ಭಿನ್ನಮತ ಸ್ಪೋಟ ಗೊಂಡು ಸುಧೀರ್ ಶೆಟ್ಟಿಯವರ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಲಾಯಿತು ಎಂದು ಬಂಧಿತರು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.[ನಾಳೆ ತಂದೆಯ ಅಸ್ಥಿ ವಿಸರ್ಜನೆಗೆ ಐಶ್ವರ್ಯಾ ರೈ ದಂಪತಿ ಮಂಗಳೂರಿಗೆ]
ದೇವಳದ ಪಾತ್ರಿ ಬಾಲಕೃಷ್ಣನ ಮೂಲಕ ಕೈಕಂಬದ ರಿಕ್ಷಾ ಚಾಲಕ ಲಕ್ಷ್ಮೀಶನನ್ನು ಸಂಪರ್ಕಿಸಿದ್ದ ತಂಡ ಕುಖ್ಯಾತ ಕ್ರಿಮಿನಲ್ ಅಶೋಕ್ ಆಳ್ವನಿಗೆ ಬರೋಬ್ಬರಿ 25 ಲಕ್ಷ ರೂ. ಸುಪಾರಿ ಕೊಟ್ಟು ಹತ್ಯೆಗೈಯಲು ಆದೇಶಿಸಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಸಿಸಿಬಿ ಪೊಲೀಸ್ ತಂಡ ಮೂವರನ್ನು ಬಂಧಿಸಿ ನಗದು, ಮೊಬೈಲ್ ಮತ್ತು ವಾಹನವನ್ನು ವಶಪಡಿಸಿಕೊಂಡಿದೆ.
ಉದ್ಯಮಿ ಸುಧೀರ್ ಶೆಟ್ಟಿಯವರ ಮಗನ ವಿವಾಹ ಕಾರ್ಯ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಅವರು ಓಡಾಟ ನಡೆಸುತ್ತಿದ್ದರು. ಇದೇ ಸಮಯಕ್ಕೆ ಅವರನ್ನು ಹತ್ಯೆಗೈಯ್ಯಲು ಸ್ಕೆಚ್ ಹಾಕಲಾಗಿತ್ತು ಎಂದು ತಿಳಿದು ಬಂದಿದೆ. ಬಿಜ್ಪೆ ಸರ್ಕಲ್ ಇನ್ಸ್ಪೆಕ್ಟರ್ ಟಿ. ಡಿ. ನಾಗರಾಜ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.












Click it and Unblock the Notifications