ಮಂಗಳೂರು ಕಡಲ ತಡಿಯಲ್ಲಿ ಸನ್ನದ್ಧವಾಗಿದೆ ಜೀವರಕ್ಷಕ ಪಡೆ
ಮಂಗಳೂರು, ಜೂನ್ 15: ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಮಳೆಯ ಅಬ್ಬರ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಸೂಚನೆ ರವಾನಿಸಲಾಗಿದೆ. ಸಮುದ್ರಕ್ಕಿಳಿಯುವುದು ಅಪಾಯವಾಗಿರುವ ಕಾರಣ ಪ್ರವಾಸಿಗರು ಕಡಲತಡಿಗೆ ತೆರಳದಂತೆ ಸೂಚಿಸಲಾಗಿದೆ. ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಡಲ ತಡಿಯಲ್ಲಿ ಜೀವ ರಕ್ಷಕ ಪಡೆ ಸನ್ನದ್ಧವಾಗಿದೆ.
ಉಳ್ಳಾಲ, ಸೋಮೇಶ್ವರ, ಪಣಂಬೂರು, ತಣ್ಣೀರುಬಾವಿ, ಸುರತ್ಕಲ್, ಸಸಿಹಿತ್ಲು, ಪಡುಬಿದ್ರಿ ಮೊದಲಾದ ಬೀಚ್ಗಳು ಅಪಾಯಕಾರಿಯಾಗಿವೆ. ಗೃಹರಕ್ಷಕದಳ, ಕರಾವಳಿ ಕಾವಲು ಪೊಲೀಸ್ ಪಡೆ ಸಿಬ್ಬಂದಿ, ಪ್ರವಾಸೋದ್ಯಮ ಇಲಾಖೆಯ ಟೂರಿಸ್ಟ್ ಮಿತ್ರ ಹಾಗೂ ಸ್ಥಳೀಯರ ಸಂಘ ಸಂಸ್ಥೆಗಳ ಯುವಕರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಪ್ರಾಣ ರಕ್ಷಣೆಯಲ್ಲಿ ಸನ್ನದ್ಧಗೊಂಡಿದ್ದಾರೆ. ಈ ತಂಡ ಜೀವ ರಕ್ಷಣೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಸಿಬ್ಬಂದಿಗೆ ಸೂಕ್ತ ಪರಿಕರಗಳನ್ನು ಆಯಾ ಇಲಾಖೆ ಹಾಗೂ ಜಿಲ್ಲಾಡಳಿತ ಒದಗಿಸಿದೆ. ಯಾರಾದರೂ ಕಣ್ತಪ್ಪಿಸಿ ನೀರಿಗಿಳಿದು ಅಪಾಯದಲ್ಲಿ ಸಿಲುಕಿದರೆ ತಕ್ಷಣ ಸ್ಥಳೀಯ ಜೀವರಕ್ಷಕ ಪಡೆಯ ಸಿಬ್ಬಂದಿ ಅವರನ್ನು ರಕ್ಷಿಸಲಿದ್ದಾರೆ.
ಮಂಗಳೂರು ಹೊರವಲಯದ ಉಳ್ಳಾಲ, ಸೋಮೇಶ್ವರ, ಪಣಂಬೂರು, ತಣ್ಣೀರುಬಾವಿ, ಸುರತ್ಕಲ್ ಕಡಲ ಕಿನಾರೆಯಲ್ಲಿ ಗೃಹರಕ್ಷಕ ದಳದ ಮೂವರು, ಕರಾವಳಿ ಕಾವಲು ಪೊಲೀಸ್ ಪಡೆ, ಪ್ರವಾಸೋದ್ಯಮ ಇಲಾಖೆಯ ತಲಾ ಒಬ್ಬರು ಹಾಗೂ ಸ್ಥಳೀಯ ನುರಿತ ಈಜುಗಾರರು ಸನ್ನದ್ಧರಾಗಿರಲಿದ್ದಾರೆ.

ಬೀಚ್ನಿಂದ ಸುಮಾರು 50 ಮೀಟರ್ ದೂರದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರು ಮುಂದಕ್ಕೆ ಹೋಗದಂತೆ ಟೇಪ್ ಕಟ್ಟಲಾಗಿದೆ. ಧ್ವನಿವರ್ಧಕಗಳ ಮೂಲಕವೂ ಎಚ್ಚರಿಕೆ ನೀಡಲಾಗುತ್ತಿದೆ.











Click it and Unblock the Notifications