ವಿವಾದಕ್ಕೆ ಕಾರಣವಾದ ಕುಕ್ಕೆ ದೇವಾಲಯದ ಸುಪ್ರಭಾತ
ಮಂಗಳೂರು, ಜು. 01 : ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಮುಂಜಾನೆ ಹಾಕುತ್ತಿದ್ದ ಸುಪ್ರಭಾತವನ್ನು ನಿಲ್ಲಿಸುವ ಸಾಧ್ಯತೆ ಇದೆ. ಸುಪ್ರಭಾತದ ಶಬ್ದದಿಂದ ತೊಂದರೆಯಾಗುತ್ತಿದೆ ಎಂದು ಮಂಗಳೂರು ಜಿಲ್ಲಾಧಿಕಾರಿಗಳಿಗೆ ದೂರು ಹೋಗಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸುಪ್ರಭಾತ ಹಾಕಿ ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಮೂರು ವರ್ಷಗಳಿಂದ ಕುಕ್ಕೆ ದೇವಾಲಯದ ಆಡಳಿತ ಮಂಡಳಿ ಮುಂಜಾನೆ ಸುಪ್ರಭಾತ ಹಾಕುತ್ತಿದೆ. ಬೆಳಗ್ಗೆ 4 ಗಂಟೆಯಿಂದ 6.30ರ ತನಕ ಸುಪ್ರಭಾತ ಕೇಳಿಬರುತ್ತದೆ. ಆದರೆ, ಇದರ ಧ್ವನಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ದೂರು ದಾಖಲಾಗಿದೆ. [ಕುಕ್ಕೆ ಸುಬ್ರಮಣ್ಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ?]

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಿಗೆ ಸುಪ್ರಭಾತದ ಬಗ್ಗೆ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಧ್ವನಿಯನ್ನು ಕಡಿಮೆ ಮಾಡಿ ಎಂದು ಜಿಲ್ಲಾಧಿಕಾರಿಗಳು ದೇವಾಲಯಕ್ಕೆ ಸೂಚನೆ ಕೊಟ್ಟಿದ್ದಾರೆ. [ಮಳೆಗಾಲದಲ್ಲೂ ಕುಕ್ಕೆ ಕ್ಷೇತ್ರ ಸುದ್ದಿಯಾಗುವುದು ಖಂಡಿತ]
ದೂರಿನಲ್ಲೇನಿದೆ? : ಕುಕ್ಕೆ ಸುಬ್ರಮಣ್ಯ ಶಾಂತವಾದ ಪ್ರದೇಶ. ಪ್ರತಿದಿನ ಮುಂಜಾನೆ ಧ್ವನಿ ವರ್ಧಕದ ಮೂಲಕ ಸುಪ್ರಭಾತ ಹಾಕುವುದರಿಂದ ಸಾರ್ವಜನಿಕರಿಗೆ, ಭಕ್ತರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಆದ್ದರಿಂದ ಇದನ್ನು ನಿಲ್ಲಿಸಲು ಅಥವ ಶಬ್ದ ಕಡಿಮೆ ಮಾಡಲು ಆದೇಶ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. [ದೇವಾಲಯಗಳ ಆನ್ ಲೈನ್ ಸೇವೆ ಬುಕ್ ಮಾಡುವುದು ಹೇಗೆ?]
ಆದೇಶದ ವಿರುದ್ಧ ಭಕ್ತರ ಆಕ್ರೋಶ : ಜಿಲ್ಲಾಡಳಿತ ನೀಡಿರುವ ಸೂಚನೆ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಮೂರು ವರ್ಷಗಳಿಂದ ಸುಪ್ರಭಾತ ಹಾಕಲಾಗುತ್ತಿದ್ದು, ಈಗ ಏಕೆ ತೊಂದರೆಯಾಗುತ್ತಿದೆ? ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಮಡ್ತಿಲ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತದ ಆದೇಶದಿಂದ ಭಕ್ತರಿಗೆ ನೋವಾಗಿದೆ. ಈ ಆದೇಶ ಧಾರ್ವಿುಕ ಸ್ವಾತಂತ್ರ್ಯವನ್ನು ಹತ್ತಿಕ್ಕುವಂಥದ್ದು. ಈ ಆದೇಶವನ್ನು ಹಿಂಪಡೆಯಬೇಕು ಎಂದು ಭಕ್ತರು ಒತ್ತಾಯಿಸುತ್ತಿದ್ದಾರೆ. ಈ ಆದೇಶ ಹಿಂದೂ ದೇವಾಲಯಗಳಿಗೆ ಮಾತ್ರವೇ? ಎಂಬ ಚರ್ಚೆಯೂ ನಡೆಯುತ್ತಿದೆ.












Click it and Unblock the Notifications