'ನರೇಂದ್ರ ಮೋದಿ ಪತ್ನಿ ಯಾರು? ಅವರು ಎಲ್ಲಿದ್ದಾರೆ?'
ಮಂಗಳೂರು, ನ. 18: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ಹೋದ ಬಳಿಕ ಇಂದು ಹಿರಿಯ ಕಾಂಗ್ರೆಸ್ಸಿಗ ಬಿ ಜನಾರ್ದನ ಪೂಜಾರಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
'ಅಲ್ರೀ ಯಾರ್ರೀ ಅದು ನರೇಂದ್ರ ಮೋದಿ ನಮ್ಮ ಸೋನಿಯಾ ಗಾಂಧಿ ಬಗ್ಗೆ ಎಲ್ಲ ಮಾತ್ನಾಡ್ತಾರೆ. ಸೋನಿಯಾ ಮೇಡಂ ಆರೋಗ್ಯವನ್ನೆಲ್ಲ ಕೆದಕುತ್ತಾರೆ? ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಖಾಸಗಿ ವಿಷಯ ಕೇಳುವ ಮುನ್ನ ಅವರ ಪತ್ನಿಯ ಬಗ್ಗೆ ಮಾತನಾಡಲಿ, ನೋಡೋಣ' ಎಂದು ನರೇಂದ್ರ ಮೋದಿಗೆ ಪೂಜಾರಿ ಸವಾಲು ಹಾಕಿದ್ದಾರೆ.
ಇಂದು ಸೋಮವಾರ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮೋದಿ ಬೆಂಗಳೂರು ಸಮಾವೇಶದ ಬಗ್ಗೆ ಪೂಜಾರಿ ಮಾತನಾಡಿದರು. ಆ ಸಂದರ್ಭದಲ್ಲಿ 'ನೋಡಿ, ಆ ನರೇಂದ್ರ ಮೋದಿ ಅಗ್ಗದ ರಾಜಕೀಯ ಮಾಡುತ್ತಿದ್ದಾರೆ. ಮೋದಿ ತಮ್ಮ ವೈವಾಹಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಒಪ್ಪಿಕೊಳ್ಳಲಿ. ಅವರು ಮದುವೆಯಾಗಿದ್ದಾರಾ? ಆಗಿದ್ದರೆ ಅವರ ಪತ್ನಿ ಈಗ ಎಲ್ಲಿದ್ದಾರೆ? ಅವರ ಹೆಸರು ಏನು? ಇದನ್ನೆಲ್ಲಾ ಬಹಿರಂಗವಾಗಿ ಮಾತನಾಡಲಿ' ಎಂದು ಪೂಜಾರಿ ಸವಾಲು ಹಾಕಿದರು.

ಮೋದಿ ವೈವಾಹಿಕ ಬದುಕನ್ನು ಮರೆಮಾಚುತ್ತಿದ್ದಾರೆ:
'ಇಷ್ಟಕ್ಕೂ ನರೆಂದ್ರ ಮೋದಿ ಅವರು ತಮ್ಮ ವೈವಾಹಿಕ ಬದುಕನ್ನು ಯಾಕೆ ಮರೆಮಾಚುತ್ತಿದ್ದಾರೆ. ತಮ್ಮ ಮತದಾರರ ಪಟ್ಟಿಯಲ್ಲಿ ಅದನ್ನೆಲ್ಲಾ ಮೋದಿ ನಮೂದಿಸಬೇಕು. ಮೋದಿಯೇನು ಅರ್ಥಶಾಸ್ತ್ರ ಕಲಿತಿಲ್ಲ. ಸುಳ್ಳಿನ ಕಂತೆಗಳ ಮೇಲೆ ಅವರು ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಿದ್ದಾರೆ. ಅಲ್ರೀ ದೇಶದಲ್ಲಿ ಐಟಿ ಕ್ರಾಂತಿ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಅಂತ ಅವರು (ಮೋದಿ) ಹೇಳುತ್ತಾರೆ. ಆದರೆ ನಮ್ಮ ಎಸ್ ಎಂ ಕೃಷ್ಣ ಅವರಲ್ಲವೇ ರಾಜ್ಯದಲ್ಲಿ ಐಟಿ ಕ್ರಾಂತಿ ಎಬ್ಬಿಸಿದ್ದು' ಎಂದು ಪೂಜಾರಿ ತಿಳಿಸಿದ್ದಾರೆ.

ಭಯ ಪಟ್ಕೊಂಡು ಮೋದಿಗೆ ಮತ ಹಾಕ್ತಿದ್ದಾರಷ್ಟೇ:
ಗುಜರಾತ್ ಅಭಿವೃದ್ಧಿ ಬಗ್ಗೆ ವ್ಯಂಗ್ಯವಾಡಿದ ಪೂಜಾರಿ, ಮೋದಿ ಗುಜರಾತಿಗೆ ಏನು ಮಾಡಿದ್ದಾರೆ? ಅವರು ಉದ್ಯಮಿಗಳನ್ನಷ್ಟೇ ಪೋಷಿಸುತ್ತಾ ಬಂದಿದ್ದಾರೆ. ಗುಜರಾತಿನ ಆರ್ಥಿಕ-ಸಾಮಾಜಿಕ ಅಭಿವೃದ್ಧಿ ಪರಾಮರ್ಶೆ ಮಾಡಿದರೆ ಅವರು ಅಭಿವೃದ್ಧಿ ಏನೆಂಬುದು ಬಹಿರಂಗವಾಗುತ್ತದೆ. ಅಪೌಷ್ಠಿಕತೆ ಮತ್ತು ನಿರುದ್ಯೋಗ ಸಮಸ್ಯೆಗಳು ಗುಜರಾತನ್ನು ಬಾಧಿಸುತ್ತಿವೆ. ಗುಜರಾತ್ ಜನ ಭಯ ಪಟ್ಟುಕೊಂಡು ಮೋದಿಗೆ ಮತ ಹಾಕುತ್ತಿದ್ದಾರೆ ಅಷ್ಟೇ ಎಂದು ಪೂಜಾರಿ ವಿವರಿಸಿದರು.

ಅಮೆರಿಕದ ಕೆಲ ಮಾಜಿ ಅಧ್ಯಕ್ಷರುಗಳೂ ಮೋದಿ ಜತೆ:
ಮೋದಿ ಚುನಾವಣಾ ಪ್ರಚಾರ ಸಭೆಗಳ ಬಗ್ಗೆಯೂ ಮಾತನಾಡಿದ ಪೂಜಾರಿ - ದೇಶದಲ್ಲಿ ಮೋದಿ ಬಗ್ಗೆ ಪ್ರಚಾರ ಕಾರ್ಯ ನಡೆಸಲು 25 ಸಾವಿರ ಡಾಲರ್ ಹಣ ನೀಡಿ ಯಾವುದೋ ವಿದೇಶಿ PR ಕಂಪನಿಯೊಂದನ್ನು ನೇಮಿಸಿಕೊಂಡಿದ್ದಾರೆ. ಅಮೆರಿಕದ ಕೆಲವು ಮಾಜಿ ಅಧ್ಯಕ್ಷರುಗಳೂ ಮೋದಿ ಜತೆ ಕೈಜೋಡಿಸಿದ್ದಾರೆ. ಚುನಾವಣೆ ಗೆಲ್ಲುವ ಬಗ್ಗೆ ಅವರು ಕನಸು ಕಾಣುತ್ತಿದ್ದಾರೆ. ಅದೇನು ಕಬಡ್ಡಿ ಮ್ಯಾಚಾ? ಇಲ್ಲಾ ಕ್ರಿಕೆಟ್ ಮ್ಯಾಚಾ? ಮೋದಿಗೆ ವಿದೇಶಿ ನೀತಿಯ ಬಗ್ಗೆ ಜ್ಞಾನವೇ ಇಲ್ಲ. ಅಮೆರಿಕ, ಜಪಾನ್ ಸಹ ಗಡಿ ವಿವಾದಗಳನ್ನು ಎದುರಿಸುತ್ತಿವೆ. ಮೋದಿ ಏನಾದರೂ ಪ್ರಧಾನಿಯಾಗಬಿಟ್ಟರೆ ಪಾಕಿಸ್ತಾನದ ಜತೆ ಘರ್ಷಣೆಗಿಳಿಯುವುದು ಖಚಿತ. ಅದು ನ್ಯೂಕ್ಲಿಯಾರ್ ಬಾಂಬ್ ಸಿಡಿಸಿ, ಮೂರನೇ ಜಾಗತಿಕ ಸಮರಕ್ಕೆ ನಾಂದಿಯಾಗಬಲ್ಲದು ಎಂದು ಪೂಜಾಋಇ ಆತಂಕ ವ್ಯಕ್ತಪಡಿಸಿದರು.

ವಾಜಪೇಯಿಗೆ ರಾಜಕೀಯದ ಬಗ್ಗೆ ಅರಿವಿತ್ತು
ಮೋದಿ ಬಿಜೆಪಿಯವರು ರಾಮ ಮಂದಿರ ಕಟ್ಟುತ್ತೇವೆ ಎಂದು ಆಸೆ ಹುಟ್ಟಿಸಿದರು. ಆದರೆ ವಿಫಲರಾದರು. ಅನೇಕ ಭಯೋತ್ಪಾದಕ ದಾಳಿಗಳನ್ನು ತಡೆಯಲು ಬಿಜೆಪಿ ಆಡಳಿತಕ್ಕೂ ಸಾಧ್ಯವಾಗಲಿಲ್ಲ. ವಾಜಪೇಯಿ ಅವರಿಗೆ ರಾಜಕೀಯದ ಬಗ್ಗೆ ಅರಿವಿತ್ತು. ಆದರೆ ಮೋದಿಗೆ ಅದಿಲ್ಲ.

(ಪೂಜಾರಿ) ಅಪಸ್ವರ ಎತ್ತುತ್ತಿರುವುದೇಕೆ?
ಸಿಎಂ ಸಿದ್ದರಾಮಯ್ಯ ಸರಕಾರದ ಅನೇಕ ಯೋಜನೆಗಳ ಬಗ್ಗೆ ತಾವು (ಪೂಜಾರಿ) ಅಪಸ್ವರ ಎತ್ತುತ್ತಿರುವುದೇಕೆ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೂಜಾರಿ 'ನೋಡಿ ಉಡುಪಿ ಮಠವನ್ನು ಸರಕಾರದ ಅಧೀನಕ್ಕೆ ತೆಗೆದುಕೊಳ್ಳುವುದು ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಇರಲಿಲ್ಲ. ರಾಜ್ಯದಲ್ಲಿ 36,000 ದೇವಾಲಯಗಳು ಮುಜರಾಯಿ ಇಲಾಖೆ ಅಧೀನದಲ್ಲಿವೆ. ಆದರೆ ಅವುಗಳನ್ನು ನೋಡಿಕೊಳ್ಳುವುದಕ್ಕೇ ಜನಾ ಸಾಕಾಗ್ತಿಲ್ಲ. ಆದ್ದರಿಂದ ನಾನು ಉಡುಪಿ ಮಠವನ್ನು ಸರಕಾರ ತನ್ನ ಅಧೀನಕ್ಕೆ ತೆಗೆದುಕೊಳ್ಳುವುದು ಬೇಡ ಎಂದು ಪಟ್ಟುಹಿಡಿದೆ' ಎಂದು ವಿವರಣೆ ನೀಡಿದರು.
ಇನ್ನು ಶಾದಿ ಭಾಗ್ಯ, ಅಹಿಂದ ವಿದ್ಯಾರ್ಥಿಗಳ ಪ್ರವಾಸದ ಬಗ್ಗೆಯೂ ನಾನು ನನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಎಲ್ಲ ವರ್ಗದವರಿಗೂ ಅದನ್ನು ವಿಸ್ತರಿಸಿ ಎಂದು ಸೂಚಿಸಿದೆ ಎಂದು ಬಿ ಜನಾರ್ದನ ಪೂಜಾರಿ ತಮ್ಮ ಅನಿಸಿಕೆ ಹಂಚಿಕೊಂಡರು.












Click it and Unblock the Notifications