ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ಆರೋಪ ತಳ್ಳಿಹಾಕಿದ ಯು.ಟಿ. ಖಾದರ್
ಮಂಗಳೂರು, ಜುಲೈ.16: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ರಾಜಕೀಯ ಪ್ರೇರಿತ ಮತ್ತು ಆಧಾರ ರಹಿತ ಎಂದು ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 50 ಕೋಟಿ ರೂಪಾಯಿಗಿಂತಲೂ ಹಚ್ಚು ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಮುಖಂಡ ರಾಮದಾಸ್ ಅವರ ಆರೋಪ ಸತ್ಯಕ್ಕೆ ದೂರವಾದದ್ದು ಮತ್ತು ರಾಜಕೀಯ ಪ್ರೇರಿತವಾಗಿ ನೀಡಿದ ಹೇಳಿಕೆ ಎಂದು ಆರೋಪಿಸಿದರು.
ಮೈಸೂರಿನ ಇಂದಿರಾ ಕ್ಯಾಂಟೀನ್ ಗಳಿಗೇಕೆ ಬಂತು ಇಂಥ ದುಸ್ಥಿತಿ?
ರಾಮದಾಸ್ ಅವರ ಈ ಆರೋಪ ಆಧಾರರಹಿತವಾಗಿದ್ದು, ರಾಜಕೀಯ ದುರುದ್ದೇಶದಿಂದ ಕೂಡಿದೆ. ಈ ಯೋಜನೆಯ ಯಶಸ್ಸು, ಈ ಯೋಜನೆಗೆ ದೊರೆತಿರುವ ಜನಮನ್ನಣೆ ಸಹಿಸದೆ ಎಸ್ ಎ ರಾಮದಾಸ್ ಅವರು ಆಧಾರ ರಹಿತ ಹೇಳಿಕೆಯಿಂದ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿರುವ ಇಂದಿರಾ ಕ್ಯಾಂಟೀನ್ ಒಟ್ಟು 211.24 ಕೋಟಿ ರೂಪಾಯಿ ಮೊತ್ತದ ಯೋಜನೆ. ಈ ಯೋಜನೆಯಲ್ಲಿ ಇದುವರೆಗೆ 113.78 ಕೋಟಿ ರೂಪಾಯಿ ವೆಚ್ಚವಾಗಿದ್ದು, ರಾಜ್ಯದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 136 ಕ್ಯಾಂಟೀನ್ಗಳ ಪೈಕಿ 72 ಕ್ಯಾಂಟೀನ್ ಈಗಾಗಲೇ ಕಾರ್ಯಾರಂಭಗೊಂಡಿದೆ. ಉಳಿದವುಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.