ದೇವಮಾನವನನ್ನು ಜೈಲಿಗಟ್ಟಿದ ಕಾಸರಗೋಡಿನ ಸಿಬಿಐ ಅಧಿಕಾರಿ ನಾರಾಯಣನ್
ಮಂಗಳೂರು, ಆಗಸ್ಟ್ 28: ದೇರಾ ಸಚ್ಚಾ ಸೌದದ ಮುಖ್ಯಸ್ಥ, ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಂಧನ, ಶಿಕ್ಷೆ, ದೇಶಾದ್ಯಂತ ಚರ್ಚೆಯಾಗುತ್ತಿದೆ. ಭಾರೀ ಜನ ಬೆಂಬಲ, ರಾಜಕೀಯ, ಅಧಿಕಾರಿ ವಲಯದಲ್ಲೂ ಪ್ರಭಾವಿಯಾಗಿದ್ದ ಸಿಂಗ್ ನನ್ನು ಜೈಲುಗಟ್ಟುವುದರ ಹಿಂದೆ ಸಿಬಿಐ ಅಧಿಕಾರಿಯೊಬ್ಬರು ಆಹೋರಾತ್ರಿ ಕಾರ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ.
ಕಾಸರಗೋಡು ಜಿಲ್ಲೆಯ ಉಪ್ಪಳ ಮುಳಿಂಜ ನಿವಾಸಿ ಮುಳಿಂಜ ನಾರಾಯಣನ್ (65) ಎಂಬವರೇ ಈ ಅಧಿಕಾರಿಯಾಗಿದ್ದಾರೆ.
1970 ರಲ್ಲಿ ಕಾಸರಗೋಡಿನ ವಿದ್ಯಾನಗರ ಸರಕಾರಿ ಕಾಲೇಜಿನ ವಿಜ್ಞಾನ ಪದವಿ ಪಡೆದ ಬಳಿಕ ನಾರಾಯಣನ್ ರು ಸಿಬಿಐಗೆ ಸೇರ್ಪಡೆಯಾಗಿದ್ದರು. ಅವರು ಎಸ್.ಐ. ರ್ಯಾಂಕ್ ನಿಂದ ಸಿಬಿಐನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ತಮ್ಮ ದಕ್ಷ ಸೇವೆಯಿಂದ ಭಡ್ತಿ ಪಡೆಯುತ್ತಾ ಹೋದ ಅವರು ಸಿಬಿಐ ಡಿಐಜಿ ಹುದ್ದೆಗೇರಿ ನಂತರ ಸೇವೆಯಿಂದ ನಿವೃತ್ತರಾಗಿದ್ದರು. ಸದ್ಯ ನಾರಾಯಣನ್ ರು ದೆಹಲಿಯಲ್ಲಿ ವಾಸವಾಗಿದ್ದಾರೆ.
ಜೀವಮಾನದ ಕ್ಲಿಷ್ಟ ಪ್ರಕರಣ
ಗುರ್ಮೀತ್ ರಾಮ್ ರಹೀಮ್ ಸಿಂಗ್ ನ ಆತ್ಯಾಚಾರ ಪ್ರಕರಣ ನಾರಾಯಣನ್ ಅವರ ವೃತ್ತಿ ಜೀವನದ ಕ್ಲಿಷ್ಟ ಪ್ರಕರಣವಾಗಿತ್ತು.
2002 ಸೆಪ್ಟೆಂಬರ್ ನಲ್ಲಿ ದೇವ ಮಾನವನ ವಿರುದ್ಧದ ಮಾನಭಂಗ ಪ್ರಕರಣವನ್ನು ಪಂಜಾಬ್-ಹರ್ಯಾಣ ಹೈಕೋರ್ಟ್ ಸಿಬಿಐಗೆ ವರ್ಗಾಯಿಸಿತ್ತು. ದೇವ ಮಾನವನ ಹಣ, ಜನಬೆಂಬಲ, ರಾಜಕೀಯ ಪ್ರಭಾವದ ಮುಂದೆ ಮೊದಲ ಐದು ವರ್ಷಗಳ ಕಾಲ ತನಿಖೆಯಲ್ಲಿ ಯಾವೊಂದು ಪ್ರಗತಿಯೂ ನಡೆದಿರಲಿಲ್ಲ. ತನಿಖಾಧಿಕಾರಿಗಳನ್ನು ರಾಜಕೀಯ ಒತ್ತಡದ ಬಲದಿಂದ ತನಗೆ ಬೇಕಾದಂತೆ ಸಿಲುಕಿಸುತ್ತಿದ್ದ ಗುರ್ಮೀತ್ ರಾಮ್ ರಹೀಮ್ ಸಿಂಗ್.
ನಾರಾಯಣನ್ ರ ಕೈಗೆ ಬಂದ ತನಿಖೆ
2002 ದಶಂಬರ್ 12 ರಂದು ಸಿಬಿಐ ಕೇಸು ದಾಖಲಿಸಿದ ನಂತರ ತನಿಖೆ ನಾರಾಯಣನ್ ರ ಕೈಗೆ ಬಂತು. ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಒತ್ತಡ ಹೇರಿದರೂ ನಾರಾಯಣನ್ ರು ಮಾತ್ರ ಜಗ್ಗಲಿಲ್ಲ. ಆಗ ಖುದ್ದು ನಾರಾಯಣನ್ ರಿಗೇ ದೇವಮಾನವನ ಕಡೆಯಿಂದ ಬೆದರಿಕೆ ಬಂದಿತ್ತು. ಆದರೆ ಅವರು ಯಾವುದಕ್ಕೂ ಜಗ್ಗಲಿಲ್ಲ.
ಮುಂದುವರಿದ ತನಿಖೆ
ತನಿಖೆಯನ್ನು ವಹಿಸಿಕೊಟ್ಟಿದ್ದು ನ್ಯಾಯಾಲಯ ಎಂಬ ವಿಶ್ವಾಸದ ಬಲದಿಂದ ತಮ್ಮ ಕೆಲಸ ಮುಂದುವರಿಸಿದರು ನಾರಾಯಣನ್. ತಿಂಗಳುಗಳು, ವರ್ಷಗಳು ಕಳೆದವು; ತನಿಖೆಯ ಕೊನೆಗೆ ದೂರುದಾರೆ, ಮಾಜಿ ಆಶ್ರಮವಾಸಿಯನ್ನು ನಾರಾಯಣನ್ ಪತ್ತೆ ಹಚ್ಚಿದರು. ಅಲ್ಲಿಗೆ ಒಂದು ಹಂತದ ತನಿಖೆ ಮುಗಿದಿತ್ತು.
ಮ್ಯಾಜಿಸ್ಟೇಟರ ಮುಂದೆ ಯುವತಿಯನ್ನು ಕರೆ ತಂದ ಅಧಿಕಾರಿ
ತಂದೆಯ ಸ್ಥಾನದಲ್ಲಿ ನಿಂತು ಕೊಂಡು ಅವರು ಯುವತಿಯನ್ನು ಮ್ಯಾಜಿಸ್ಟೇಟರ ಮುಂದೆ ಹಾಜರುಪಡಿಸಿ ಕ್ರಿಮಿನಲ್ ಕಾಯ್ದೆ 164ರ ಪ್ರಕಾರ ಹೇಳಿಕೆ ದಾಖಲಿಸಿಕೊಂಡರು. ಕೇಸು ಭವಿಷ್ಯದಲ್ಲಿ ದುರ್ಬಲಗೊಳ್ಳದಿರಲು ನಾರಾಯಣನ್ ಅವರು ಈ ರೀತಿ ಮಾಡಿದ್ದರು.
ದೇವಮಾನವನನ್ನು ತನಿಖೆ ಮಾಡುವ ಹಂತದಲ್ಲೂ ರಾಜಕೀಯ ಒತ್ತಡ ಬಂತು. ಆದರೆ ನಾರಾಯಣನ್ ಹಾಗೂ ಅವರ ತಂಡ ಯಾವುದಕ್ಕೂ ಇಟ್ಟ ಹೆಜ್ಜೆ ಹಿಂದೆ ತೆಗೆಯಲಿಲ್ಲ.
ದೇವಮಾನವನಿಗೆ ಚಳಿ ಬಿಡಿಸಿದ್ದ ಅಧಿಕಾರಿ
ದೇವಮಾನವನ ವಿಚಾರಣೆಗೆ ನಾರಾಯಣರಿಗೆ ಅರ್ಧ ಗಂಟೆ ಮಾತ್ರ ಸಮಯ ಸಿಕ್ಕಿತ್ತು. ವಿಚಾರಣೆ ವೇಳೆ ಸ್ವಯಂ ಘೋಷಿತ ರೇಪಿಸ್ಟ್ ದೇವಮಾನವ ಆರಂಭದಲ್ಲಿ ಎಲ್ಲವನ್ನೂ ಮರೆಮಾಚಲು ಯತ್ನಿಸಿದ್ದ. ಆದರೆ ನಾರಾಯಣನ್ ಅವರ ಖಡಕ್ ವಿಚಾರಣೆ ಎದುರು ದೇವಮಾನವನ ಆಟ ನಡೆಯಲಿಲ್ಲ.
ಇದೀಗ ರಾಮ್ ರಹೀಮ್ ಸಿಂಗ್ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಮೂಲಕ ನಾರಾಯಣನ್ ರ ಸೇವೆ ಸಾರ್ಥಕವಾಗಿದೆ.
ರಾಮ್ ರಹೀಮ್ ಸಿಂಗ್ ಗೆ ಜೈಲು ಶಿಕ್ಷೆಯಾದ ಸಂದರ್ಭ ರಾಷ್ಟ್ರೀಯ ಮಾಧ್ಯಮಗಳು ನಾರಾಯಣನ್ ರ ಸಂದರ್ಶನವನ್ನೂ ನಡೆಸಿದ್ದವು.
ಹಲವು ಪ್ರಕರಣಗಳ ತನಿಖೆ ನಡೆಸಿದ್ದ ಅನುಭವಿ
vನಾರಾಯಣ ಅವರು 38 ವರ್ಷಗಳ ಕಾಲ ಸಿಬಿಐಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮಹಾತ್ಮಾ ಗಾಂಧಿ ಕೊಲೆ, ಮಾಜಿ ಪ್ರಧಾನಮಂತ್ರಿ ರಾವಗಾಂಧಿ ಕೊಲೆ, ಅಯೋಧ್ಯಾ ರಾಮ ಮಂದಿರ ಪ್ರಕರಣ, ಕಂದಹಾರ್ ವಿಮಾನ ಅಪಹರಣ... ಹೀಗೆ ಹಲವು ಪ್ರಕರಣಗಳ ತನಿಖೆ ನಡೆಸಿದ್ದ ಸಿಬಿಐ ತಂಡದಲ್ಲಿ ನಾರಾಯಣನ್ ಸದಸ್ಯರಾಗಿದ್ದರು.
2009ರಲ್ಲಿ ಸೇವೆಯಿಂದ ನಿವೃತ್ತಿ
2009 ರಲ್ಲಿ ಸೇವೆಯಿಂದ ನಿವೃತ್ತರಾದ ಅವರನ್ನು ಅದೇ ವರ್ಷ ಸಿಬಿಐಯ ಜಂಟಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು. 38 ವರ್ಷದ ಸೇವೆಯ ಬಳಿಕ ಇವರಿಗೆ 1992 ರಲ್ಲಿ ಉತ್ತಮ ಸೇವೆಗಿರುವ ಪೊಲೀಸ್ ಪದಕ, 1999 ರಲ್ಲಿ ರಾಷ್ಟ್ರಪತಿಯ ಪೊಲೀಸ್ ಪದಕ ಲಭಿಸಿತ್ತು.