ಕದ್ರಿ ದೇವಸ್ಥಾನಕ್ಕೆ ಪೊಲೀಸ್ ಭದ್ರತೆ ಕೇಳಿದ ಕಾರ್ಯನಿರ್ವಹಣಾಧಿಕಾರಿ
ಮಂಗಳೂರು, ನವೆಂಬರ್ 25: ಉಗ್ರರ ಟಾರ್ಗೆಟ್ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಎನ್ನುವುದು ಗೊತ್ತಾಗುತ್ತಿದ್ದಂತೆ ಎಲ್ಲರೂ ಅಲರ್ಟ್ ಆಗಿದ್ದಾರೆ. ಅತೀ ಹೆಚ್ಚು ಭಕ್ತರು ಆಗಮಿಸುವ ಕದ್ರಿ ಕ್ಷೇತ್ರದಲ್ಲಿ ಭಕ್ತರಿಗೆ ರಕ್ಷಣೆ ಕೊಡುವಂತೆ ದೇವಸ್ಥಾನದ ಆಡಳಿತ ಸಮಿತಿ ಪೊಲೀಸರ ಮೊರೆ ಹೋಗಿದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದು ಭದ್ರತೆಯನ್ನು ಕಲ್ಪಿಸಲಾಗಿದೆ.
ಮಂಗಳೂರಿನ ನಾಗುರಿಯಲ್ಲಿ ನಡೆದ ಬಾಂಬ್ ಸ್ಪೋಟ ಕದ್ರಿ ಮಂಜುನಾಥ ದೇವಸ್ಥಾನದ ಟಾರ್ಗೆಟ್ ಎನ್ನುವುದು ಈಗ ಬೆಳಕಿಗೆ ಬಂದಿದೆ. ನಿನ್ನೆ ಐಆರ್ಸಿ ಎನ್ನುವ ಉಗ್ರ ಸಂಘಟನೆಯ ಹೆಸರಿನಲ್ಲಿ ಡಾರ್ಕ್ ವೆಬ್ ಮೂಲಕ ಹರಿದಾಡಿದ ಪೋಸ್ಟರ್ನಲ್ಲಿ ಈ ಆಘಾತಕಾರಿ ವಿಚಾರವನ್ನು ಬಂಹಿರಂಗಪಡಿಸಿದ್ದು ಸ್ಪೋಟದ ರೂವಾರಿ ನಾವೇ ಎಂದು ಸಂಘಟನೆ ಹೇಳಿಕೊಂಡಿದೆ.
ಮಂಗಳೂರು ಬ್ಲಾಸ್ಟ್: ಶಂಕಿತ ಉಗ್ರ ಶಾರಿಕ್ ಮೇಲೆ ಝಾಕಿರ್ ನಾಯ್ಕ್ ಭಾಷಣ ಪ್ರಭಾವ
ಬಾಂಬ್ ಸ್ಫೋಟ ವಿಫಲವಾಗಿದ್ದರೂ ಮುಂದಿನ ದಿನದಲ್ಲಿ ನಮ್ಮ ಟಾರ್ಗೆಟ್ ಕಂಪ್ಲೀಟ್ ಮಾಡುತ್ತೇವೆ ಎಂದು ಹೇಳಿಕೊಂಡಿರುವುದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸ್ ಭದ್ರತೆಯನ್ನು ಕೇಳಿದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪ್ರತಿನಿತ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ಸೂಕ್ತ ಭದ್ರತೆ ಕಲ್ಪಿಸಲು ದೂರಿನಲ್ಲಿ ತಿಳಿಸಲಾಗಿದೆ.
ಕದ್ರಿ ದೇವಸ್ಥಾನವೇ ಟಾರ್ಗೆಟ್ ಎನ್ನುವ ಮಾಹಿತಿ ಬರುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದು ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯದಳ ಆಗಮಿಸಿ ಪರಿಶೀಲನೆ ನಡೆಸಿದೆ. ದೇವಸ್ಥಾನದ ಆವರಣದಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಜೊತೆಗೆ ಪೊಲೀಸ್ ಭದ್ರತೆಯನ್ನೂ ಕಲ್ಪಿಸಲಾಗಿದ್ದು, ಕ್ಷೇತ್ರಕ್ಕೆ ಆಗಮಿಸುವ ಎಲ್ಲರ ಮೇಲೂ ಕಣ್ಣಿಡಲಾಗಿದೆ.
ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಸತತ ಕೊಲೆಗಳ ನಂತರ ದೇವಸ್ಥಾನಗಳ ಪರಿಸರದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಸೇರಿದಂತೆ ಹಲವು ವಿಚಾರಗಳಲ್ಲಿ ಮುಸ್ಲಿಂಮರಿಗೆ ಅನ್ಯಾಯ ಆಗಿದೆ ಎಂದು ಉಗ್ರ ಶಾರಿಕ್ ದೇವಸ್ಥಾನವನ್ನು ಟಾರ್ಗೆಟ್ ಮಾಡಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಆದರೆ ಬಾಂಬ್ ಅರ್ಧದಲ್ಲೇ ಸ್ಪೋಟಗೊಂಡಿರುವುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದ್ದು, ಮಂಗಳೂರಿಗರು ನಿಟ್ಟುಸಿರು ಬಿಟ್ಟಿದ್ದಾರೆ.