ಮಂಗಳೂರಿನಲ್ಲಿ ಖಾದಿ ಉತ್ಸವಕ್ಕೆ ಚಾಲನೆ
ಮಂಗಳೂರು, ಮೇ 26 : ಮಂಗಳೂರಿನ ಪಾಂಡೇಶ್ವರ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಆಯೋಜಿಸಲಾಗಿರುವ ಖಾದಿ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತೆಲಂಗಾಣದ ರಮೇಶ್ ಡಿ. ಚರ್ಮದ ಪರ್ಸುಗಳು, ಬ್ಯಾಗು, ಬೆಲ್ಟುಗಳನ್ನು 300 ರಿಂದ 600 ರೂಗಳಿಗೆ ಮಾರಾಟ ಮಾಡುತ್ತಾರೆ. ಲಖನೌದಿಂದ ಬಂದಿರುವ ಲಲಿತಾ ಚಿಕೂನ್ ವರ್ಕ್ ಇರುವ ಸೀರೆಗಳನ್ನು 350ಕ್ಕೆ ಮಾರಾಟ ಮಾಡಲು ಉತ್ಸವ ವೇದಿಕೆ ಕಲ್ಪಿಸಿದೆ.
ಪಾಂಡೇಶ್ವರ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಖಾದಿ ಗ್ರಾಮೋದ್ಯೋಗ ಆಯೋಗ, ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಖಾದಿ ಉತ್ಸವಕ್ಕೆ ಚಾಲನೆ ಸಿಕ್ಕಿದ್ದು, ಜೂನ್ 1ರವರೆಗೆ ಈ ಉತ್ಸವ ನಡೆಯಲಿದೆ.

ಖಾದಿ ಉತ್ಸವದಲ್ಲಿ ಓವರ್ ಕೋಟ್ಗಳಿಗೆ ಹೊಂದುವ, ಸಫಾರಿ ಶೈಲಿಯ ದಿರಿಸು ಹೊಲಿಸಲು ಅನುಕೂಲವಾಗುವ ಬಟ್ಟೆ, ಕಲಂಕರಿ ಮತ್ತು ಮಂಗಳಗಿರಿ ಬಟ್ಟೆಯ ಚೂಡಿದಾರ್ ಸೆಟ್, ಇಳಕಲ್ ಸೀರೆಗಳು, ಬಿಜಾಪುರದ ಐಶ್ವರ್ಯ ಜ್ಯೂಟ್ ಹೌಸ್ನ ವೈವಿಧ್ಯಮ ಬ್ಯಾಗ್ಗಳು, ಫೈಲ್ಗಳು ಉತ್ಸವದ ಆಕರ್ಷಣೆಯಾಗಿವೆ.
ಖಾದಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ ಮಂಗಳೂರು ಮೇಯರ್ ಮಹಾಬಲ ಮಾರ್ಲ, ದೇಸೀ ವಸ್ತುಗಳಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ಮಾರಾಟಗಾರರಿಂದ ನೇರವಾಗಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ಈ ಪ್ರಯತ್ನದಿಂದ ದೇಸೀ ಮಾರುಕಟ್ಟೆಯನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದರು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಭಿವೃದ್ಧಿ ಅಧಿಕಾರಿ ಎಂ. ಅಶೋಕ್ ಮಾತನಾಡಿ, ಕಳೆದ ವರ್ಷ ನಡೆದ ಉತ್ಸವದಲ್ಲಿ ಸುಮಾರು 1 ಕೋಟಿ ರೂಪಾಯಿ ವಹಿವಾಟು ಆಗಿದ್ದು ಈ ಬಾರಿ 2 ಕೋಟಿಗೂ ಹೆಚ್ಚಿನ ವಹಿವಾಟಿನ ಗುರಿ ಹೊಂದಲಾಗಿದೆ ಎಂದು ಹೇಳಿದರು.












Click it and Unblock the Notifications