ಕೇರಳ ಗಡಿ ಬಂದ್ ವಿಚಾರ: ಕರ್ನಾಟಕ ಸರ್ಕಾರಕ್ಕೆ ಕೇರಳ ಹೈಕೋರ್ಟ್ ತರಾಟೆ
ಮಂಗಳೂರು, ಆಗಸ್ಟ್ 14: ಕೇರಳದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಕೇರಳ ಗಡಿ ಭಾಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕಠಿಣ ಕ್ರಮ ಮಾಡಿರುವುದಕ್ಕೆ ಕೇರಳ ಹೈಕೋರ್ಟ್ ಸರ್ಕಾರಕ್ಕೆ ತಪರಾಕಿ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರವು ಕೇರಳ- ಕರ್ನಾಟಕ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದಕ್ಕೆ ಕೇರಳ ಹೈಕೋರ್ಟ್ ಕರ್ನಾಟಕ ಸರ್ಕಾರದ ಬಳಿ ಸ್ಪಷ್ಟೀಕರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಕರ್ನಾಟಕ ಸರ್ಕಾರ ಕೇಂದ್ರದ ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಮಂಜೇಶ್ವರದ ಸಿಪಿಎಂ ಮುಖಂಡ ಕೆ.ಆರ್. ಜಯಾನಂದ್ ಕೇರಳ ಹೈಕೋರ್ಟ್ನಲ್ಲಿ ನಾಗರಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿದ ಕೇರಳ ಹೈಕೋರ್ಟ್ ಇದೀಗ ಸ್ಪಷ್ಟೀಕರಣ ಕೋರಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ.
ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಆಗಸ್ಟ್ 17 ರಂದು ಕೇರಳ ಹೈಕೋರ್ಟ್ಗೆ ಹಾಜರಾಗಿ ಅಧೀಕೃತ ಸ್ಪಷ್ಟೀಕರಣ ನೀಡುವಂತೆ ಕೇರಳ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ಮಾಡಿದೆ.

ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕಠಿಣ ನಿಯಮ
ಕೊರೊನಾ ಸೋಂಕು ಹೆಚ್ಚಳವಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕಠಿಣ ನಿಯಮ ವಿಧಿಸಿತ್ತು. ಕರ್ನಾಟಕ ಗಡಿ ಪ್ರವೇಶ ಮಾಡುವುದಿದ್ದರೆ 72 ಗಂಟೆಯ ಒಳಗೆ ಪಡೆದ ಕೋವಿಡ್ ಆರ್ಟಿ- ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿ ಹೊಂದಿರಬೇಕೆಂದು ಆದೇಶ ಮಾಡಿತ್ತು. ಎರಡು ಡೋಸ್ ಲಸಿಕೆ ಪಡೆದರೂ ಕೋವಿಡ್ ಆರ್ಟಿ- ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವೆಂದು ಕರ್ನಾಟಕ ರಾಜ್ಯ ಸರ್ಕಾರ ಆದೇಶ ಮಾಡಿದೆ.

ಕೇಂದ್ರ ಸರ್ಕಾರದ ಕೋವಿಡ್ ನಿಯಮಾವಳಿಗಳಿಗೆ ವಿರುದ್ಧ
ಈ ಆದೇಶ ಕೇಂದ್ರ ಸರ್ಕಾರದ ಕೋವಿಡ್ ನಿಯಮಾವಳಿಗಳಿಗೆ ವಿರುದ್ಧವಾದದ್ದು ಎಂದು ಕೇರಳ ಸರ್ಕಾರ ಕೇರಳ ವಿಧಾನಸಭೆಯಲ್ಲಿ ಪ್ರಬಲವಾಗಿ ಆಕ್ರೋಶ ಹೊರಹಾಕಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧವೆಂದು ಕೇರಳ ಸರ್ಕಾರ ಹೇಳಿಕೊಂಡಿತ್ತು. ಆದರೆ ಕರ್ನಾಟಕ ಸರ್ಕಾರ ಮಾತ್ರ ರಾಜ್ಯದ ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಅಂತಾ ಸ್ಪಷ್ಟವಾಗಿ ಹೇಳಿದೆ.

ಗಡಿನಾಡ ಜನರ ಉದ್ಯೋಗ, ಶಿಕ್ಷಣಕ್ಕೆ ತೊಂದರೆ
ಕಾಸರಗೋಡು- ಮಂಗಳೂರು ನಡುವೆ ಜನರ ಬಾಂಧವ್ಯದ ಬೆಸುಗೆಯಾಗಿದ್ದು, ಜನರು ಪ್ರತಿನಿತ್ಯ ಎರಡು ಜಿಲ್ಲೆಗಳ ನಡುವೆ ಓಡಾಟ ಮಾಡಲೇಬೇಕು. ಆದರೆ ಈಗ ಕರ್ನಾಟಕ ರಾಜ್ಯ ಸರ್ಕಾರ ಇದಕ್ಕೆ ತಡೆವೊಡ್ಡಿದ್ದು, ಇದರಿಂದಾಗಿ ಗಡಿನಾಡ ಜನರ ಉದ್ಯೋಗ, ಶಿಕ್ಷಣ, ಚಿಕಿತ್ಸೆ, ಇತ್ಯಾದಿ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗಿದೆ. ಈ ಕುರಿತು ನ್ಯಾಯಾಲಯ ಕಾನೂನು ವಿಧೇಯಕ ಕ್ರಮ ಕೈಗೊಳ್ಳಬೇಕೆಂದು ಕೇರಳ ಹೈಕೋರ್ಟ್ನಲ್ಲಿ ಅರ್ಜಿದಾರನ ಪರವಾಗಿ ನ್ಯಾಯವಾದಿ ಪಿ.ವಿ. ಅನೂಪ್ ನ್ಯಾಯ ಮಂಡಿಸಿದ್ದಾರೆ.
ಆದರೆ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಕೇರಳ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಮತ್ತಷ್ಟು ಬಿಗಿಗೊಳಿಸಬೇಕೆಂದು ಆದೇಶ ನೀಡಿದ್ದರು. ಅಲ್ಲದೇ ಕೇರಳ ಗಡಿ ಭಾಗಕ್ಕೆ ಭೇಟಿ ನೀಡಿ ಗಡಿ ಪರಿಶೀಲನೆ ಮಾಡುವ ನಿರ್ಧಾರ ಮಾಡಿದ್ದರು. ಆದರೆ ಸಿಎಂ ಭೇಟಿ ವೇಳೆ ಕೇರಳಿಗರು ಪ್ರತಿಭಟನೆ ಮಾಡುವ ವಿಚಾರ ರಾಜ್ಯ ಗುಪ್ತಚರ ಇಲಾಖೆಗೆ ಲಭ್ಯವಾಗಿ ಸಿಎಂ ಭೇಟಿ ರದ್ದಾಗಿತ್ತು.

ಪಾದಯಾತ್ರೆ ಹೋಗುವ ತಾಕತ್ತು ಕನ್ನಡಿಗರಲ್ಲಿದೆ
ಕೇರಳಿಗರಿಗೆ ಹೆದರಿ ಕರ್ನಾಟಕ ಸಿಎಂ ಪಲಾಯನ ಮಾಡಿದ್ದಾರೆ ಎಂದು ಗಡಿನಾಡ ಕೆಲ ಜನರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದರು. ಈ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪರ ನಿಂತ ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಯು.ಟಿ. ಖಾದರ್, "ಕರ್ನಾಟಕ ಸಿಎಂ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಕರ್ನಾಟಕದ ಜನರು ಮನಸ್ಸು ಮಾಡಿದರೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಕೇರಳ- ಕರ್ನಾಟಕ ಗಡಿಯಿಂದ ಕೇರಳದ ರಾಜಧಾನಿ ತಿರುವನಂತಪುರಂ ವರೆಗೆ ಪಾದಯಾತ್ರೆಯಲ್ಲಿ ಕರೆದುಕೊಂಡು ಹೋಗುವ ತಾಕತ್ತು ಕನ್ನಡಿಗರಲ್ಲಿದೆ," ಎಂದು ಕೇರಳಿಗರಿಗೆ ಸವಾಲೆಸಿದಿದ್ದರು.












Click it and Unblock the Notifications