ಇಂದಿನಿಂದ ಹಜ್ ಯಾತ್ರೆ; ಶಾಂತಿ, ಸೌಹಾರ್ದಕ್ಕೆ ಪ್ರಾರ್ಥಿಸಲು ಖಾದರ್ ಸಲಹೆ
ಮಂಗಳೂರು, ಜುಲೈ 17: ರಾಜ್ಯದ ಹಜ್ ಯಾತ್ರಿಗಳು ದೇಶದ ಒಳಿತು, ಶಾಂತಿ, ಸೌಹಾರ್ದಕ್ಕಾಗಿ ವಿಶೇಷವಾಗಿ ಪ್ರಾರ್ಥಿಸಬೇಕು ಎಂದು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಕರೆ ನೀಡಿದರು. ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ 2019ನೇ ಸಾಲಿನಲ್ಲಿ ಹೊರಡುವ ಹಜ್ ಯಾತ್ರಿಗಳ ವಿಮಾನ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಹಜ್ ಸಮಿತಿ ವತಿಯಿಂದ ಇಂದು ಬಜ್ಪೆಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಯಾತ್ರೆಗೆ ಚಾಲನೆ ನೀಡಲಾಯಿತು. ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಮೂರು ದಿನಗಳಲ್ಲಿ ಐದು ವಿಮಾನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ 750 ಹಜ್ ಯಾತ್ರಾರ್ಥಿ ಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮದೀನಾ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ಮಂಗಳೂರಿನಿಂದ ಮೊದಲ ವಿಮಾನ ಇಂದು ಸಂಜೆ 6.50ಕ್ಕೆ ನಿರ್ಗಮಿಸಲಿದ್ದು, ಜುಲೈ18ರಂದು ಬೆಳಗ್ಗೆ 11.50ಕ್ಕೆ ಮತ್ತು ಮಧ್ಯಾಹ್ನ 12.50ಕ್ಕೆ ಎರಡು ವಿಮಾನಗಳು ಹೊರಡಲಿವೆ. ಜುಲೈ19 ರಂದು ತಡರಾತ್ರಿ 12.30ಕ್ಕೆ ಮತ್ತು ಬೆಳಗ್ಗೆ 5.50ಕ್ಕೆ ಹಜ್ ಯಾತ್ರಿಕರ ವಿಮಾನಗಳು ನಿರ್ಗಮಿಸಲಿವೆ. ಪ್ರತಿ ವಿಮಾನದಲ್ಲಿ ತಲಾ 150 ಮಂದಿ ಪ್ರಯಾಣಿಸಲಿದ್ದಾರೆ.

ಈ ಸಂದರ್ಭದಲ್ಲಿ ಅಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಯಾತ್ರಿಗಳಿಗೆ ಪಾಸ್ ಪೋರ್ಟ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಹಜ್ ಸಮಿತಿಯ ಸದಸ್ಯ ಹಾಗೂ ಸಂಸದ ಮುಹಮ್ಮದ್ ಇರ್ಫಾನ್ ಅಹ್ಮದ್, ಮಾಜಿ ಶಾಸಕ ಕೆ.ಎಸ್. ಮುಹಮ್ಮದ್ ಮಸೂದ್, ಬಿ.ಎ.ಮೊಯ್ದಿನ್ ಬಾವ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications