ಕಾವ್ಯ ಸಾವಿನ ನ್ಯಾಯಯುತ ತನಿಖೆಗೆ ಬಿಲ್ಲವ ಸಂಘದ ಒತ್ತಾಯ
ಮಂಗಳೂರು, ಆ.5 : ಅಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕಾವ್ಯ ಸಾವಿನ ಬಗ್ಗೆ ನ್ಯಾಯಯುತ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮುಲ್ಕಿ ಬಿಲ್ಲವ ಸಂಘ ಒತ್ತಾಯಿಸಿದೆ.
ಬಿಲ್ಲವ ಸಂಘದ ಮುಂದೆ ಪ್ರತಿಭಟನೆ ನಡೆಸಿದ ಸಂಘದ ಸದಸ್ಯರು ಕಾವ್ಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಡಿದ ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ, 'ಕಾವ್ಯ ನಿಗೂಢ ಸಾವಿನ ಹಿಂದೆ ಅನೇಕ ಸಂಶಯವಿದೆ, ಆ ಸಂಶಯದ ಸುಳಿಯ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದೇವೆ' ಎಂದು ಹೇಳಿದರು.

'ಕಾವ್ಯ ತಂದೆ-ತಾಯಿ ಮಗಳನ್ನು ಕಳೆದುಕೊಂಡ ದುಖ:ದಲ್ಲಿದ್ದಾರೆ. ಸಾವಿಗೆ ಶರಣಾಗುವ ಹಿಂದಿನ ದಿನ ನಗುತ್ತಾ ಮಾತನಡಿದ್ದಾಳೆ. ಕಾವ್ಯ ಅತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಹೆತ್ತವರ ಅಳಲು, ಆತ್ಮಹತ್ಯೆ ಹಿಂದೆ ಯಾರದೇ ಕೈವಾಡವಿರಲಿ ಅವರಿಗೆ ಶಿಕ್ಷೆ ಆಗಬೇಕು' ಎಂದು ಒತ್ತಾಯಿಸಿದರು.
ಕಾವ್ಯಳ ನ್ಯಾಯಯುತ ತನಿಖೆಗೆ ಒತ್ತಾಯಿಸಿ ಮುಲ್ಕಿ ತಹಶೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಳೆಯಂಗಡಿ ಬಿಲ್ಲ ಸಂಘದ ಗೌರಾವಾಕ್ಷ ಗಣೇಶ್ ಬಂಗೇರ, ಚೇಳಾರು ಬಿಲ್ಲವ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಮೀನ್, ಮಟ್ಟು ಬಿಲ್ಲವ ಸಂಘದ ಅಧ್ಯಕ್ಷ ಉದಯ ಅಮೀನ್ ಮಟ್ಟು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಜುಲೈ 20ರಂದು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾವ್ಯ ಸಾವಿನ ಬಗ್ಗೆ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದೆ.












Click it and Unblock the Notifications