ಮಂಗಳೂರು ಸ್ಫೋಟ: ಆಟೋ ಪ್ರಯಾಣಿಕನ ತನಿಖೆ ವೇಳೆ ಅಸ್ಪಷ್ಟ ಮಾಹಿತಿ!
ಮಂಗಳೂರು, ನ. 20: ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಪ್ರಕರಣ ತನಿಖೆ ತೀವ್ರಗೊಂಡಿದೆ. ಪ್ರಕರಣವನ್ನು ಭೇದಿಸಲು ಮಂಗಳೂರು ಪೊಲೀಸ್ ಕಮಿಷನರ್ ಮೂರು ತಂಡಗಳನ್ನು ರಚನೆ ಮಾಡಿದ್ದಾರೆ. ಸ್ಫೋಟದ ಜಾಡು ಹಿಡಿದು ತೆರಳಿರುವ ಮಂಗಳೂರು ಪೊಲೀಸರ ತಂಡ ಕಳೆದ ರಾತ್ರಿಯೇ ರಾಜ್ಯದ ವಿವಿಧ ಭಾಗಗಳಿಗೆ ತೆರಳಿದೆ.
ಇನ್ನು, ಮಂಗಳೂರಿನಲ್ಲಿ ನಡೆದ ಸ್ಫೋಟದ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), "ಸ್ಫೋಟವು ಆಕಸ್ಮಿಕವಲ್ಲ ಆದರೆ ಗಂಭೀರ ಹಾನಿಯನ್ನುಂಟುಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದಕ ಕೃತ್ಯವಾಗಿದೆ. ರಾಜ್ಯ ಪೊಲೀಸರು, ಕೇಂದ್ರ ಏಜೆನ್ಸಿಗಳೊಂದಿಗೆ ಸೇರಿ ತನಿಖೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿದೆ. ನಗರದ ಕಂಕನಾಡಿ ಪೊಲೀಸ್ ಠಾಣೆಯ ಬಳಿಯ ನಾಗುರಿಯಿಂದ ಪಂಪ್ವೆಲ್ ಕಡೆಗೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿತ್ತು. ಆಟೋದಲ್ಲಿ ಛಿದ್ರಗೊಂಡ ಕುಕ್ಕರ್ ಪತ್ತೆಯಾಗಿತ್ತು. ಆಟೋದಲ್ಲಿದ್ದ ಪ್ರಯಾಣಿಕನ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸ್ಫೋಟ ಸಂಭವಿಸಿ ಆಟೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಫೋಟದಲ್ಲಿ ಪ್ರಯಾಣಿಕ ಹಾಗೂ ಆಟೋ ಚಾಲಕ ಗಾಯಗೊಂಡಿದ್ದಾರೆ.

ಪ್ರಯಾಣಿಕನ ಬಾಕ್ಸ್, ಬ್ಯಾಗ್ನಿಂದ ಸ್ಫೋಟ!?
ಇನ್ನು, ಆಟೋದಲ್ಲಿ ಪ್ರಯಾಣ ಮಾಡಿದ ವ್ಯಕ್ತಿ ಬಗ್ಗೆ ಅನುಮಾನ ಹೆಚ್ಚಾಗಿದೆ. ಪ್ರಯಾಣಿಕನ ಬಳಿ ಪ್ರೇಮ್ ರಾಜ್ ಕನೋಗಿ ಎಂಬ ಹೆಸರಿನ ಐಡಿ ದಾಖಲೆ ಪತ್ತೆಯಾಗಿದೆ. ಆತನ ಬಳಿಯಿದ್ದ ಬಾಕ್ಸ್ ಮತ್ತು ಬ್ಯಾಗ್ನಿಂದಲೇ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆತ ಘಟನಾ ಸ್ಥಳದ 1 ಕಿ.ಮೀ ದೂರದ ನಾಗುರಿ ಬಳಿ ಆಟೋ ಹತ್ತಿದ್ದ. ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹದ ಅರ್ಧ ಭಾಗ ಸುಟ್ಟು ಹೋಗಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪೆಡಯುತ್ತಿದ್ದಾರೆ.

ಗೊಂದಲಕಾರಿ ಹೇಳಿಕೆ ನೀಡುತ್ತಿರುವ ಪ್ರಯಾಣಿಕ
ಸ್ಫೋಟಕ್ಕೆ ಕಾರಣ ಎನ್ನಲಾಗುತ್ತಿರುವ ಆಟೋ ಪ್ರಯಾಣಿಕ ತನಿಖೆ ವೇಳೆ ಅಸ್ಪಷ್ಟ ಮಾಹಿತಿ ನೀಡುತ್ತಿದ್ದಾರೆ. ಪೊಲೀಸರ ಎದುರು ಗೊಂದಲಕಾರಿ ಹೇಳಿಕೆ ನೀಡುತ್ತಿದ್ದು, ಒಮ್ಮೆ ತಾನು ಮೈಸೂರಿನಿಂದ ಬಂದಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ನನ್ನ ಅಣ್ಣ ಬಾಬುರಾವ್ಗೆ ಕರೆ ಮಾಡಿ ಎಂದು ದೂರವಾಣಿ ಸಂಖ್ಯೆ ನೀಡಿದ್ದ ಪ್ರಯಾಣಿಕ. ಆದರೆ, ಆ ನಂಬರ್ಗೆ ಕರೆ ಮಾಡಿದರೇ ಆತ ತನ್ನ ಸಂಬಂಧಿಕನೇ ಅಲ್ಲ, ಆತ ತನ್ನ ರೂಮ್ನಲ್ಲಿದ್ದ, ಬೆಂಗಳೂರಿಗೆ ಹೋಗ್ತೇನೆಂದು ಹೋಗಿದ್ದ, ಆತನ ಬಗ್ಗೆ ಬೇರೆ ಏನು ಗೊತ್ತಿಲ್ಲ ಎಂದು ಆ ವ್ಯಕ್ತಿ ಮಾಹಿತಿ ನೀಡಿದ್ದಾರೆ.

ಕುಕ್ಕರ್ ಒಳಭಾಗದಲ್ಲಿ ಮ್ಯಾಟ್ ಮಾದರಿ ವಸ್ತು ಪತ್ತೆ
ಇನ್ನು, ಸ್ಫೋಟಕ್ಕೆ ಕಾಣವಾಗಿರುವುದು ಕುಕ್ಕರ್ ಬಾಂಬ್ ಎಂಬ ಅನುಮಾನ ವ್ಯಕ್ತವಾಗಿದೆ. ಕುಕ್ಕರ್ನೊಳಗೆ ಬಾಂಬ್ ತಯಾರಿ ಮಾದರಿ ವಸ್ತು ಪತ್ತೆಯಾಗಿದೆ. ಕುಕ್ಕರ್ ಒಳಭಾಗದಲ್ಲಿ ನಾಲ್ಕು ಡ್ಯೂರೆಸೆಲ್ ಬ್ಯಾಟರಿ, ಸರ್ಕೀಟ್ ಮಾದರಿಯ ವೈರ್ ಸೇರಿದಂತೆ ಬ್ಲಾಸ್ಟ್ಗೆ ಬೇಕಾದ ಸಾಧನ ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಫೋಟಕ ಬಳಕೆ ಮಾಡಿರುವ ಸಾಧ್ಯತೆಯಿದೆ. ಈ ಹಿಂದೆ ಹೈದರಾಬಾದ್, ದೆಹಲಿಯಲ್ಲೂ ಕುಕ್ಕರ್ ಬಾಂಬ್ ಸ್ಫೋಟ ನಡೆದಿತ್ತು.
ಉನ್ನತ ಮಟ್ಟದ ತನಿಖೆಗೆ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದು, ಭಾನುವಾರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಘಟನೆಯ ನಂತರ, ವಿಧಿವಿಜ್ಞಾನ ತಂಡಗಳು ಮಾದರಿಗಳನ್ನು ಸಂಗ್ರಹಿಸಲು ಸ್ಥಳಕ್ಕೆ ಬಂದಿವೆ.

ಮತ್ತೆ ಸ್ಫೋಟದ ಸ್ಥಳಕ್ಕೆ ಆಟೋ ತಂದ ಪೊಲೀಸರು
ಮಂಗಳೂರು ಆಟೋ ಸ್ಫೋಟದ ತನಿಖೆಗೆ ಎನ್ಐಎ ತಂಡ ಆಗಮಿಸುವ ಸಾಧ್ಯತೆಯಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ. ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಫೋಟವಾಗಿರುವ ಕಾರಣ ರಾಜ್ಯ ಗೃಹ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
ಭಾನುವಾರ ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡವೂ ಮಂಗಳೂರಿಗೆ ಆಗಮಿಸಲಿದೆ. ಮಂಗಳೂರು ಪೊಲೀಸರು ಇಡೀ ಘಟನೆ ಬಗ್ಗೆ ಕೂಲಂಕುಶ ತನಿಖೆ ನಡೆಸಲಿದ್ದಾರೆ.
ಜೊತೆಗೆ ಆಟೋ ರಿಕ್ಷಾವನ್ನು ಮತ್ತೆ ಘಟನಾ ಸ್ಥಳಕ್ಕೆ ತರಲಾಗಿದ್ದು, ಆಟೋದ ಸುತ್ತ ಟೇಪ್ ಕಟ್ಟಿ ಭದ್ರಪಡಿಸಲಾಗಿದೆ. ಶನಿವಾರ ರಾತ್ರಿಯಿಂದ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಆಟೋವನ್ನು ಇರಿಸಲಾಗಿತ್ತು.












Click it and Unblock the Notifications