ಕ್ಯಾರ್ ಚಂಡಮಾರುತ; ಉರುಳುತ್ತಿದ್ದ ಪೆಂಡಾಲ್ ನಿಂದ ಪಾರಾದ ಸಾವಿರಾರು ವಿದ್ಯಾರ್ಥಿಗಳು
ಮಂಗಳೂರು, ಅಕ್ಟೋಬರ್ 25: ಕರಾವಳಿಯಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಮಳೆ ಗಾಳಿಯ ರಭಸ ಜೋರಾಗಿದೆ. ಕ್ಯಾರ್ ಚಂಡಮಾರುತದ ಪರಿಣಾಮ ಕರಾವಳಿಯ ತೀರಗಳಲ್ಲಿ ಹೆಚ್ಚಾಗಿದೆ.
ಕಳೆದ ನಾಲ್ಕೈದು ದಿನಗಳಿಂದಲೂ ಮಂಗಳೂರಿನಲ್ಲಿ ಇದೇ ಸ್ಥಿತಿ ಮುಂದುವರೆದಿದ್ದು, ಇಂದು ಮಳೆಯಿಂದಾಗಿ ಸಂಭವಿಸುತ್ತಿದ್ದ ಭಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.
ಇಂದು ಮಂಗಳೂರು ಪಕ್ಕದ ರಾಜ್ಯ ಕೇರಳದ ಕಾಸರಗೋಡಿನಲ್ಲಿ ಭಾರೀ ಮಳೆಯಾಗುತ್ತಿತ್ತು. ಕಾಸರಗೋಡಿನ ಕೊಳತ್ತೂರು ಶಾಲೆಯಲ್ಲಿ ಇಂದು ಕಲೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೂ ನೆರೆದಿದ್ದರು. ಪೆಂಡಾಲ್ ಹಾಕಿ ಅದರ ಅಡಿಯಲ್ಲಿ 1500ಕ್ಕೂ ಅಧಿಕ ವಿದ್ಯಾರ್ಥಿಗಳು ಕುಳಿತಿದ್ದರು.

ಆದರೆ ಇದ್ದಕ್ಕಿದ್ದಂತೆ ಸುರಿದ ಭಾರೀ ಮಳೆಗೆ ಪೆಂಡಾಲ್ ಬೀಳಲು ಆರಂಭಿಸಿದೆ. ಅದನ್ನು ಗಮನಿಸಿದ ವಿದ್ಯಾರ್ಥಿಗಳು ಪೆಂಡಾಲ್ ಬೀಳುವ ಸಮಯಕ್ಕೆ ಸರಿಯಾಗಿ ಓಡಿಹೋಗಿ ಪಾರಾಗಿದ್ದಾರೆ.
ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ. ಕೆಲ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.












Click it and Unblock the Notifications