ಧರ್ಮ ದಂಗಲ್ ಕರಿನೆರಳಿನ ಮಧ್ಯೆಯೇ ಅದ್ಧೂರಿಯಾಗಿ ಸಂಪನ್ನಗೊಂಡ ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ
ಮಂಗಳೂರು, ನವೆಂಬರ್29: ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಉತ್ಸವಕ್ಕೆ ಈ ಬಾರಿ ಧರ್ಮ ದಂಗಲ್ನ ಕರಿನೆರಳು ಬಿದ್ದಿದೆ. ಹಲವಾರು ವರ್ಷಗಳಿಂದ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರಿಗೆ ಈ ಬಾರಿ ಹಿಂದೂ ಸಂಘಟನೆಗಳು ಬಹಿಷ್ಕಾರ ಹಾಕಿದೆ.
ಧರ್ಮ ದಂಗಲ್ ಸಂಘರ್ಷದ ಆತಂಕದಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಜಾತ್ರೆ ಸಂಪನ್ನಗೊಂಡಿದೆ. ಬಹಿಷ್ಕಾರ ಹಿನ್ನೆಲೆಯಲ್ಲಿ ಪ್ರತಿ ವರ್ಷ ಜಾತ್ರೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸ್ಲಿಮರು ಈ ಬಾರಿ ಬಂದಿಲ್ಲ ಎನ್ನಲಾಗಿದೆ.
Mangaluru blast case: ಉಡುಪಿ ಮಠಕ್ಕೂ ಭೇಟಿ ನೀಡಿದ್ದ ಆರೋಪಿ ಶಾರಿಕ್
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿಯಲ್ಲೂ ಧರ್ಮ ದಂಗಲ್ ಸದ್ದು ಮಾಡಿದ್ದು, ಚಂಪಾಷಷ್ಠಿಗೆ ಮುಸ್ಲಿಂ ವ್ಯಾಪಾರಿಗಳು ಬರಬಾರದು ಎಂದು ಹಿಂದೂ ಸಂಘಟನೆಗಳು ತಾಕೀತು ಮಾಡಿದ್ದರು. ಈ ಹಿನ್ನಲೆಯಲ್ಲಿ ಮೊದಲ ಬಾರಿಗೆ ಚಂಪಾಷಷ್ಠಿ, ಮುಸ್ಲಿಂ ವ್ಯಾಪಾರಿಗಳಿಲ್ಲದೆ ನಡೆದಿದೆ.
ಮೊದಲ ಬಾರಿ ಚಂಪಾಷಷ್ಠಿಯಿಂದ ಹೊರಗುಳಿದ ಮುಸ್ಲಿಂ ವ್ಯಾಪಾರಿಗಳು
ಚಂಪಾಷಷ್ಠಿಯಲ್ಲಿ ಮುಸ್ಲಿಂ ವ್ಯಾಪಾರಿಗಳು ಅಂಡಿಗಳನ್ನು ತೆರೆದು ವ್ಯವಹಾರ ನಡೆಸುವಂತಿಲ್ಲ ಎಂದು ಹಿಂದೂ ಸಂಘಟನೆಗಳು ಬಹಿಷ್ಕಾರ ಹಾಕಿದ್ದರು. ಈ ಆಗ್ರಹದ ಮೇರೆ ಮುಸ್ಲಿಂ ವ್ಯಾಪಾರಿಗಳು ಚಂಪಾಷಷ್ಠಿಗೆ ಬಾರದೆ ಜಾತ್ರೋತ್ಸವದಿಂದ ದೂರವುಳಿದಿದ್ದಾರೆ. ಹೀಗಾಗಿ ಚಂಪಾಷಷ್ಠಿಯನ್ನು ಆವರಿಸಿದ್ದ ಆತಂಕ ಸರಿದಿದ್ದು, ನಿರಾಳವಾಗಿ ಅದ್ಧೂರಿಯಾಗಿ ಜಾತ್ರಾಮಹೋತ್ಸವ ನಡೆದಿದೆ. ಮಂಗಳವಾರ ಬೆಳಗ್ಗೆ 7.05ಕ್ಕೆ ವೃಶ್ಚಿಕ ಲಗ್ನ ಸುಮೂಹೂರ್ತದಲ್ಲಿ ಬ್ರಹ್ಮ ರಥಾರೂಢನಾದ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ನಡೆದಿದೆ. ಈ ವೇಳೆ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಿದ್ದಾರೆ.
ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂ ಸಂಘಟನೆಗಳ ಬಹಿಷ್ಕಾರ
ಕಳೆದ ವರ್ಷ ಕರಾವಳಿಯಲ್ಲಿ ಆರಂಭವಾಗಿದ್ದ ಧರ್ಮ ದಂಗಲ್ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಷಷ್ಠಿಗೆ ತಟ್ಟಿದೆ. ಈ ಹಿನ್ನಲೆಯಲ್ಲಿ ಚಂಪಾಷಷ್ಠಿಯ ಜಾತ್ರಾ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡಬಾರದು ಎಂದು ಹಿಂದೂ ಸಂಘಟನೆಗಳು ಬ್ಯಾನರ್ ಅಳವಡಿಸಿದ್ದರು. ದೆಹಲಿ ಶ್ರದ್ಧಾ ಹತ್ಯೆ, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಸೇರಿದಂತೆ ಹಲವು ಪ್ರಕರಣದಲ್ಲಿ ಮುಸ್ಲಿಮರೇ ತೊಡಗಿಕೊಂಡು ರಾಷ್ಟ್ರದಲ್ಲಿ ಅಭದ್ರತೆ ಕಾರಣರಾಗಿದ್ದಾರೆ. ಹೀಗಾಗಿ ಅವರಿಗೆ ಕುಕ್ಕೆಯಲ್ಲಿ ವ್ಯಾಪಾರ ಮಾಡುವ ಅವಶ್ಯಕತೆ ಇಲ್ಲ ಎಂದು ಹಿಂದೂ ಸಂಘಟನೆಗಳು ಬಹಿಷ್ಕಾರ ವಿಧಿಸಿದ್ದರು.
ಕುಕ್ಕೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಚಂಪಾಷಷ್ಠಿಯ ರಥೋತ್ಸವ ಹಾಗೂ ವಿಶೇಷ ಪೂಜೆ ಸಲ್ಲಿಕೆಗೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಕುಕ್ಕೆಗೆ ಆಗಮಿಸಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಜರಾಯಿ ಇಲಾಖೆಯ ಆದೇಶದನ್ವಯ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಹಿಂದೂ ಜಾಗರಣ ವೇದಿಕೆ ಮನವಿಯನ್ನು ಸಹ ಮಾಡಿತ್ತು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲು
ಇನ್ನು ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ನಂತರ ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ನ ಕಾವು ಹೆಚ್ಚಾಗಿದೆ. ಕಳೆದ ವರ್ಷದಿಂದ ಆರಂಭವಾದ ಈ ಧರ್ಮ ದಂಗಲ್ ಮುಂದಿನ ವರ್ಷಕ್ಕೂ ವ್ಯಾಪಿಸುವ ಮನ್ಸೂಚನೆಗಳು ಹೆಚ್ಚಾಗಿದೆ. ಕರಾವಳಿ ಭಾಗದಲ್ಲಿ ಇನ್ನು ಮುಂದೆ ನೂರಾರು ದೇವಾಲಯಗಳ ಜಾತ್ರಾಮಹೋತ್ಸವ ಆರಂಭವಾಗಲಿದೆ. ಈ ವೇಳೆ ಇತರ ಧರ್ಮದವರಿಗೆ ವ್ಯಾಪಾರ ನಿರ್ಬಂಧದ ಬಿಸಿ ಹೆಚ್ಚಾಗುವ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಾಗಿದೆ.