ಅಂತೂ ಲಾರಿ ತೆರವು; ಚಾರ್ಮಾಡಿ ಘಾಟ್ ನಲ್ಲಿ ಕರಗಿದ ಸಂಚಾರ ದಟ್ಟಣೆ
ಚಿಕ್ಕಮಗಳೂರು ಕಡೆಯಿಂದ ಬಂದ ಲಾರಿ ಬುಧವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ, ಚಾರ್ಮಾಡಿ ಘಾಟಿಯಲ್ಲಿ ರಸ್ತೆ ತಡೆಗೋಡೆಗೆ ಗುದ್ದಿತ್ತು. ಭಾರೀ ಮಂಜು ಮುಸುಕಿದ ವಾತಾವರಣದಿಂದಾಗಿ ಅವಘಡ ಸಂಭವಿಸಿತ್ತು. ಅಪಘಾತದ ನಂತರ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ನೂರಾರು ಮಂದಿ ಕಂಗೆಟ್ಟಿದ್ದರು.
ಆ ನಂತರ ಹರಸಾಹಸ ಪಟ್ಟು, ಅಪಘಾತಕ್ಕೆ ಈಡಾದ ಲಾರಿ ತೆರವು ಮಾಡಲಾಯಿತು. ಚಾರ್ಮಾಡಿ ಘಾಟ್ ನಲ್ಲಿ ಸಂಚಾರ ದಟ್ಟಣೆ ಕೂಡ ಕರಗಿ, ಈಗ ವಾಹನ ಸಂಚಾರ ಸುಗಮಗೊಂಡಿದೆ. ಇದಕ್ಕೂ ಮುನ್ನ ಪ್ರಕಟಗೊಂಡ ವರದಿ ಹೀಗಿತ್ತು.
******
ಮಂಗಳೂರು, ಜುಲೈ 18: ಚಾರ್ಮಾಡಿ ಘಾಟಿಯಲ್ಲಿ ಸಾಲಾಗಿ ವಾಹನಗಳು ನಿಂತಿವೆ. ಒಂದಿಂಚು ಕದಲುವುದು ಕೂಡ ಅಸಾಧ್ಯ ಎಂಬ ಸ್ಥಿತಿ. ಇದು ಕೆಲ ಸಮಯದ ಮಟ್ಟಿಗೆ ಆದ ಅನನುಕೂಲ ಖಂಡಿತಾ ಇಲ್ಲ. ಘಾಟಿಯಲ್ಲಿ ತಾಸುಗಟ್ಟಲೆ ವಾಹನಗಳು ನಿಲ್ಲುವಂತಾಗಿದೆ. ಈ ಪರಿಯ ಸಂಚಾರ ದಟ್ಟಣೆಗೆ ಏನು ಕಾರಣ ಎಂಬ ಪ್ರಶ್ನೆ ಮೂಡುವುದು ಸಹಜ.
ಅಸಲಿಗೆ ಏನಾಗಿದೆ ಅಂದರೆ, ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ತಡೆಗೋಡೆಗೆ ಗುದ್ದಿದೆ. ಹಾಗೆ ಘಾಟಿಯಾ ಮಧ್ಯದಲ್ಲಿ ಅಪಘಾತ ಸಂಭವಿಸಿ, ಎರಡೂ ಬದಿಯಿಂದ ವಾಹನಗಳ ಸಂಚಾರವೇ ಸಾಧ್ಯವಿಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಿದೆ. ತುರ್ತಾಗಿ ತೆರಳಬೇಕಾಗಿದ್ದವರು ಕೈ ಹಿಸುಕಿಕೊಳ್ಳುವಂತಾಗಿದೆ.

ಅಂದಹಾಗೆ ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ರಸ್ತೆ ಈ ಚಾರ್ಮಾಡಿ ಘಾಟಿ. ಇಲ್ಲಿ ಮೊದಲೇ ಮಳೆಗಾಲ. ಸರಿಯಾದ ಮಳೆಯಂತೂ ಆಗುತ್ತಿದೆ. ಇದರ ಜತೆಗೆ ಈಚೆಗೆ ಗುಡ್ಡ ಕುಸಿದಿದ್ದನ್ನು ಸಹ ನೆನಪಿಸಿಕೊಳ್ಳಬಹುದು. ಒಟ್ಟಾರೆ ಲಾರಿಯೊಂದು ಅಪಘಾತವಾಗಿ ಸೃಷ್ಟಿಯಾಗಿರುವ ಅನಾಹುತದ ಬಗ್ಗೆ ನಿಮ್ಮ ಗಮನಕ್ಕೂ ಇರಲಿ. ಆ ರಸ್ತೆಯ ಕಡೆಗೆ ಹೋಗುವ ಆಲೋಚನೆ ಇದ್ದರೆ ಪರಿಸ್ಥಿತಿ ಹೇಗಿದೆ ಅಂತ ನೋಡಿಕೊಂಡು ಹೋಗಿ.













Click it and Unblock the Notifications