ಮತ್ತೊಂದು ಚೀಟ್ ಫಂಡ್: ಕೋಟ್ಯಂತರ ಪಂಗನಾಮ
ಸುಳ್ಯದ ರಾಜಶ್ರೀ ಕಾಂಪ್ಲೆಕ್ಸಿನಲ್ಲಿ ದೊಡ್ಡ ಕಚೇರಿಯೊಂದು ಆಡಂಬರದೊಂದಿಗೆ ಒಂದೆರಡು ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಅಲ್ಲಿ ಜೈ ಕೃಷ್ಣ ಮನಿ ಮತ್ತು ಗೋಲ್ಡ್ ಸ್ಲೀಂ ಹಣಕಾಸು ಯೋಜನೆಗಳು ಭರ್ಜರಿಯಾಗಿಯೇ ನಡೆಯುತ್ತಿದ್ದವು. ಆದರೆ ಅದೀಗ ಮುಚ್ಚಿಹೋಗಿದೆ.
ಈ ಕಚೇರಿಯ ಮಾಲೀಕ ದಿಢೀರನೆ ಕಾಣೆಯಾಗಿದ್ದು, ಈ ಮನಿ ಯೋಜನೆಗಳಲ್ಲಿ ಹಣತೊಡಗಿಸಿದ್ದ ಚಂದಾದಾರರು ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಒಳಗಿದ್ದ ಪೀಠೋಪಕರಣಗಳನ್ನು ತಮ್ಮ ಇಷ್ಟಾನುಸಾರ ತೆಗೆದುಕೊಂಡು ಹೋಗಿದ್ದಾರೆ.
ಅಂದಹಾಗೆ ರಾಜಶ್ರೀ ಕಾಂಪ್ಲೆಕ್ಸಿನಲ್ಲಿದ್ದ ದೊಡ್ಡ ಕಚೇರಿಯಲ್ಲಿ ನೂರಾರು ಜನ ಚಂದಾದಾರರು ಕೋಟ್ಯಂತರ ರೂ ಹಣ ತೊಡಗಿಸಿದ್ದರು. ಕೇರಳದ ಸುಧಾಮ ಎಂಬುವವನೇ ಈ ವಂಚನೆಯ ಸೂತ್ರಧಾರ. ಇಲ್ಲಿನ ಅಲೆಟ್ಟಿ ಗ್ರಾಮದಲ್ಲಿ ವಾಸವಿದ್ದ ಸುಧಾಮ DM Complexನಲ್ಲಿ Jai Kisan Finance ಅನ್ನು ಪ್ರಾರಂಭಿಸಿದ್ದ. (ಖಾತೆ ಸ್ಥಗಿತ, PACL ಕಚೇರಿಗೆ ಠೇವಣಿದಾರರ ಮುತ್ತಿಗೆ)
ಆರಂಭದಲ್ಲಿ ಚಿನ್ನದ ಮೇಲಿನ ಸಾಲ, ಅಡಮಾನ ಸಾಲ ವ್ಯಾಪಾರ ಶುರುವಿಟ್ಟುಕೊಂಡಿದ್ದ. ಕ್ರಮೇಣ ಚಿಟ್ ಫಂಡ್ ದಂಧೆಗೂ ಇಳಿದ. ಸುಮಾರು ಒಂದೂವರೆ ವರ್ಷದ ಹಿಂದೆ Rajashree Complexನಲ್ಲಿ Jai Krishna Gold Scheme ಯೋಜನೆಯನ್ನು ಆರಂಭಿಸಿದ. ಸುಮಾರು 1,000 ಮಂದಿ ಇಲ್ಲಿ ಚಿಟ್ ಫಂಡ್ ಯೋಜನೆಯಲ್ಲಿ ಹಣ ತೊಡಗಿಸತೊಡಗಿದರು. ಆದರೆ ಬಹಳಷ್ಟು ಜನರಿಗೆ ನಿಗದಿತ ಸಮಯದಲ್ಲಿ ಹಣ ಮರಳಿ ಬರಲಿಲ್ಲ.
ಒಂದು ಚಿಟ್ ಫಂಡ್ ಯೋಜನೆಯಲ್ಲಿ ಕೇವಲ 40-50 ಮಂದಿ ನಿಜವಾದ ಚಂದಾದಾರರಿದ್ದರೆ ಸುಧಾಮ ಯೋಜನೆಯಲ್ಲಿ ನೂರಾರು ಮಂದಿ ಹಣತೊಡಗಿಸಿದ್ದಾರೆ ಎಂದು ಜನರನ್ನು ನಂಬಿಸುತ್ತಿದ್ದ. ಕೆಲವರಿಗೆ ಅನುಮಾನ ಬಂದು ಆಗಾಗ ಸುಧಾಮನನ್ನು ವಿಚಾರಿಸಿಕೊಳ್ಳುತ್ತಿದ್ದರು. ಕೆಲವರು ಪೊಲೀಸರಿಗೂ ವಿಷಯ ತಿಳಿಸಿದರಾದರೂ ಹಣದಾಸೆಯಿಂದ ದೂರು ನೀಡಿರಲಿಲ್ಲ.
ಈಗ ಎರಡೂ ಕಡೆ ಕಚೇರಿಗಳಿಗೆ ಬೀಗ ಹಾಕಿಕೊಂಡು ಸುಧಾಮ ಊರು ಬಿಟ್ಟುಹೋಗಿದ್ದಾನೆ. ಜನ ಅದರಲ್ಲೂ ಇವನ ಮನಿ ಸ್ಕೀಂಗಳಲ್ಲಿ ಹಣ ಹಾಕಿದ್ದವರು ಬೊಂಬಡಾ ಹೊಡೆಯುತ್ತಿದ್ದಾರೆ.