ಭೂ ಕುಸಿತ: 1 ತಿಂಗಳವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ಅನುಮಾನ

ಮಂಗಳೂರು, ಆಗಸ್ಟ್ 29: ಮಂಗಳೂರು - ಬೆಂಗಳೂರು ರೈಲು ಸಂಚಾರ ಸದ್ಯದಲ್ಲಿ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಪ್ರತಿದಿನ ಈ ರೈಲು ಮಾರ್ಗದಲ್ಲಿ ಗುಡ್ಡಕುಸಿತ ಘಟನೆಗಳು ನಡೆಯುತ್ತಲೇ ಇವೆ. ರೈಲ್ವೇ ಕಾರ್ಮಿಕರು ಹಳಿಗಳ ಮೇಲೆ ಬಿದ್ದಿರುವ ಭಾರೀ ಮಣ್ಣು , ಬಂಡೆಗಳನ್ನು ತೆರವುಗೊಳಿಸುತ್ತಿದ್ದಾರೆ.

ಆದರೆ ದಿನದಿಂದ ದಿನಕ್ಕೆ ಈ ಮಾರ್ಗದಲ್ಲಿ ಭೂ ಕುಸಿತ ಪ್ರಕರಣಗಳು ನಿರಂತವಾಗಿ ನಡೆಯುತ್ತಿರುವುದು ರೈಲ್ವೆ ಇಲಾಖೆಗೆ ಭಾರೀ ತಲೆ ನೋವಾಗಿ ಪರಿಣಮಿಸಿದೆ. ಸುಬ್ರಹ್ಮಣ್ಯ -ಸಕಲೇಶಪುರ ರೈಲು ಮಾರ್ಗದ ಮಧ್ಯೆ ಎಡಕುಮೇರಿ ಪ್ರದೇಶದಲ್ಲಿ ರೈಲು ಹಳಿ ಮೇಲೆ ಸತತವಾಗಿ ಗುಡ್ಡಗಳು ಕುಸಿದು ಬೀಳುತ್ತಲೇ ಇದೆ.

ಈ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಗುಡ್ಡಗಳ ನಡುವೆ ಹಾದು ಹೋಗುವ ರೈಲ್ವೆ ಮಾರ್ಗದ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು, ಬಂಡೆಗಲ್ಲು ಕುಸಿದು ಬೀಳುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಕನಿಷ್ಠ 15 ರಿಂದ 20 ದಿನಗಳವರೆಗೆ ಮಂಗಳೂರು- ಬೆಂಗಳೂರು ನಡುವೆ ರೈಲು ಓಡಾಟ ಅನುಮಾನ ಎಂದು ಹೇಳಲಾಗಿದೆ.

ಕಳೆದ 15 ದಿನಗಳಿಂದ ಈಗಾಗಲೇ ಬೆಂಗಳೂರು - ಮಂಗಳೂರು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದಲ್ಲಿ ಹಳಿಗಳ ಮೇಲೆ ಬಿದ್ದಿರುವ ಮಣ್ಣು ತೆಗೆಯುವ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದರೂ ರೈಲು ಮಾರ್ಗ ಸುಸ್ಥಿತಿಗೆ ಬರಲು 15 ಅಥವಾ 20 ದಿನ ಬೇಕಾಗಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಬೆಂಗಳೂರು ನಡುವಿನ ರೈಲು ಮಾರ್ಗ ನಿರ್ಮಾಣವಾದ ನಂತರ ಈವರೆಗೆ ಇಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿದಿರಲಿಲ್ಲ. ಎಡಕುಮೇರಿ, ಕಡಗರ ಹಳ್ಳ, ದೋಣಿಗಲ್ ರೈಲು ಮಾರ್ಗದಲ್ಲಿ ಆಗಸ್ಟ್ 14 ರ ಬಳಿಕ ಈ ವರೆಗೆ 62 ಕ್ಕೂ ಹೆಚ್ಚು ಕಡೆ ಗುಡ್ಡಕುಸಿದು ಬಿದ್ದಿದೆ. ಇದಷ್ಟೇ ಅಲ್ಲ, ಇನ್ನು ಏನೆಲ್ಲಾ ಸಮಸ್ಯೆ ಎದುರಾಗಿದೆ ತಿಳಿಯಲು ಮುಂದೆ ಓದಿ...

 ಹಳಿಗಳು ಸಂಪೂರ್ಣ ನಾಶ

ಹಳಿಗಳು ಸಂಪೂರ್ಣ ನಾಶ

ಕೆಲವೆಡೆ ಬಂಡೆ ಕಲ್ಲುಗಳೂ ಬಿದ್ದಿದ್ದು, ಹಳಿಗಳು ಸಂಪೂರ್ಣ ನಾಶವಾಗಿದೆ. 62 ಗುಡ್ಡ ಕುಸಿತದ ಪೈಕಿ 30 ಸ್ಥಳಗಳಲ್ಲಿ ಮಣ್ಣು ತೆರವುಗೊಳಿಸಲಾಗಿದೆ. ಕೇವಲ ಮಣ್ಣು ತೆರವು ಕಾರ್ಯಾಚರಣೆಗೆ 13 ಹಿಟಾಚಿ ಯಂತ್ರ ಹಾಗು 200 ಕಾರ್ಮಿಕರು ಶ್ರಮಿಸುತ್ತಿದ್ದಾರೆ.

ಈ ನಡುವೆ ಮಳೆ ಬೀಳುತ್ತಿರುವುದೂ ಮಣ್ಣು ತೆರವು ಕಾರ್ಯಾಚರಣೆಗೆ ತಡೆಯೊಡ್ಡಿದೆ. ಹಿಟಾಚಿ ಯಂತ್ರಗಳನ್ನು ಮಣ್ಣು ಕುಸಿದು ಬಿದ್ದಲ್ಲಿಗೆ ಕೊಂಡೊಯ್ಯುವುದೇ ಒಂದು ಸಾಹಸದಂತಾಗಿದೆ .

 20 ದಿನಗಳಲ್ಲಿ ರೈಲು ಸಂಚಾರ ಅರಂಭ

20 ದಿನಗಳಲ್ಲಿ ರೈಲು ಸಂಚಾರ ಅರಂಭ

ಈ ನಡುವೆ ಆನೆಗಳ ದಾಳಿ ಭಯ, ಇನ್ನೊಂದೆಡೆ ನೋಡ ನೋಡುತ್ತಿದ್ದಂತೆ ಗುಡ್ಡ ಕುಸಿತದ ಭೀತಿ ಮಧ್ಯೆ ರೈಲ್ವೇ ಕಾರ್ಮಿಕರು ಹಾಗು ಹಿಟಾಚಿ ಆಪರೇಟರ್‌ಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ಸಾಕಷ್ಟು ಬಾರಿ ಒಂದೆಡೆ ಮಣ್ಣು ತೆರವುಗೊಳಿಸಿ ಇನ್ನೊಂದೆಡೆ ಕೆಲಸಕ್ಕೆ ಹೋದಾಗ ಆ ದಾರಿಯಲ್ಲೇ ಮಣ್ಣು ಕುಸಿದು ಕಾರ್ಮಿಕರು ಹಾಗೂ ಅಧಿಕಾರಿಗಳು ದಿಗ್ಬಂಧನಕ್ಕೊಳಗಾದ ಉದಾಹರಣೆಗಳೂ ನಡೆದಿವೆ. ಒಮ್ಮೆ ಹಳಿಗಳ ಮೇಲೆ ಬಿದ್ದ ಮಣ್ಣು ತೆರವುಗೊಂಡರೂ, ಬಳಿಕ ಹಳಿಗಳ ದುರಸ್ತಿ ಕಾಮಗಾರಿ ನಡೆಯಬೇಕಿದೆ.

ನಂತರ ಪ್ರಾಯೋಗಿಕ ಸಂಚಾರ ಆರಂಭಗೊಂಡು ಅಧಿಕಾರಿಗಳ ಪರಿಶೀಲನೆ ನಡೆಯಬೇಕು. ಇದೆಲ್ಲ ಮುಗಿದ ಬಳಿಕ ಮಂಗಳೂರು- ಬೆಂಗಳೂರು ರೈಲು ಸಂಚಾರ ಆರಂಭಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ 20 ದಿನಗಳಲ್ಲಿ ರೈಲು ಸಂಚಾರ ಅರಂಭಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

 ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿತ

ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿತ

ಬೆಂಗಳೂರು -ಮಂಗಳೂರು ನಡುವೆ ಕೇರಳ ಮೂಲಕ ಬೆಂಗಳೂರಿಗೆ ತೆರಳುವ ರೈಲು ಸಂಚಾರ ಇತ್ತೀಚೆಗೆ ಆರಂಭಿಸಲಾಗಿತ್ತು. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ತಲುಪಲು ಈ ರೈಲು 14 ರಿಂದ 15 ಗಂಟೆ ಪ್ರಯಾಣ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಜನರಿಗೆ ಅನಾನುಕೂಲವಾಗಿದ್ದ ಈ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ದಿಢೀರ್ ಕುಸಿದಿತ್ತು ಪರಿಣಾಮ ಈ ರೈಲನ್ನು ಈಗ ಸ್ಥಗಿತಗೊಳಿಸಲಾಗಿದೆ.

 ಎಸ್ ಕೆ ಬಾರ್ಡರ್ ರಸ್ತೆಯಲ್ಲಿ ತೆರಳಬೇಕಿದೆ

ಎಸ್ ಕೆ ಬಾರ್ಡರ್ ರಸ್ತೆಯಲ್ಲಿ ತೆರಳಬೇಕಿದೆ

ಒಂದೆಡೆ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಡಿದೆ. ಇನ್ನೊಂದೆಡೆ ಸಂಪಾಜೆ ಘಾಟ್ ಕೂಡ ಬಂದಾಗಿದೆ. ಉಳಿದಿರುವ ಚಾರ್ಮಾಡಿ ಘಾಟ್ ಹಾಗೂ ಎಸ್ ಕೆ ಬಾರ್ಡರ್ ರಸ್ತೆಯಲ್ಲಿ ತೆರಳುವ ಅನಿವಾರ್ಯತೆ ಇದೆ.

ಆದರೆ ಈ ರಸ್ತೆಯಲ್ಲಿ ಇರುವ ವಾಹನ ದಟ್ಟಣೆ, ಟ್ರಾಫಿಕ್ ಜಾಮ್ ನಲ್ಲಿ ಐದಾರು ಗಂಟೆ ಸಿಕ್ಕಿ ಹಾಕಿಕೊಳ್ಳಬೇಕಾದ ದುಸ್ಥಿತಿಯಲ್ಲಿ ಪ್ರಯಾಣಿಸಬೇಕಾಗಿದೆ. ಹಿರಿಯ ನಾಗರಿಕರು ಹಾಗು ಮಕ್ಕಳನ್ನು ಕರೆದುಕೊಂಡು ಈ ಮಾರ್ಗದಲ್ಲಿ ಪ್ರಯಾಣ ಮಾಡುವುದು ಭಾರೀ ತ್ರಾಸದಾಯಕ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+