ಮಂಗಳೂರು: ರಾಷ್ಟ್ರೀಯ ಅಥ್ಲೆಟಿಕ್ಸ್ ಗೆ ಅದ್ದೂರಿ ಚಾಲನೆ
ಮಂಗಳೂರು, ಮೇ. 1: ಮಂಗಳೂರಿನಲ್ಲಿ ಮೇ 4 ರವರೆಗೆ ಕ್ರೀಡಾಪಟುಗಳ ಕಲರವ. 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯಶಿಪ್ ಗೆ ಚಾಲನೆ ದೊರೆತಿದ್ದು ಕ್ರೀಡಾ ಜಗತ್ತು ಅನಾವರಣಗೊಂಡಿದೆ.
ಬಲೂನುಗಳನ್ನು ಆಗಸಕ್ಕೆ ಹಾರಿ ಬಿಡುವ ಸಚಿವ ದೇಶಪಾಂಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರೀಡೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಈ ರಾಷ್ಟ್ರೀಯ ಕ್ರೀಡಾಕೂಟ ಆಯೋಜನೆಗೆ ಸಹಕಾರ ನೀಡಿದೆ ಎಂದು ಹೇಳಿದರು.[ಚಾಂಪಿಯನ್ ಷಿಪ್ ವಿಶೇಷಗಳೇನು]

ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಾತನಾಡಿ, ತುಳುನಾಡಿನ ಮಗನಾಗಿರುವ ನಾನು ಇಂತಹ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಕ್ರೀಡಾ ರಂಗದಲ್ಲಿ ಮಂಗಳೂರಿನ ಕೀರ್ತಿ ಇನ್ನಷ್ಟು ಎತ್ತರಕ್ಕೇರಲಿ ಎಂದರು.
ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಸಬಲೀಕರಣ ಸಚಿವ ಅಭಯಚಂದ್ರ ಜೈನ್, ಅರಣ್ಯ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹಾಜರಿದ್ದರು.

ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ, ಕರ್ನಾಟಕ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅಥ್ಲೆಟಿಕ್ಸ್ ಫೆಡರೇಶನ್ ಅಫ್ ಇಂಡಿಯಾದ ಅಧ್ಯಕ್ಷ ಆದಿಲ್ ಜೆ.ಸುಮಾರಿವಾಲಾ, ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ನಿನ ಅಧ್ಯಕ್ಷ ಮಂಜುನಾಥ ಭಂಡಾರಿ, ಯುವ ಸಬಲೀಕರಣ- ಕ್ರೀಡಾ ಇಲಾಖೆ ನಿರ್ದೇಶಕ ಎಚ್.ಎಸ್.ವೆಂಕಟೇಶ್, ಶಾಸಕ ಮೊಯಿದ್ದೀನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಜೆಸಿಂತಾ ಇಪಸ್ಥಿತರಿದ್ದರು.
ಕ್ರೀಡಾಕೂಟದ ಉದ್ಘಾಟನೆಗಿಂತ ಮೊದಲು ಆಕರ್ಷಕ ಮೆರವಣಿಗೆ ನಡೆಯಿತು. ಮೈಸೂರಿನ ಪೊಲೀಸ್ ಬ್ಯಾಂಡ್, ತಟ್ಟಿರಾಯ, ಕೊಂಬು-ಚೆಂಡೆ, ಬಣ್ಣದ ಕೊಡೆಗಳು, ಆಟಿ ಕಳೆಂಜ, ಕೇರಳದ ಚೆಂಡೆ, ಥೆಯ್ಯಂ, ಕುಡುಬಿ, ಯಕ್ಷಗಾನ, ಹುಲಿವೇಷ, ಕಲ್ಲಡ್ಕ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ವೀರಗಾಸೆ, ನಗಾರಿ ಮುಂತಾದುವುಗಳು ಜನಮನ ಸೆಳೆದವು.













Click it and Unblock the Notifications