ಮರದಿಂದ ಕೆಳಗೆ ಬಿದ್ದಿದ್ದ ದೈವ ಕೋಲಾಧಿಕಾರಿ ಸಾವು
ಮಂಗಳೂರು, ಫೆಬ್ರವರಿ 23 : ಸಾಂಪ್ರದಾಯಿಕ ಭೂತದ ಕೋಲ ಆಚರಣೆ ವೇಳೆ ತೆಂಗಿನ ಮರದಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ದೈವ ಕೋಲಾಧಿಕಾರಿ ಸುಮೇಶ್ ಫಣಿಕ್ಕರ್ (42 ) ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕರ್ನಾಟಕದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ , ಕೇರಳ ರಾಜ್ಯದ ಕಣ್ಣೂರಿನ ಅಝಿಕೋಡಿನ ಮೀನ್ ಕುನ್ನು ಮುಚ್ಚಿರೀಯನ್ ವಯನಾಟ್ಟು ಕುಲವನ್ ಕ್ಷೇತ್ರದಲ್ಲಿ ಬಪ್ಪರಿಯನ್ ದೈವ ಕೋಲ ನಡೆಯುತ್ತಿದ್ದಾಗ ಈ ದುರಂತ ಘಟಿಸಿದೆ. ಬಪ್ಪಿರಿಯನ್ ದೈವವು ಅತ್ಯಂತ ಕಾರಣಿಕ ಉಳ್ಳದ್ದಾಗಿದ್ದು, ಇದರ ಕೋಲ ವೀಕ್ಷಣೆಗೆ ನೂರಾರು ಮಂದಿ ಸೇರಿದ್ದರು.

ಕೋಲಾಧಿಕಾರಿ ಸುಮೇಶ್ ಫಣಿಕ್ಕರ್ ಕಣ್ಣೂರಿನ ತಳಿಯಿಲ್ ನಿವಾಸಿ. ಮರದ ಮೇಲಿಂದ ಬಿದ್ದಿದ್ದರಿಂದಾಗಿ ಅವರ ತೊಡೆಯ ಮೂಳೆ ಮುರಿತಕ್ಕೊಳಗಾಗಿತ್ತು. ತಕ್ಷಣವೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ತುರ್ತು ಶಸ್ತ್ರ ಚಿಕಿತ್ಸೆಗೂ ಒಳಪಡಿಸಲಾಗಿತ್ತು. ಶಸ್ತ್ರಚಿಕಿತ್ಸೆಯು ಫಲಕಾರಿಯಾಯಿತಾದರೂ ತೀವ್ರ ಗಾಯಗೊಂಡಿದ್ದ ಅವರು ಫೆ. 23ರ ಬೆಳಗ್ಗೆ ನಿಧನ ಹೊಂದಿದ್ದಾರೆ.
ಕೋಲ ನಡೆಯುತ್ತಿದ್ದಾಗ ದೈವವು ಅಂತಿಮವಾಗಿ ಸಂಪ್ರದಾಯದಂತೆ ಕ್ಷೇತ್ರ ಮುಂಭಾಗದ ಸುಮಾರು 10 ಮೀಟರ್ (ಸುಮಾರು 32 ಅಡಿ) ಉದ್ದದ ತೆಂಗಿನ ಮರವನ್ನೇರಿತ್ತು. ತೆಂಗಿನ ಮರದ ಬಹುತೇಕ ಮೇಲಕ್ಕೆ ತಲುಪಿದಾಗ ಬಪ್ಪಿರಿಯನ್ ದೈವವು ಧಿಡೀರನೆ ಕೆಳ ಬಿದ್ದಿತ್ತು. ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದರು. ನಾಗರಿಕರು ಹಾಗೂ ಪೊಲೀಸರು ತಕ್ಷಣ ಮೇಲಕ್ಕೆತ್ತಿ ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದ್ದರು. ಕಳೆದ ಒಂದೂವರೆ ದಶಕದಿಂದ ಸುಮೇಶ್ ಫಣಿಕ್ಕರ್ ಅವರೇ ಇಲ್ಲಿ ದೈವ ಕೋಲ ನಡೆಸುತ್ತಾರೆ.












Click it and Unblock the Notifications