ಮಂಗಳೂರು: ಅತ್ತೆಯ ಮಾಂಗಲ್ಯವನ್ನೇ ದೋಚಿದ ಖತರ್ನಾಕ್ ಅಳಿಯ
ಮಂಗಳೂರು, ಜುಲೈ 26: ಕಳ್ಳತನ ಪ್ರಕರಣಗಳಲ್ಲಿ ಹೆಚ್ಚಾಗಿ ಹೊರಗಿನ ವ್ಯಕ್ತಿ ಬಂದು ಕೃತ್ಯ ನಡೆಸಿರುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಅಳಿಯನೇ ತನ್ನ ಅತ್ತೆಯ ಕರಿಮರಿ ಸರಕ್ಕೆ ಕನ್ನ ಹಾಕುವುದಕ್ಕೆ ಹೋಗಿ ಬಂಧನವಾಗಿದ್ದಾನೆ. ಈ ಕೃತ್ಯವನ್ನು ಸಂಬಂಧಿಕನೇ ಮಾಡಿದ್ದು ಗೊತ್ತಾಗಿ ಮನೆಯವರು ಶಾಕ್ಗೆ ಒಳಗಾಗಿದ್ದಾರೆ.
ಮಂಗಳೂರು ಕಮೀಷನರೇಟ್ನ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಗ್ರಾಮದ ಮಿತ್ತೊಟ್ಟು ಪ್ರದೇಶದಲ್ಲಿ ಒಂಟಿ ಮಹಿಳೆಯ ಮನೆಗೆ ಇಬ್ಬರು ಕಳ್ಳರು ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದರು. ಸಂತ್ರಸ್ತ ಮಹಿಳೆ ಸುಮತಿ ಆಚಾರ್ಯ ಈ ಬಗ್ಗೆ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಹೊರಗಿನವರು ಬಂದು ಕೃತ್ಯ ನಡೆಸಿರೋದು ಅಲ್ಲ, ಯಾರೋ ಪರಿಚಿತರೇ ಕೃತ್ಯ ಎಸಗಿದ್ದಾರೆ ಎಂಬ ಸಂಶಯ ಬಂದಿತ್ತು. ಈ ಸಂದರ್ಭ ಸ್ಥಳೀಯ ಸಿಸಿ ಕ್ಯಾಮಾರದಲ್ಲಿ ಕೃತ್ಯ ಎಸಗಿ ಇಬ್ಬರು ಪರಾರಿಯಾಗಿರುವುದು ರೆಕಾರ್ಡ್ ಆಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಮಹಿಳೆಯ ಅಳಿಯನೇ ಈ ಕಳ್ಳತನ ಕೃತ್ಯ ನಡೆಸಿರುವುದು ಎಂದು ಕಂಡು ಬಂತು. ಸದ್ಯ ಮಹಿಳೆಯ ಅಳಿಯ ವಿನಯ್ ಕುಮಾರ್, ಆತನ ಜೊತೆಗಿದ್ದ ಮಣಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಿನಯ್ ಕುಮಾರ್ ಸುರತ್ಕಲ್ನ ಕೃಷ್ಣಾಪುರ ಸಮೀಪ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ಕೌಟುಂಬಿಕ ವ್ಯತ್ಯಾಸ ಇರುವ ಹಿನ್ನಲೆಯಲ್ಲಿ ಈ ಕೃತ್ಯವನ್ನು ಅಳಿಯ ಎಸಗಿದ್ದಾನೆ ಎಂದು ತನಿಖೆ ಸಂದರ್ಭ ತಿಳಿದು ಬಂದಿದೆ.
ಈ ಇಬ್ಬರು ಆರೋಪಿಗಳು ಏಕಾಏಕಿ ಮನೆಯೊಳಗೆ ನುಗ್ಗಿ ಸುಮತಿ ಆಚಾರ್ಯರ ಬಾಯಿಗೆ ಬಟ್ಟೆಕಟ್ಟಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಳೆದು ಏಸ್ಕೇಪ್ ಆಗಿದ್ದರು. ಸದ್ಯ ಇಬ್ಬರು ಆರೋಪಿಗಳಿಂದ 60 ಸಾವಿರ ಮೌಲ್ಯದ 32 ಗ್ರಾಂ ತೂಕದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ಸ್ಕೂಟರ್ನ್ನು ವಶಪಡಿಸಿಕೊಳ್ಳಲಾಗಿದೆ.

ಅಳಿಯನೇ ಕಳ್ಳತನ ಕೃತ್ಯ ನಡೆಸಿರುವ ಬಗ್ಗೆ ಅತ್ತೆ ಶಾಕ್ಗೆ ಒಳಗಾಗಿದ್ದಾರೆ. ಸದ್ಯ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಒಟ್ಟಿನಲ್ಲಿ ಹೆಣ್ಣು ಕೊಟ್ಟ ಮನೆಗೆ ಕನ್ನ ಹಾಕಲು ಬಂದು ಅಳಿಯ ಈಗ ಅಂದರ್ ಆಗಿದ್ದಾನೆ.












Click it and Unblock the Notifications