ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ: ಮಳೆಯಲ್ಲೇ AJ ಆಸ್ಪತ್ರೆ ವಿರುದ್ಧ ಮುಗಿಬಿದ್ದ ಕುಟುಂಬಸ್ಥರು
ಮಂಗಳೂರು, ಜುಲೈ 26: ಮಂಗಳೂರಿನ ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಬಾಣಂತಿ ಸಂಬಂಧಿಕರು ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಭಾರೀ ಮಳೆಯ ಮಧ್ಯೆ ಮಂಗಳೂರಿನ ಎ.ಜೆ.ಆಸ್ಪತ್ರೆ ರಣರಂಗವಾಗಿದೆ. ಮೃತದೇಹ ಆಸ್ಪತ್ರೆಯಿಂದ ಸಾಗಿಸಲು ಬಿಡದೇ ಕುಟುಂಬಸ್ಥರು ಮತ್ತು ಸಾರ್ವಜನಿಕರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ನೂಕಾಟ ತಳ್ಳಾಟ ನಡೆದಿದೆ.

ಮಂಗಳೂರಿನ ಕುಂಟಿಕಾನ ಬಳಿಯ ಎ.ಜೆ.ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಜುಲೈ2 ರಂದು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಶಿಲ್ಪಾ ಆಚಾರ್ಯ(36) ತನ್ನ ಎರಡನೇ ಹೆರಿಗೆಗಾಗಿ ದಾಖಲಾಗಿದ್ದರು. ಹೊಟ್ಟೆ ನೋವು ಇದ್ದ ಕಾರಣ ಆವತ್ತು ಸಿಜೆರಿನ್ ಮಾಡಿ ಡೆಲೆವರಿ ಮಾಡಬೇಕೆಂದು ಡ್ಯೂಟಿ ಡಾಕ್ಟರ್ ಹೇಳಿದ್ದರು. ಆದರೆ ವೈದ್ಯೆ ವೀಣಾಗೆ ಕರೆ ಮಾಡಿದಾಗ ಭಾನುವಾರವಾದ ಕಾರಣ ಬರಲ್ಲ ಎಂದಿದ್ದರು. ಹೀಗಾಗಿ ಅದೇ ದಿನ ವೀಣಾ ಅನುಪಸ್ಥಿತಿಯಲ್ಲಿ ಬೇರೆ ವೈದ್ಯರು ಶಿಲ್ಪಾಗೆ ಸಿಜೆರಿನ್ ಮಾಡಿ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆಯಾದ ಬಳಿಕ ವೈದ್ಯರು ಹೆಣ್ಣು ಮಗು ಆಗಿದೆ, ಆದರೆ ಗರ್ಭಕೋಶವನ್ನು ತೆಗೆಯಬೇಕಾಗುತ್ತದೆ ಎಂದಿದ್ದರು. ಎರಡು ದಿನಗಳ ನಂತರ ಶಿಲ್ಪಾಗೆ ಜ್ವರ ಬಂದಿದೆ ಎಂದು ಚಿಕಿತ್ಸೆ ನೀಡಲಾಗಿತ್ತು. ಐದು ದಿನಗಳ ನಂತರ ಬ್ರೆನ್ ಮೇಜರ್ ಡ್ಯಾಮೇಜ್ ಆಗಿದೆ ಎಂದು ವೈದ್ಯರು ಕುಟುಂಬಸ್ಥರು ತಿಳಿಸಿದ್ದರು. ಹೀಗೆ ಜುಲೈ 25ರ ತನಕ ಕೋಮಾ ಸ್ಥಿತಿಯಲ್ಲಿದ್ದ ಶಿಲ್ಪಾ, ಐಸಿಯುನಲ್ಲಿ ಸಾವನ್ನಪ್ಪಿದ್ದರು. ಶಿಲ್ಪಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ಬೇರೆ ವೈದ್ಯರಿಂದ ಡೆಲಿವರಿ ಮಾಡಿಸಿರುವ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಲ್ಪಾ ಪತಿ ಪ್ರದೀಪ್ ಆಚಾರ್ಯ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎ. ಜೆ ಆಸ್ಪತ್ರೆಯ ವೈದ್ಯರಾದ ವೀಣಾ ಭಗವಾನ್ ಹಾಗೂ ಡೀನ್ ಅಶೋಕ ಹೆಗಡೆ, ಅನಸ್ತೇಶಿಯಾ ಡಾ.ಗುರುರಾಜ್ ತಂತ್ರಿ, ಆಡಳಿತ ವರ್ಗ ಹಾಗೂ ಸಿಬ್ಬಂದಿಗಳ ನಿರ್ಲಕ್ಷತನವೇ ಶಿಲ್ಪಾ ಸಾವಿಗೆ ಕಾರಣ ಎಂದು ದೂರು ನೀಡಿದ್ದಾರೆ. ಸದ್ಯ 174(3)(vi) ಸಿ.ಆರ್.ಪಿ.ಸಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದು, ಈ ವೇಳೆ ಎ.ಜೆ. ಆಸ್ಪತ್ರೆ ಬಳಿ ಮೃತದೇಹ ತಡೆದು ಸಂಬಂಧಿಕರು, ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಆಡಳಿತ ಮಂಡಳಿ ಸ್ಥಳಕ್ಕೆ ಬರುವಂತೆ ಮಳೆಯೇ ಮಧ್ಯೆ ಪ್ರತಿಭಟನೆ ನಡೆಸಿದ್ದಾರೆ.
ಅಂಬ್ಯುಲೆನ್ಸ್ ತಡೆದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕಾಟ ನಡೆದಿದೆ. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೊನೆಗೂ ಪೊಲೀಸರು ಹರಸಾಹಸ ಪಟ್ಟು ಮೃತದೇಹ ಸಾಗಿಸಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಹೋರಾಟಗಾರ್ತಿ ಪವಿತ್ರಾ, 'ಎಜೆ ಆಸ್ಪತ್ರೆ ಯ ವೈದ್ಯರ ನಿರ್ಲಕ್ಷ್ಯ ಬಗ್ಗೆ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಂಬಂಧಿಕರ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ. ಈ ಆಸ್ಪತ್ರೆಯಲ್ಲಿ ಬಡರೋಗಿಗಳು ಪ್ರಯೋಗದ ವಸ್ತುಗಳಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಂದ ಬಡ ರೋಗಿಗಳಿಗೆ ಚಿಕಿತ್ಸೆ, ಡೆಲಿವರಿಯನ್ನು ಮಾಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಶಿಲ್ಪಾ ಆಚಾರ್ಯ ಪತಿ ಪ್ರದೀಪ್ ಮಾತನಾಡಿ, 'ವೈದ್ಯರ ನಿರ್ಲಕ್ಷ್ಯದಿಂದ ನನ್ನ ಹೆಂಡತಿಯನ್ನು ಕಳೆದುಕೊಂಡಿದ್ದೇನೆ. 25 ದಿನಗಳಿಂದ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದೇವೆ. ನನ್ನ ಮೊದಲ ಮಗು ಹೆಣ್ಣು. ಈಗಲೂ ಹೆಣ್ಣು ಮಗು. ತಾಯಿ ಇಲ್ಲದ ಮಕ್ಕಳನ್ನು ನಾನು ಹೇಗೆ ಸಾಕಲಿ' ಎಂದು ಕಣ್ಣೀರು ಹಾಕಿದ್ದಾರೆ.












Click it and Unblock the Notifications