ಮಂಗಳೂರಲ್ಲಿ ಹಸಿದವನಿಗೆ ಅನ್ನ ಕೊಡುವ ಹೊರನಾಡು ಅನ್ನಪೂರ್ಣೆ
ಮಂಗಳೂರು, ಮೇ 24; ನಾವು ಸೇವಿಸುವ ಪ್ರತಿ ಅನ್ನದ ಅಗುಳಿನಲ್ಲೂ ತಾಯಿ ಅನ್ನಪೂರ್ಣೇಶ್ವರಿ ನೆಲೆಸಿರುತ್ತಾಳೆ. ಲಾಕ್ಡೌನ್ ವೇಳೆಯಲ್ಲಿ ಅನ್ನಪೂರ್ಣೇಶ್ವರಿ ಪ್ರಸಾದ ಬಡವರ, ನಿರ್ಗತಿಕರ ಹೊಟ್ಟೆ ತುಂಬಿಸುತ್ತಿದೆ. ಅದು ಹೊರನಾಡು ಕ್ಷೇತ್ರದಲ್ಲಿ ಮಾತ್ರವಲ್ಲ, ಕಡಲ ತಡಿ ಮಂಗಳೂರಿನಲ್ಲೂ ಕೂಡ.
ಲಾಕ್ಡೌನ್ ಸಂದರ್ಭದಲ್ಲೂ ಅನ್ನಪೂರ್ಣೇಶ್ವರಿಯ ಆಶೀರ್ವಾದ ಜನರ ಮೇಲಿದೆ. ಅದಕ್ಕೆ ಒಂದು ಉದಾಹರಣೆ ಮಂಗಳೂರಿನಲ್ಲಿದೆ. ಹೌದು, ಕಳೆದ ವರ್ಷದಂತೆ ಈ ವರ್ಷ ಕೂಡ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ನಿರಾಶ್ರಿತರು, ನಿರ್ಗತಿಕರು, ಬಡವರಿಗೆ ಅನ್ನಪೂರ್ಣೆಯ ಪ್ರಸಾದ ಸಿಗುತ್ತಿದೆ.
ಮಂಗಳೂರು: ಮಾಸ್ಕ್ ಹಾಕಲ್ಲವೆಂದು ಹಠ ಹಿಡಿದಿದ್ದ ವೈದ್ಯನ ವಿರುದ್ಧ ಕೇಸ್ ದಾಖಲು
ಮಂಗಳೂರಿನ ಪಾಂಡೇಶ್ವರದಲ್ಲಿರುವ ಹೊಟೇಲ್ ಗಣೇಶ್ನಲ್ಲಿ ಪ್ರತಿನಿತ್ಯ ಅಡುಗೆ ಆರಂಭಿಸುವ ಮೊದಲು ಒಂದಿಷ್ಟು ಅಕ್ಕಿಯನ್ನು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಹೆಸರನ್ನು ಹೇಳಿ ತೆಗೆದಿಡಲಾಗುತ್ತಿತ್ತು. ನಂತರ ಅದನ್ನು ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಅನ್ನಪೂರ್ಣೇಶ್ವರಿ ಸನ್ನಿಧಿಗೆ ಒಪ್ಪಿಸಿ ಬರುತ್ತಿದ್ದರು. ಇದು ದೇವಿಗೆ ಇವರು ಅರ್ಪಿಸುವ ಭಕ್ತಿಯಾಗಿತ್ತು.
ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ!
ಆದರೆ ಲಾಕ್ಡೌನ್ ಸಮಯದಲ್ಲಿ ನಗರದಲ್ಲಿ ಊಟಕ್ಕಾಗಿ ಜನರು ಪರದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು ಸೋಮವಾರದಿಂದ ಜೂನ್ 7ರ ತನಕ ಜಾರಿಯಲ್ಲಿರುತ್ತದೆ. ಇವರಿಗೆ ಹೋಟೆಲ್ ಆಹಾರ ಸರಬರಾಜು ಮಾಡುವ ಕಾರ್ಯ ಮಾಡುತ್ತಿದೆ.
ಸುಮಾರು 450 ಜನರಿಗೆ ಆಹಾರ ವಿತರಣೆ
ಇನ್ನು ಈ ಅಕ್ಕಿ ಪ್ರಸಾದವಾಗಿ ಹೊರನಾಡಿನ ಅನ್ನ ದಾಸೋಹದಲ್ಲಿ ಭಕ್ತರ ಹೊಟ್ಟೆ ತುಂಬಿಸುತ್ತಿತ್ತು. ಆದರೆ ಈಗ ಲಾಕ್ ಡೌನ್ ಸಮಯ. ಸಂಗ್ರಹವಾದ ಅಕ್ಕಿಯನ್ನು ಹೊರನಾಡಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅಲ್ಲದೇ ಇಲ್ಲಿಂದಲೇ ಅನ್ನಪೂರ್ಣೆಗೆ ನಮಿಸಿ ಸಂಗ್ರಹವಾಗಿದ್ದ ಅಕ್ಕಿಯಿಂದ ಆಹಾರ ತಯಾರಿಸಿ ನಿರ್ಗತಿಕರು, ಬಡವರಿಗೆ ಹಂಚಲಾಗುತ್ತಿದೆ. ಇದು ಈ ವರ್ಷ ಮಾತ್ರವಲ್ಲ ಕಳೆದ ವರ್ಷದಿಂದ ಕೂಡ ಹೊರನಾಡಿಗೆ ಅರ್ಪಿಸಬೇಕಾದ ಅಕ್ಕಿಯನ್ನು ಇಲ್ಲಿ ಬಳಸಲಾಗುತ್ತಿದೆ. ಪ್ರತಿದಿನ ಸುಮಾರು 450 ಜನರಿಗೆ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ.
ಅಗ್ನಿಶಾಮಕದ ದಳದ ಸಹಾಯ
ಹೋಟೆಲ್ನವರ ಈ ಕಾರ್ಯಕ್ಕೆ ಹೊಟೇಲ್ ಪಕ್ಕದಲ್ಲೇ ಇರುವ ಅಗ್ನಿಶಾಮಕದಳ ಅಧಿಕಾರಿ ಮತ್ತು ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿಗಳು ತಮ್ಮ ಕೈಲಾದಷ್ಟು ದವಸ ಧಾನ್ಯಗಳನ್ನು ತಂದು ಕೊಡುತ್ತಾರೆ. ಅಲ್ಲದೇ ಅಡುಗೆಗೆ ಮತ್ತು ಅದರ ಪ್ಯಾಕಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಈ ಊಟವನ್ನು ತೆಗೆದುಕೊಂಡು ಹೋಗಿ ಹಂಚಲು ಅಗ್ನಿಶಾಮಕದಳದ ಸಿಬ್ಬಂದಿಯೊಬ್ಬರು ವಾಹನವನ್ನು ಕೊಟ್ಟಿದ್ದಾರೆ.
ಎರಡು ಬಗೆಯ ಅನ್ನ ಮಾಡುತ್ತಾರೆ
ಹೋಟೆಲ್ನಲ್ಲಿ ತಯಾರು ಮಾಡಿದ ಆಹಾರವನ್ನು ಮಂಗಳೂರಿನ ಟೌನ್ ಹಾಲ್, ಸ್ಟೇಟ್ ಬ್ಯಾಂಕ್ ಸರ್ಕಲ್ ಸೇರಿದಂತೆ ವಿವಿಧ ಕಡೆ ಇರುವ ನಿರ್ಗತಿಕರಿಗೆ ಹಂಚಲಾಗುತ್ತಿದೆ. ಇನ್ನು ಇಲ್ಲಿ ಕುಚಲಕ್ಕಿ ಮತ್ತು ಬೆಳ್ತಕ್ಕಿ ಎರಡು ರೀತಿಯ ಅನ್ನವನ್ನು ನೀಡಲಾಗುತ್ತೆ. ಕುಚಲಕ್ಕಿ ತಿನ್ನವವರಿಗೆ ಬಾಯಿಲ್ಡ್ ರೈಸ್ ಇರೋ ಪ್ಯಾಕೆಟ್, ಬೆಳ್ತಕ್ಕಿ ಬೇಕಾದವರಿಗೆ ವೈಟ್ ರೈಸ್ ಇರೋ ಪ್ಯಾಕೆಟ್ ಕೇಳಿ ಕೊಡಲಾಗುತ್ತದೆ.
ಲಾಕ್ಡೌನ್ ಮುಗಿಯುವ ತನಕ ಸೇವೆ
ಈಗಲೂ ಸಹ ಆಹಾರ ನೀಡುವ ಸೇವೆಯನ್ನು ಮುಂದುವರೆಸಲಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಹಾಗೂ ಹೊಟೇಲ್ ಯುವಕರ ತಂಡ ಈ ಎಲ್ಲಾ ಸೇವೆಯನ್ನು ಲಾಕ್ಡೌನ್ ಮುಗಿಯುವವರೆಗೂ ಮುಂದುವರೆಸುವ ಇಂಗಿತ ಹೊಂದಿದ್ದಾರೆ. ಹೊರನಾಡು ಅನ್ನಪೂರ್ಣೇಶ್ವರಿಯೇ ಇವರಿಗೆ ದಾರಿ ತೋರಿಸಿ ಬಡವರಿಗೆ ನೆರವಾಗುವಂತೆ ಪ್ರೇರಣೆ ನೀಡಿದ್ದಾಳೆ. ಅನ್ನದಾನ ಮಾಡುವ ಮೂಲಕ ಇವರು ತಾಯಿಯ ಆಶೀರ್ವಾದಕ್ಕೆ ಭಾಜನರಾಗಿದ್ದಾರೆ.