ಧರ್ಮಸ್ಥಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭ
ಮಂಗಳೂರು, ಫೆಬ್ರವರಿ 07:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ ಬರುವ ಫೆಬ್ರವರಿ 9 ರಿಂದ 18ರವರೆಗೆ ನಡೆಯುವ ಚತುರ್ಥ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ ಭರದಿಂದ ಸಾಗಿದೆ.
ಈ ಬಾರಿ ನಡೆಯಲಿರುವ ಬಾಹುಬಲಿಯ ಚತುರ್ಥ ಮಹಾಮಸ್ತಕಾಭಿಷೇಕ ಉತ್ಸವ ಪಂಚ ಮಹಾವೈಭವ ಎಂಬ ಐತಿಹಾಸಿಕ ಕಾರ್ಯಕ್ರಮವೊಂದಕ್ಕೂ ಸಾಕ್ಷಿಯಾಗಲಿದೆ. ಸ್ವಾಮಿ ಬಾಹುಬಲಿಯ ಜೀವನ ಚರಿತ್ರೆಯನ್ನು ವಿವರಿಸುವ ಧಾರ್ಮಿಕ ಕಲಾವೈಭವ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದ್ದು, ಈ ಕಲಾ ವೈಭವದಲ್ಲಿ 300 ಕಲಾವಿದರು ಭಾಗಿಯಾಗಲಿದ್ದಾರೆ.
ಈ ಬಾರಿ ನಡೆಯಲಿರುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಅವರ ಕಲ್ಪನೆಯಂತೆ ಬಾಹುಬಲಿಯ ಜೀವನ ವಿಶೇಷಗಳಾದ ಬಾಲ್ಯ, ಯೌವನ, ಯುದ್ಧ, ತ್ಯಾಗ, ವೈರಾಗ್ಯಗಳನ್ನು ಅನಾವರಣಗೊಳಿಸುವ ಪಂಚ ಮಹಾವೈಭವ ಅನಾವರಣಗೊಳ್ಳಲಿದೆ.

ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ವೀ.ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪ್ರಮುಖರ ತಂಡ ಮೂರು ತಿಂಗಳುಗಳಿಂದ ಇದರ ತಯಾರಿಗೆ ಶ್ರಮಿಸುತ್ತಿದೆ. ಅಭೂತಪೂರ್ವ ಎನ್ನುವಂತೆ ಪಂಚ ಮಹಾವೈಭವ ಫೆಬ್ರವರಿ 11ರಿಂದ 15ರವರೆಗೆ ನಡೆಯಲಿದ್ದು, ಫೆಬ್ರವರಿ 15ರಂದು ಸಮವಸರಣ ವೈಭವವೂ ವಿಜೃಂಭಣೆಯಿಂದ ನಡೆಯಲಿದೆ.
ಅಮೃತವರ್ಷಿಣಿ ಸಭಾಂಗಣದ ಹಿಂಭಾಗದಲ್ಲಿ ಪಂಚ ಮಹಾವೈಭವಕ್ಕಾಗಿ ವಿಶಾಲವಾದ ಸಭಾಂಗಣ ನಿರ್ಮಾಣವಾಗಿದೆ. ಸುಮಾರು 50 ಸಾವಿರ ಚದರಡಿ ವಿಸ್ತೀರ್ಣದ ಈ ಸಭಾಂಗಣದಲ್ಲಿ ನಾಲ್ಕು ಸಾವಿರ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಸಾಧ್ಯವಿದೆ.












Click it and Unblock the Notifications