ಮಂಗಳೂರು ಮೀನು ಮಾರುಕಟ್ಟೆಯಲ್ಲಿ ಮಹಿಳೆಯರಿಗೂ ಬೇಕು ಅವಕಾಶ
ಮಂಗಳೂರು, ಡಿಸೆಂಬರ್ 21: ಕಿನ್ನಿಗೋಳಿಯ ಮಾರುಕಟ್ಟೆಯಲ್ಲಿ ಮಹಿಳಾ ಮೀನುಗಾರರಿಗೆ ನಡೆಸುತ್ತಿರುವ ದೌರ್ಜನ್ಯ, ನಿಲ್ಲಬೇಕು. ಪುರುಷ ಮಾರಾಟಗಾರರನ್ನು ಹೊರಹಾಕದಿದ್ದಲ್ಲಿ ಜಿಲ್ಲೆಯನ್ನೇ ಬಂದ್ ನಡೆಸಿ, ಮೀನುಗಾರರ ಸಹಿತ ಸಾರ್ವಜನಿಕವಾಗಿ ಉಗ್ರ ಹೋರಾಟ ನಡೆಸಲಾಗುವುದೆಂದು ಮೀನುಗಾರರ ಫೆಡರೇಶನ್ನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.
ಕಿನ್ನಿಗೋಳಿ ಗ್ರಾಪಂನ ಮುಂದೆ ಮಂಗಳವಾರ ಮಂಗಳೂರು ತಾಲೂಕು ಹಸಿ ಮೀನು ಮಾರಾಟಗಾರರ ಸಂಘದ ಸಂಯೋಜನೆಯಲ್ಲಿ ಮೀನು ಮಹಿಳಾ ಮಾರಾಟಗಾರರು ಬೃಹತ್ ಪ್ರತಿಭಟನೆ ನಡೆಸಿ ಅನ್ಯಾಯದ ವಿರುದ್ಧ ಹೋರಾಡುವ ಮುನ್ಸೂಚನೆ ನೀಡಿದರು.
ಕಿನ್ನಿಗೋಳಿಯ ಮಾರಾಟ ಕೇಂದ್ರದಲ್ಲಿ ಪುರುಷರಿಗೆ ಮಾನವೀಯತೆ ಆಧಾರದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಮಹಿಳಾ ವ್ಯಾಪರಸ್ಥರ ಮೇಲೆ ದೌರ್ಜನ್ಯ ನಡೆಸಿದರು ಎನ್ನಲಾಗಿದೆ. ಈ ಬಗ್ಗೆ ಹಲವಾರು ಬಾರಿ ಕಿನ್ನಿಗೋಳಿ ಗ್ರಾಪಂ ನಲ್ಲಿ ಹಲವಾರು ಬಾರಿ ಮನವಿ ಮಾಡಿಕೊಂಡರೂ ಬೇಡಿಕೆ ಈಡೇರದ ಹಿನ್ನೆಲೆ ಒಂದು ವಾರದಲ್ಲಿ ಪಂಚಾಯತಿಗೆ ಬೀಗ ಜಡಿದು, ರಸ್ತೆ ಬಂದ್ ಮಾಡಿ ಪ್ರತಿಭಟಿಸಲು ಮಹಿಳಾ ಮೀನು ಮಾರಾಟಗಾರರು ನಿರ್ಧರಿಸಿದ್ದಾರೆ.[ಮಂಗಳೂರು : ವ್ಯಾಪಾರಿಗಳ ಜಗಳದಲ್ಲಿ ಜನರಿಗೆ ಮೀನಿನ ಲಾಭ]

ಕರಾವಳಿ ಪ್ರಾಧಿಕಾರ ನಿಗಮದ ಅನುದಾನದಲ್ಲಿ ಮಹಿಳೆಯರಿಗಾಗಿಯೇ ಮೀನು ಮಾರಾಟ ಮಾಡಲು ಪ್ರತ್ಯೇಕವಾಗಿ ಇದನ್ನು ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ್ದು ಮಾನವೀಯತೆಯ ದೃಷ್ಟಿಯಿಂದ ಅನ್ಯಕೋಮಿನ ಮಾರಾಟಗಾರರಿಗೆ ಅವಕಾಶ ನೀಡಿದ್ದರು.ಅವರು ಅದನ್ನು ದುರುಪಯೋಗ ಪಡಿಸಿಕೊಂಡು ದೌರ್ಜನ್ಯ ನಡೆಸಿದ್ದಾರೆ. ಈ ಬಗ್ಗೆ ಸುಮಾರು 30 ಬಾರಿ ಪಂಚಾಯಿತಿಯ ಗಮನಕ್ಕೆ ತಂದಿದ್ದರೂ ನ್ಯಾಯ ದೊರಕಿಲ್ಲ.
ಈ ಬಗ್ಗೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷೆ ಅಹಲ್ಯ ಕಾಂಚನ್ , ಕಳೆದ 48 ವರ್ಷಗಳಿಂದ ಕಿನ್ನಿಗೋಳಿಯಲ್ಲಿ ವ್ಯಾಪಾರ ನಡೆಸುತ್ತಿದ್ದೇನೆ. ಆದರೆ ಮಾರುಕಟ್ಟೆ ನಿರ್ಮಾಣ ಆದ ಮೇಲೆ ಅವಾಚ್ಯವಾಗಿ ನಿಂದಿಸುವುದು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವುದು, ಅಶ್ಲೀಲವಾಗಿ ಇಲ್ಲಿರುವ ಪುರುಷರು ಮಾತನಾಡುವುದು ಜಾಸ್ತಿಯಾಗಿದೆ ಎಂದು ಆರೋಪಿಸಿದರು.
ಇತ್ತ ಈ ಬಗ್ಗೆ ಮಾತನಾಡಿದ ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ' ಮಾರುಕಟ್ಟೆಯಲ್ಲಿ ಮಹಿಳೆ ಮತ್ತು ಪುರುಷ ಎಂಬ ಭೇದಬಾವ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆ ಮಹಿಳೆಯರಿಗೇ ಮೀಸಲಿಡಬೇಕು ಎಂಬ ಯಾವುದೇ ಕಾನೂನಾತ್ಮಕ ನಿಯಮ ನಮ್ಮಲ್ಲಿ ಇಲ್ಲ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಕ್ರಮ ಕೈಗೊಳ್ಳುತ್ತೇವೆ ದೌರ್ಜನ್ಯ ನಡೆದಿದ್ದರೇ ಕ್ರಮ ಕೈಗೊಳ್ಳುತ್ತೇವೆ' ಅಂದರು.












Click it and Unblock the Notifications