ನೇತ್ರಾವತಿಗೆ ಇಳಿದ ಮಂಗಳೂರು ವಿದ್ಯಾರ್ಥಿ ನೀರುಪಾಲು
ಬಂಟ್ವಾಳ, ಸೆಪ್ಟೆಂಬರ್ 6: ಗಣೇಶ ಚತುರ್ಥಿಯ ರಜೆ ಕಳೆಯಲು ಬಂಟ್ವಾಳಕ್ಕೆ ಬಂದಿದ್ದ ಮಂಗಳೂರಿನ ವಿದ್ಯಾರ್ಥಿ ನೇತ್ರಾವತಿ ನೀರಿನ ಆಳ ಅರಿಯದೆ, ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಕೈಕುಂಜೆ ರೈಲ್ವೆ ಸೇತುವೆ ಬಳಿ ಸೋಮವಾರ ನಡೆದಿದೆ.
ಮಂಗಳೂರು ತಾಲೂಕಿನ ನಂತೂರು ನಿವಾಸಿ ರಜನೀಕಾಂತ್(24) ಮೃತ ವಿದ್ಯಾರ್ಥಿ. ಮಂಗಳೂರು- ವಳಚ್ಚಿಲ್ ಪದವು ಶ್ರೀನಿವಾಸ್ ಕಾಲೇಜಿನಲ್ಲಿ ದ್ವಿತೀಯ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ಈತ, ಗಣೇಶ ಚತುರ್ಥಿ ಪ್ರಯುಕ್ತ ಕಾಲೇಜಿಗೆ ರಜೆ ಇದ್ದ ಕಾರಣ ಸೋಮವಾರ ಸ್ನೇಹಿತರ ಜೊತೆ ರಜಾ ಕಳೆಯಲು ಬಂಟ್ವಾಳಕ್ಕೆ ಬಂದಿದ್ದ.[ಎತ್ತಿನಹೊಳೆ: ಪಶ್ಚಿಮ ಘಟ್ಟದ ರಕ್ಷಣೆಗಾಗಿ ಯುನೆಸ್ಕೋಗೆ ಆಗ್ರಹ]

ಈ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಸ್ನೇಹಿತರ ಜತೆಗೂಡಿ ಮೂವರು ಕೈಕುಂಜೆ ರೈಲ್ವೆ ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಈಜು ಗೊತ್ತಿಲ್ಲದಿದ್ದರೂ ನೀರಿಗೆ ಇಳಿದಿದ್ದ ಈತ ನದಿಯ ಆಳ ತಿಳಿಯದೆ ಮುಳುಗಿ ಮೃತಪಟ್ಟಿದ್ದಾನೆ. ಜೊತೆಗಿದ್ದ ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದರೂ ಸಫಲರಾಗಲಿಲ್ಲ.
ಅವಘಡ ಸಂಭವಿಸಿದ ಸುದ್ದಿ ತಿಳಿಯುತ್ತಲೇ ಗೂಡಿನಬಳಿಯ ಮುಸ್ಲಿಂ ಯುವಕರು ತಕ್ಷಣ ಧಾವಿಸಿದ್ದು, ನೀರಿಗೆ ಧುಮುಕಿದ್ದಾರೆ. ಎಂಕೆ ರೋಡ್ ನಿವಾಸಿ ಮುಹಮ್ಮದ್ ಯಾನೆ ಮೊಮ್ಮು ಎಂಬವರು ಮೃತದೇಹವನ್ನು ಮೇಲೆತ್ತುವಲ್ಲಿ ಸಫಲರಾದರು. ಎಂಕೆ ರೋಡ್ ನಿವಾಸಿ ಇಬ್ರಾಹಿಂ, ಮಸೀದಿ ಬಳಿ ನಿವಾಸಿ ಚೆರಿಯಮೋನು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ.['ವೀರಪ್ಪ ಮೊಯ್ಲಿ, ಡಿವಿಎಸ್ ಗೆ ಖೇಲ್ ರತ್ನ ಪ್ರಶಸ್ತಿ ಕೊಡಿ']

ಮೃತದೇಹ ಮೇಲೆತ್ತಿದ ಮುಹಮ್ಮದ್ ಈ ಹಿಂದೆಯೂ ಇಂತಹ ಹಲವಾರು ಸಂದರ್ಭಗಳಲ್ಲಿ ಆಪದ್ಬಾಂಧವರಾಗಿ ಕಾರ್ಯ ನಿರ್ವಹಿಸಿರುವುದು ಸ್ಮರಣಾರ್ಹ. ಅವಘಡ ಸ್ಥಳದಲ್ಲಿ ಗೂಡಿನಬಳಿ ಮುಸ್ಲಿಂ ಯುವಕರ ಕಾರ್ಯಾಚರಣೆ ಶ್ಲಾಘನೆಗೆ ಕಾರಣವಾಗಿದೆ.[ಶನಿಪೂಜೆ ವೇಳೆ ಕರ್ತವ್ಯಕ್ಕೆ ಅಡ್ಡಿ: 20 ಆರೋಪಿಗಳ ಖುಲಾಸೆ]
ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.












Click it and Unblock the Notifications