ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ನ ಕೊಲೆ ಆರೋಪಿ ಸೆರೆ
ಮಂಗಳೂರು, ಫೆಬ್ರವರಿ 09: ಮಂಗಳೂರು ಪೊಲೀಸರು ಮುಂಬಯಿಯಲ್ಲಿ ನಡೆಸಿದ ಮಹತ್ವದ ಕಾರ್ಯಾಚರಣೆ ಒಂದರಲ್ಲಿ ಕುಖ್ಯಾತ ಟಾರ್ಗೆಟ್ ಗ್ಯಾಂಗ್ ಇಲ್ಯಾಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಉಳ್ಯಾಲ ನಿವಾಸಿ ದಾವೂದ್ ಎಂದು ಗುರುತಿಸಲಾಗಿದ್ದು ಈತನನ್ನು ಮಂಗಳೂರು ಪೊಲೀಸರು ಮುಂಬಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಂಧಿಸಿದ್ದಾರೆ ಎನ್ನಲಾಗಿದೆ.
ಬಂಧಿತ ಆರೋಪಿ ದಾವೂದ್ ಜನವರಿ 13 ರಂದು ಇಲ್ಯಾಸ್ ಮೇಲೆ ನಡೆದ ದಾಳಿಯ ಸೂತ್ರದಾರ ಎಂದು ಆರೋಪಿಸಲಾಗಿದೆ. ಬಂಧಿತ ಪ್ರಮುಖ ಆರೋಪಿ ದಾವೂದ್ ಕೂಡ ಕುಖ್ಯಾತ ಟಾರ್ಗೆಟ್ ಗ್ಯಾಂಗ್ ಸದಸ್ಯ ನಾಗಿದ್ದು, ಇಲ್ಯಾಸ್ ಮೇಲಿನ ದ್ವೇಷ ಹಾಗೂ ಟಾರ್ಗೆಟ್ ಗ್ಯಾಂಗ್ ನ ಮೇಲೆ ಹಿಡಿತ ಸಾಧನೆಯ ಉದ್ದೇಶದಿಂದ ಇಲ್ಯಾಸ್ ನನ್ನು ಕೊಲೆ ಮಾಡಲಾಗಿತ್ತು ಎಂದು ಹೇಳಲಾಗಿದೆ .
ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ಸಮೀರ್ ಎಂಬವನನ್ನು ಕೇರಳದ ಅಡಗುತಾಣದಿಂದ ನಿನ್ನೆ ಬಂಧಿಸಿದ್ದರು.

ಟಾರ್ಗೆಟ್ ಗ್ಯಾಂಗ್ ನ ಲೀಡರ್ ಇಲ್ಯಾಸ್ ನನ್ನು ಜನವರಿ13 ರ ಮುಂಜಾನೆ ದುಷ್ಕರ್ಮಿಗಳು ಕೊಲೆಗೈದಿದ್ದರು. ಹಲವಾರು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಇಲ್ಯಾಸ್ ಜಾಮೀನಿನ ಮೇಲೆ ಹೊರಗೆ ಬಂದ ಎರಡು ದಿನ ಅಂತರದಲ್ಲೇ ಇಲ್ಯಾಸ್ ನನ್ನು ಹತ್ಯೆ ಮಾಡಲಾಗಿತ್ತು.
ಮಂಗಳೂರಿನ ಜಪ್ಪು ಕುಡ್ಪಾಡಿ ಎಂಬಲ್ಲಿರುವ ಮಸೀದಿಯ ಎದುರುಗಡೆಯ ಫ್ಲಾಟ್ ನಲ್ಲಿ ಪತ್ನಿಯೊಂದಿಗೆ ಇಲ್ಯಾಸ್ ವಾಸವಾಗಿದ್ದ. ಜನವರಿ 13 ರಂದು ಮುಂಜಾನೆ ದುಷ್ಕರ್ಮಿಗಳಿಬ್ಬರು ಮನೆ ಬಾಗಿಲನ್ನು ಬಡಿದು ಒಳ ನುಗ್ಗಿ ಮಲಗಿದ್ದ ಇಲ್ಯಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಲ್ಯಾಸ್ ನನ್ನು ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಲ್ಯಾಸ್ ಮೃತಪಟ್ಟಿದ್ದ.
ಇಲ್ಯಾಸ್ ಒರ್ವ ಕುಖ್ಯಾತ ರೌಡಿ ಶೀಟರ್ ಆಗಿದ್ದ. 23 ಕ್ಕೂ ಮಿಕ್ಕಿ ಅಪರಾಧ ಪ್ರಕರಣಗಳಾದ ಹನಿಟ್ರಾಪ್ , ಸುಲಿಗೆ, ಅಪಹರಣ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ಆತನ ಮೇಲಿತ್ತು. ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಿಸಿ ಅವರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣದಲ್ಲೂ ಇಲ್ಯಾಸ್ ಪ್ರಮುಖ ಆರೋಪಿಯಾಗಿದ್ದ.











Click it and Unblock the Notifications