ಮೋದಕ ಪ್ರಿಯನಾದ ಗಣಪನಿಗೆ ಸೌತೆಕಾಯಿ ಬಲು ಇಷ್ಟ!

ಮಂಗಳೂರು, ಆಗಸ್ಟ್. 24 : ಈ ಗಣಪನಿಗೆ ಅಂತಿಂಥ ಗುಡಿ ಸಾಲಲ್ಲ. ಗುಡಿ ಕಟ್ಟಿದರೆ ಅದರ ನಿರ್ಮಾಣ ಒಂದೇ ದಿನದಲ್ಲಾಗಬೇಕು ಹಾಗೂ ಗುಡಿಯ ಎತ್ತರ ಕಾಶಿ ವಿಶ್ವನಾಥನ ಮುಕುಟಕ್ಕೆ ತೋರುವಂತಿರಬೇಕು. ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕದ ಬಯಲು ಆಲಯದ ಗಣೇಶನ ವಿಶಿಷ್ಟತೆ.

ರಾಜ್ಯದಲ್ಲಿ ಗೋಪುರವಿಲ್ಲದೆ, ಗರ್ಭಗುಡಿಯಿಲ್ಲದೇ ಇರುವ ದೇವಸ್ಥಾನಗಳು ಇರುವುದು ವಿರಳವಾಗಿದ್ದರೆ, ಈ ಕ್ಷೇತ್ರದ ಅಧಿದೇವನಾದ ಗಣಪತಿಗೆ ಪ್ರಕೃತಿಯೇ ಗರ್ಭಗುಡಿ. ಇಲ್ಲಿಗೆ ಬರುವ ಭಕ್ತಾಧಿಗಳು ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿಯನ್ನು ತರಬೇಕಾಗಿಲ್ಲ, ಮೋದಕ ಪ್ರಿಯನಾದ ಗಣಪನಿಗೆ ಗಂಟೆಗಳೇ ಹರಕೆಯಾಗಿದ್ದು, ಅದೂ ಕೊಡಲಾಗದವನು ಸೌತೆಕಾಯಿಯನ್ನು ಕೊಟ್ಟರೂ ದೇವ ಪ್ರಸನ್ನನಾಗುತ್ತಾನೆ.

ಪರಶುರಾಮ ಸೃಷ್ಟಿಯ ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ ಹಲವು ಇತಿಹಾಸ ಪ್ರಸಿದ್ಧವಾದಂತಹ ಕ್ಷೇತ್ರಗಳಿಗೆ ಪ್ರಸಿದ್ಧವಾಗಿದೆ. ಧರ್ಮಸ್ಥಳ, ನಾಗನ ಕ್ಷೇತ್ರವಾದ ಸುಬ್ರಮಣ್ಯ ಇದೆ. ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ತೆರಳುವಂತಹ ರಸ್ತೆಯ ಮಧ್ಯದಲ್ಲೇ ಇರುವಂತಹ ಕ್ಷೇತ್ರವೇ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ.

ಇತರ ದೇವಸ್ಥಾನಗಳಿಗೆ ಇರುವಂತಹ ಗೋಪುರಗಳು, ಗರ್ಭಗುಡಿಗಳು ಈ ದೇವನಿಗಿಲ್ಲ. ಬಯಲೇ ಇವನ ಆಲಯ, ಪ್ರಕೃತಿಯೇ ಇವನ ಗರ್ಭಗುಡಿ. ಅನಾದಿ ಕಾಲದಲ್ಲಿ ಈ ಪ್ರದೇಶದಲ್ಲಿ ದನಕಾಯುವ ಗೊಲ್ಲರಿಗೆ ಕಲ್ಲಿನ ರಾಶಿಗಳ ಮಧ್ಯೆ ಗಣಪತಿಯ ವಿಗ್ರಹವೊಂದು ದೊರೆತಿದ್ದು, ಆ ಗೊಲ್ಲರು ಇದನ್ನು ಒಂದು ಸ್ಥಳದಲ್ಲಿ ಪ್ರತಿಷ್ಟಾಪಿಸಿ ನಿತ್ಯ ಪೂಜೆಯನ್ನು ನೆರವೇರಿಸುತ್ತಿದ್ದರಂತೆ.

ಗಣಪನಿಗೆ ನೈವೇದ್ಯದ ರೂಪದಲ್ಲಿ ಕೊಡಲು ಈ ಗೊಲ್ಲರಿಗೆ ಯಾವುದೇ ವಿಶೇಷ ವಸ್ತುಗಳು ಸಿಗದ ಪರಿಣಾಮ, ಈ ಭಾಗದಲ್ಲಿ ಯಥೇಚ್ಛವಾಗಿ ಬೆಳೆಯುತ್ತಿದ್ದಂತಹ ಸೌತೆಕಾಯಿಯನ್ನೇ ನೈವೇದ್ಯದ ರೂಪದಲ್ಲಿ ನೀಡಿದ್ದರಂತೆ. ಈ ಕಾರಣಕ್ಕಾಗಿಯೇ ಈ ಕ್ಷೇತ್ರಕ್ಕೆ ಸೌತಡ್ಕ ಎನ್ನುವ ಹೆಸರು ಬಂತು ಎನ್ನುವ ನಂಬಿಕೆಯೂ ಇದೆ.

ಇಂದಿಗೂ ಗುಡಿ ನಿರ್ಮಿಸಿಲ್ಲ

ಇಂದಿಗೂ ಗುಡಿ ನಿರ್ಮಿಸಿಲ್ಲ

ಬಯಲೇ ತನ್ನ ಗುಡಿಯಾಗಿರಬೇಕು ಎಂಬ ಕಾರಣಕ್ಕೇನೋ ಈ ಕ್ಷೇತ್ರಕ್ಕೆ ಇಂದಿನವರೆಗೂ ಗುಡಿ,ಗೋಪುರವನ್ನು ನಿರ್ಮಿಸುವ ಪ್ರಯತ್ನ ನಡೆದಿಲ್ಲ. ಹಿಂದೆ ಶ್ರೀಮಂತ ಬ್ರಾಹ್ಸಣನೊಬ್ಬನಿಗೆ ಈ ಕ್ಷೇತ್ರಕ್ಕೆ ಗೋಪುರವೊಂದನ್ನು ಕಟ್ಟಿಸಬೇಕೆಂಬ ಇಚ್ಛೆಯುಂಟಾಗಿ ಈ ಸಂಬಂಧ ಎಲ್ಲಾ ತಯಾರಿಯನ್ನೂ ನಡೆಸಿದ್ದರಂತೆ.. ಆದರೆ, ಒಂದು ರಾತ್ರಿ ಆತನಿಗೆ ಕನಸಿನಲ್ಲಿ ಬಂದ ಗೊಲ್ಲ ಬಾಲಕನೊಬ್ಬ ಕ್ಷೇತ್ರಕ್ಕೆ ಗೋಪುರ ನಿರ್ಮಿಸುವುದಾದರೆ, ಅದನ್ನು ಒಂದೇ ದಿನದಲ್ಲಿ ನಿರ್ಮಿಸಬೇಕು ಹಾಗೂ ಆ ಗೋಪುರವು ಕಾಶಿ ವಿಶ್ವನಾಥನ ಮುಕುಟ ತೋರುವಷ್ಟು ಎತ್ತರವಾಗಿರಬೇಕೆಂಬ ಆಶಯವನ್ನೂ ತೋರಿಸಿದ್ದನಂತೆ.. ಈ ಕಾರಣಕ್ಕಾಗಿ ಗೋಪುರ ನಿರ್ಮಿಸುವ ಕಾರ್ಯವನ್ನು ಕೈಬಿಡಲಾಯಿತು. ಎಂಬ ಮಾತುಗಳು ಇವೆ.

ಹರಕೆ ತೀರಿಸಲು ಗಂಟೆ ಕೊಡುತ್ತಾರೆ

ಹರಕೆ ತೀರಿಸಲು ಗಂಟೆ ಕೊಡುತ್ತಾರೆ

ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ-ಬಂಗಾರಗಳ ಹರಕೆಯನ್ನು ಸಮರ್ಪಿಸುವುದು ಸಾಮಾನ್ಯ. ಈ ಗಣೇಶನಿಗೆ ನೀಡಬೇಕಾಗಿರುವುದು ಕೇವಲ ಗಂಟೆಯನ್ನಷ್ಟೇ. ಈ ಕಾರಣಕ್ಕಾಗಿಯೇ ಇಲ್ಲಿ ಗಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ. ಹರಕೆ ತೀರಿದ ಬಳಿಕ ಭಕ್ತಾಧಿಗಳು ಗಂಟೆಯನ್ನು ಸಮರ್ಪಿಸುತ್ತಾರೆ.

ಮೂಡಪ್ಪ ಸೇವೆ

ಮೂಡಪ್ಪ ಸೇವೆ

ಸೌತಡ್ಕ ಗಣಪತಿಗೆ ಅತೀ ಮೆಚ್ಚಿನ ಪೂಜೆಯೆಂದರೆ ಮೂಡಪ್ಪ ಸೇವೆಯಾಗಿದ್ದು, ಪ್ರತಿವರ್ಷವೂ ಇಲ್ಲಿ ಭಕ್ತಾಧಿಗಳು ವಿಘ್ನನಾಯಕನಿಗೆ ಮೂಡಪ್ಪ ಸೇವೆಯನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಅಲ್ಲದೆ ರಂಗಪೂಜೆಯ ಇಲ್ಲಿನ ವಿಶೇಷ ಪೂಜೆಗಳಲ್ಲಿ ಒಂದಾಗಿದ್ದು, ದೇಶದೆಲ್ಲೆಡೆಗಳಿಂದ ಭಕ್ತರು ಈ ಕ್ಷೇತ್ರಕ್ಕೆ ಬೇಟಿ ನೀಡಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ.

ಹಣ್ಣು, ತರಕಾರಿ ಮಾಲೆ ಸಮರ್ಪಣೆ

ಹಣ್ಣು, ತರಕಾರಿ ಮಾಲೆ ಸಮರ್ಪಣೆ

ತನ್ನನ್ನು ನಂಬಿದವರಿಗೆ ಇಂಬು ಕೊಂಡುವಂತಹ ಈ ವಿನಾಯಕನ ಸನ್ನಿಧಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬರುತ್ತಿದ್ದು, ಪ್ರತಿ ಸಂಕಷ್ಟಿಯ ದಿನಗಳಲ್ಲಿ ಬಯಲಲ್ಲಿರುವ ಈ ಗಣಪತಿ ವಿಗ್ರಹಕ್ಕೆ ಪ್ರಕೃತಿಯಲ್ಲೇ ಸಿಗುವಂತಹ ವೀಳ್ಯದೆಲೆ, ಹಣ್ಣು, ತರಕಾರಿಗಳ ಮಾಲೆಗಳನ್ನು ಹಾಕುವುದು ಇಲ್ಲಿನ ವಿಶೇಷತೆಯಾಗಿದೆ.

ಹತ್ತಿರದಿಂದ ದೇವರನ್ನು ವೀಕ್ಷಿಸಬಹುದು

ಹತ್ತಿರದಿಂದ ದೇವರನ್ನು ವೀಕ್ಷಿಸಬಹುದು

ಸೌತಡ್ಕ ಕ್ಷೇತ್ರ ಜನಸಾಮಾನ್ಯನ ಕ್ಷೇತ್ರವಾಗಿಯೂ ಹೆಸರುವಾಸಿ. ದೇವಸ್ಥಾನಗಳಲ್ಲಿ ಗರ್ಭಗುಡಿಯಲ್ಲೇ ಇರುವಂತಹ ದೇವರನ್ನು ಹತ್ತಿರದಿಂದ ನೋಡುವುದು ಸಾಧ್ಯವಿಲ್ಲದೇ ಇರುವಾಗ ಸೌತಡ್ಕದಲ್ಲಿ ಜನರ ಕೈಗೆ ಮುಟ್ಟುವ ರೀತಿಯಲ್ಲಿರುವ ಗಣೇಶ ಎಲ್ಲರಿಗೂ ದರ್ಶನವನ್ನು ನೀಡುತ್ತಾನೆ. ಪ್ರತಿವರ್ಷವೂ ಇಲ್ಲಿ ಸಾವಿರ ಸಂಖ್ಯೆಯಲ್ಲಿ ಗಂಟೆಗಳ ಕಾಣಿಕೆ ಬರುತ್ತಿದ್ದು, ಪ್ರತಿವರ್ಷವೂ 11 ಟನ್ ಗಳಷ್ಟು ಗಂಟೆಗಳನ್ನು ಇಲ್ಲಿ ಮಾರಾಟಮಾಡಲಾಗುತ್ತಿದೆ.

ಅನ್ನಸಂತರ್ಪಣೆ ನಡೆಯುತ್ತದೆ

ಅನ್ನಸಂತರ್ಪಣೆ ನಡೆಯುತ್ತದೆ

ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ನಿರಂತರ ಅನ್ನಸಂತರ್ಪಣೆಯ ಕಾರ್ಯವೂ ಇಲ್ಲಿ ನಡೆಯುತ್ತಿದ್ದು, ಗೋಪಾಲಕರಿಗೆ ದೊರಕಿದ ಗಣೇಶ ಇದಾಗಿರುವುದರಿಂದಲೇ ಇಲ್ಲಿ ಗೋವುಗಳ ಸಂಖ್ಯೆಯೂ ಅಧಿಕವಾಗಿದ್ದು, ಕ್ಷೇತ್ರ ತುಂಬಾ ಗೋವುಗಳೇ ತುಂಬಿಕೊಂಡಿದೆ. ಸಕಲ ಸಂಕಷ್ಟಗಳ ಪರಿಹರಿಸುವ ವಿಘ್ನೇಶ್ವರ ಸೌತಡ್ಕದಲ್ಲಿ ನೆಲೆ ನಿಂತಿದ್ದು, ಕ್ಷೇತ್ರಕ್ಕೆ ಬರುವ ಭಕ್ತರನ್ನು ಹರಸುತ್ತಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+