ಕುಡ್ಲದ ಕಲಾವಿದನಿಗೆ ಫ್ರಾನ್ಸ್ ದೇಶದ ಹಬ್ಬಕ್ಕೆ ಆಮಂತ್ರಣ!
ಮಂಗಳೂರು, ಜುಲೈ 04: ಎಲ್ಲಿಯ ಫ್ರಾನ್ಸ್ ದೇಶದ ಡಿಫಿ ನಗರ ಎಲ್ಲಿಯ ಮಂಗಳೂರು ಎನ್ನುವ ಪುಟ್ಟ ಊರು ಎರಡಕ್ಕೂ ಸಂಬಂಧವೇ ಇಲ್ಲ. ಆದರೆ, ಕರಾವಳಿಯ ಕಲಾವಿದ ಈ ಎರಡು ನಗರವನ್ನು ಜೋಡಿಸುವ ಕೆಲಸ ಮಾಡಿದ್ದಾರೆ. ಕಲೆ ಹಾಗೂ ಕಲಾವಿದ ಮನಸ್ಸು ಮಾಡಿದರೆ ಎರಡು ಊರುಗಳಿಗೆ ಸಂಬಂಧ ಸೃಷ್ಟಿಸಬಹುದು ಎನ್ನುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ. ಕುಡ್ಲದ ಕಲಾವಿದ ದಿನೇಶ್ ಹೊಳ್ಳ ಅವರಿಗೆ ಫ್ರಾನ್ಸ್ ನ ಗಾಳಿಪಟ ಹಬ್ಬಕ್ಕೆ ಆಮಂತ್ರಣ ಸಿಕ್ಕಿದೆ.
ಫ್ರಾನ್ಸ್ ದೇಶದ ಡಿಫಿ ನಗರದಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಇಂಟರ್ ನ್ಯಾಷ್ ನಲ್ ಕೈಟ್ ಫೆಸ್ಟಿವಲ್ ನ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿದವರು ಮಂಗಳೂರಿನ ಕಲಾವಿದ ದಿನೇಶ್ ಹೊಳ್ಳ ಅವರು. ಕಳೆದ ಬಾರಿಯೂ ಇವರೇ ಅವರ ಆಮಂತ್ರಣ ಪತ್ರಿಕೆಯನ್ನು ವಿನ್ಯಾಸ ಮಾಡಿದರು ಎನ್ನುವುದು ವಿಶೇಷ.

ಫ್ರಾನ್ಸ್ಗೆ ಕಲಾವಿದನ ಲಿಂಕ್ : ಕಲಾವಿದ ದಿನೇಶ್ ಹೊಳ್ಳ ಟೀಂ ಮಂಗಳೂರು ಕೈಟ್ ತಂಡದ ಸದಸ್ಯ 2006 ರಲ್ಲಿ ಈ ತಂದ ಫ್ರಾನ್ಸ್ ದೇಶದಲ್ಲಿ ನಡೆಯುವ ಕೈಟ್ ಫೆಸ್ಟಿವಲ್ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದರು. ಇದೇ ಸಮಯದಲ್ಲಿ ಈ ತಂಡದ ಕಾರ್ಯವೈಖರಿಗಳು ವಿಶೇಷವಾಗಿ ಗಮನಸೆಳೆಯಿತು.
ಈ ಬಳಿಕ 2008ರಲ್ಲಿ ಮತ್ತೊಂದು ಸಲ ಕೈಟ್ ಫೆಸ್ಟಿವಲ್ ನಡೆದಾಗ ದಿನೇಶ್ ಹೊಳ್ಳ ಅವರಿಗೆ ಸ್ಥಳದಲ್ಲಿಯೇ ನಿಂತು ಲೈವ್ ಸ್ಕೆಚ್ಗೆ ಅವಕಾಶ ಕಲ್ಪಿಸಿಕೊಡಲಾಯಿತು. 2010ರಲ್ಲಿ ಮತ್ತೊಂದು ಡಿಫಿ ಫೆಸ್ಟಿವಲ್ ನಡೆದಾಗ ಇವರ ರೇಖಾ ಚಿತ್ರಗಳ ಪ್ರದರ್ಶನ ಹಾಗೂ ಲೈವ್ ಸ್ಕೆಚ್ ವಿಶೇಷ ಬೇಡಿಕೆಯನ್ನು ಸೃಷ್ಟಿಸಿತ್ತು.
2012ರಲ್ಲಿ ಮತ್ತೊಂದು ಸಲ ಕೈಟ್ ಫೆಸ್ಟಿವಲ್ ನಡೆದಾಗ ಡಿಫಿಯ ಕೈಟ್ ಫೆಸ್ಟಿವಲ್ ಸಂಘಟಕ ಸ್ಯಾಂಡ್ರಿನ್ ಸಫರ್ಗ್ ಹಾಗೂ ಅಲ್ಲಿಯ ಮೇಯರ್ ಎಸ್. ಜುಮೇಲ್ ಇಬ್ಬರು ಸೇರಿಕೊಂಡು ಮುಂದಿನ ಕೈಟ್ ಫೆಸ್ಟಿವಲ್ ಗೆ ನೀವೇ ಆಮಂತ್ರಣ ಪತ್ರಿಕೆಯನ್ನು ತಯಾರಿಸಿ ಕೊಡಬೇಕು ಎಂದು ವಿನಂತಿಸಿಕೊಂಡರು .
ಇದೇ ಮುಂದಿನ 2014ರಲ್ಲಿ ನಡೆದ ಕೈಟ್ ಫೆಸ್ಟಿವಲ್ನಲ್ಲಿ ಹೊಳ್ಳರ ರೇಖಾ ಚಿತ್ರಗಳಿರುವ ಆಮಂತ್ರಣ ಪತ್ರಿಕೆ ಆಯ್ಕೆಯಾಯಿತು. ಈ ಆಮಂತ್ರಣ ಪತ್ರಿಕೆಯಲ್ಲಿ ಭಾರತ ಹಾಗೂ ಫ್ರಾನ್ಸ್ನ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ನಡೆಯಿತು.

ಭಿನ್ನ ಹಾದಿಯ ವಿನ್ಯಾಸ: 2016ರ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 19 ರವರೆಗೆ ಫ್ರಾನ್ಸ್ ಡಿಫಿಯಲ್ಲಿ ನಡೆಯಲಿರುವ ಕೈಟ್ ಫೆಸ್ಟಿವಲ್ನಲ್ಲಿ ಈ ಬಾರಿ ಆಯ್ಕೆಯಾದ ವಿನ್ಯಾಸದಲ್ಲಿ ಫ್ರಾನ್ಸ್ ದೇಶದ ಸಂಸ್ಕೃತಿಯನ್ನು ಬಿಂಬಿಸಲಾಗಿದೆ. ಮುಖ್ಯವಾಗಿ ಡಿಫೀ ನಗರದಲ್ಲಿರುವ ಮೀನುಗಾರಿಕೆ ಬಂದರು, ದೋಣಿ , ಹಳೆಯ ಕಟ್ಟಡಗಳು ಹೊಳ್ಳರ ವಿನ್ಯಾಸದಲ್ಲಿ ಹೊರಬಂದಿದೆ.
ಮುಖ್ಯವಾಗಿ ಕೈ ಕುಸುರಿಯೇ ಈ ವಿನ್ಯಾಸದ ಜೀವಾಳ ಎನ್ನುವುದು ದಿನೇಶ್ ಹೊಳ್ಳ ಅವರ ಮಾತು. ಈ ಹಿಂದಿನ ಸಲ ಪೋಸ್ಟರ್ ಮಾಡಿದಾಗ ಅಲ್ಲಿ 3 ಸಾವಿರಕ್ಕೂ ಅಧಿಕ ಪೋಸ್ಟರ್ಗಳು ಮಗ್, ಟೀ-ಶರ್ಟ್, ಕ್ಯಾಪ್ಗಳು ದಿನೇಶ್ ಹೊಳ್ಳರ ಸಹಿಯೊಂದಿಗೆ ಮಾರಾಟವಾಗಿ ಸಂಘಟಕರಿಗೆ ಭರ್ತಿ 24 ಲಕ್ಷ ರೂ. ತಂದು ಕೊಟ್ಟಿತು. ಈ ಬಾರಿ 50 ಲಕ್ಷ ರೂ. ಹೊಂದಿಸುವ ಗುರಿಯನ್ನು ಸಂಘಟಕರು ಹೊಂದಿದ್ದಾರೆ ಎನ್ನುತ್ತಾರೆ ದಿನೇಶ್ ಹೊಳ್ಳ.












Click it and Unblock the Notifications