ಜನತಾ ಕರ್ಫ್ಯೂ ಬೆಂಬಲಿಸಿ, ಮೃತ್ಯುಂಜಯ ಮಂತ್ರ ಜಪಿಸಿ: ಹರೀಶ್ ಪೂಂಜಾ
ಬೆಳ್ತಂಗಡಿ, ಮರ್ಚ್ 21: ದೇಶದ ಮೇಲಿನ ಪ್ರೀತಿಗೆ, ಪ್ರಧಾನಿ ಮೋದಿಯ ಮೇಲಿನ ಗೌರವಕ್ಕೆ ಸಹಜನರ ಆರೋಗ್ಯಕ್ಕೆ ಮಾರ್ಚ್ 22ರ ಜನತಾ ಕರ್ಫ್ಯೂ ಬೆಂಬಲಿಸೋಣ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕರೆ ನೀಡಿದ್ದಾರೆ.
ಮುಂದಿನ ಕೆಲವು ವಾರಗಳವರೆಗೆ ಪ್ರತಿಯೊಬ್ಬರೂ ಭಾರತೀಯರು ದೃಢ ನಿಶ್ಚಯ ಮತ್ತು ತಾಳ್ಮೆಯ ಮೂಲಕ ಕೊರೊನಾ ಭೀತಿಯನ್ನು ನಿಭಾಯಿಸೋಣ. ಇದು ಕಷ್ಟ ಕಾಲ, ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಂತು ಮುಂದಿರುವ ಮಾಹಾಮಾರಿಯನ್ನು ಓಡಿಸುವ ಕೆಲಸ ಮಾಡೋಣ ಎಂದು ತಮ್ಮ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಮಹಾ ಮೃತ್ಯುಂಜಯ ಮಂತ್ರದ ಮಹತ್ವ, ಜನತಾ ಕರ್ಫ್ಯೂ ಸಂದರ್ಭದಲ್ಲಿ ಅದನ್ನು ಪಠಣ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಮಹಾ ಮೃತ್ಯುಂಜಯ ಮಂತ್ರ
"ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾಮ್ ಮ್ರತ್ಯೋರ್ಮುಕ್ಷೀಯ ಮಾಮೃತಾತ್"
ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾವೈರಸ್ ಭಾರತದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸರಪಳಿಯನ್ನು ತುಂಡುಮಾಡಲು, ನಮ್ಮ ಪ್ರಧಾನಿ ಮೋದಿಯವರು ಭಾನುವಾರ ಮಾರ್ಚ್ 22ನೇ ತಾರೀಕಿನಂದು ಬೆಳಿಗ್ಗೆ ಏಳರಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಮನೆಯೊಳಕ್ಕೇ ಇದ್ದು ಸಹಕರಿಸಲು ಕೋರಿದ್ದಾರೆ.

ವೈರಸ್ ಹರಡುವ ಪ್ರಮಾಣ ತಗ್ಗಿಸೋಣ
ಈ ''ಜನತಾಕರ್ಫ್ಯೂ''ವಿನಿಂದಾಗಿ ಜನರು ಬೇರೆಯವರೊಂದಿಗೆ ಸಮೀಪ ಸಂಪರ್ಕದಲ್ಲಿ ಬರುವಂತಾ ಜಾಗಗಳಾದ ಸಂತೆ, ಹೋಟಲು, ಬಸ್ಸು, ದೇವಾಲಯಗಳಲ್ಲಿ ಸೇರದೇ ವೈರಸ್ ಹರಡುವ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು.
ವೈರಸ್ಸನ್ನು ತಡೆಯುವ ಇಂತಹ ದೊಡ್ಡಮಟ್ಟದ ಪ್ರಯತ್ನ ಮಾಡುತ್ತಿರುವಾಗ, ನಮ್ಮೆಲ್ಲರ ಆತ್ಮವಿಶ್ವಾಸ ಉಚ್ಚ ಮಟ್ಟದಲ್ಲಿರುವುದು ಅತ್ಯಗತ್ಯ. ಕಷ್ಟಗಳು ಬಂದಾಗ, ಹೆಚ್ಚಿನ ಶಕ್ತಿ ಬೇಕಾದಾಗ ನಾವು ಕೇಳುವುದ್ಯಾರನ್ನು? ಮಹಾಶಕ್ತನಾದ ಆದಿಯೋಗಿ ಶಿವನನ್ನು ತಾನೇ.

ಪ್ರತಿಯೊಂದು ಸಂಕಷ್ಟಕ್ಕೂ ಪರಿಹಾರವಿದೆ
ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಸಂಕಷ್ಟಕ್ಕೂ ಪರಿಹಾರವಿದೆ, ಪ್ರತಿಯೊಂದು ಪರಿಹಾರಕ್ಕೂ ಅದರದ್ದೇ ಆದ ಸೌಂದರ್ಯವಿದೆ. ಇಂತಹ ಮಹಾಮಾರಿಯ ವಿರುದ್ಧ ಹೋರಾಡುವ ಈ ಸಮಯದಲ್ಲಿ ಮೃತ್ಯುವನ್ನು ಆದಷ್ಟೂ ದೂರವಿಡಲು, ಹಾಗೂ ಮೃತ್ಯುವಿನ ವಿರುದ್ಧ ಹೋರಾಡಲು ಬೇಕಾದ ಶಕ್ತಿಕೊಡಬಹುದಾದ ಪರಿಹಾರವೆಂದರೆ ಮಹಾ ಮೃತ್ಯುಂಜಯ ಮಂತ್ರ.
ಹಿಂದೂ ವೇದೋಪಾಸಕರಿಗೆ ಮತ್ತು ಶಿವಾರಾಧಕರಿಗೆ ಮೃತ್ಯುಂಜಯಮಂತ್ರದ ಶಕ್ತಿ ತಿಳಿದೇ ಇರುತ್ತದೆ. ಮಹಾ ಮೃತ್ಯುಂಜಯ ಮಂತ್ರವು ಅಂತರ್ಪ್ರಜ್ಞೆಯ ಮೇಲೆ ಕೆಲಸ ಮಾಡುವ ಅದ್ಭುತವಾದ ಗುಣವನ್ನು ಹೊಂದಿದೆ. ಭೀತಿಯನ್ನು ಹೋಗಲಾಡಿಸುವುದು ಮತ್ತು ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುವಲ್ಲಿ ಮೃತ್ಯುಂಜಯ ಮಂತ್ರ ಅತ್ಯಂತ ಪರಿಣಾಮಕಾರಿ.

ನೂರಾ ಎಂಟು ಬಾರಿ ಮಹಾಮೃತ್ಯುಂಜಯ ಮಂತ್ರ ಪಠಿಸಿ
ಮನೆಯೊಳಗೇ ಇರುವ ಈ ಸದವಕಾಶವನ್ನು ಉಪಯೋಗಿಸಿಕೊಂಡು, ಯಾಕೆ ನಾವೆಲ್ಲರೂ ಭಾನುವಾರ ಬೆಳಿಗ್ಗೆ ಎಂಟುಗಂಟೆಗೆ ಶುಚಿರ್ಭೂತರಾಗಿ ನೂರಾ ಎಂಟು ಬಾರಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬಾರದು? ಈ ಮಂತ್ರವನ್ನು ಒಂದು ಬಾರಿ ಪಠಿಸಲು ಬೇಕಾಗುವ ಸಮಯ ಮೂವತ್ತು ಸೆಕೆಂಡುಗಳು.
ನೂರಾ ಎಂಟು ಬಾರಿ ಪಠಿಸಲು ನೀವು ತೆಗೆದಿಡಬೇಕಾದ ಸಮಯ 54 ನಿಮಿಷ. ನಂತರ ಆರು ನಿಮಿಷದ ಮೌನ ಧ್ಯಾನದ ಮೂಲಕ ಇದಕ್ಕೆ ತೆರೆಯೆಳೆಯುವುದು. ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸಿ, ಈ ಮಹಾಮಾರಿಯ ವಿರುದ್ಧದ ಹೋರಾಟಕ್ಕೆ ನಮ್ಮ ಸಜ್ಜಾಗಿಸಿಕೊಳ್ಳುವುದು ಈ ಮಂತ್ರೋಚ್ಚಾರಣೆಯ ಒಂದು ಭಾಗವಾದರೆ, ಈ ಮಂತ್ರದ ಮೂಲ ಮತ್ತು ಉಪಯೋಗವನ್ನು ನಮ್ಮೊಂದಿಗೆ ಕನಿಷ್ಟ ಹತ್ತುಜನರಿಗೆ ತಿಳಿಸುವಂತಾದರೆ, ಕಳೆದುಹೋಗುತ್ತಿರುವ ಹಿಂದೂ ಮೂಲಧಾತುಗಳನ್ನು ಉಳಿಸುವ ಸಣ್ಣದೊಂದು ಪ್ರಯತ್ನವೂ ಇದರ ಇನ್ನೊಂದು ಭಾಗ.

ಮಂತ್ರಪಠಣ ಮಾಡುವ ಈ ಪ್ರಯತ್ನ ಸಹಕರಿಸಿ
ಈ ಮಂತ್ರೋಚ್ಚಾರಣೆಯ ಸಮಯದಲ್ಲಿ, ನಿಮಗೆ ಸಹಾಯವಾಗಲು ಹಿನ್ನೆಲೆಯಲ್ಲಿ ನುಡಿಸಲು ಸಾಧ್ಯವಾಗುವಂತಹ ಆಡಿಯೋ ಮತ್ತು ವಿಡಿಯೋ ಫೈಲನ್ನು ಸದ್ಯದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಈ ಆಶಯವನ್ನೂ ಆ ಫೈಲುಗಳನ್ನೂ ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ಮಹಾ ಮೃತ್ಯುಂಜಯ ಮಂತ್ರಪಠಣ ಮಾಡುವ ಈ ಪ್ರಯತ್ನಕ್ಕೆ ನಿಮ್ಮದೂ ಸಹಕಾರವಿರಲಿ.
ದಿನಾಂಕ: 22ನೇ ಮಾರ್ಚ್, ಭಾನುವಾರ
ಸಮಯ: ಬೆಳಿಗ್ಗೆ ಎಂಟು ಘಂಟೆಯಿಂದ ಒಂಬತ್ತು ಘಂಟೆಯವರೆಗೆ ಮತ್ತು ದಿನದ ಯಾವುದೇ ಸಂದರ್ಭದಲ್ಲಿ
ಜಾಗ: ನೀವಿದ್ದಲ್ಲೇ, ನಿಮ್ಮ ಮನೆಯಲ್ಲೇ, ಪೂರ್ವದಿಕ್ಕಿಗೆ ಮುಖಮಾಡಿ
!!ಓಂ ನಮಃ ಶಿವಾಯ!!












Click it and Unblock the Notifications