ದೀಪಕ್ ರಾವ್ ಕೊಂದವರಿಗೆ ಹಿಡಿಶಾಪ ಹಾಕಿದ ಮಜೀದ್
ಕಾಟಿಪಳ್ಳ(ಮಂಗಳೂರು), ಜನವರಿ 04: 'ದೀಪಕ್ ರಾವ್ ತುಂಬಾ ಪ್ರಮಾಣಿಕ ಕೆಲಸಗಾರ, ಅವನ ಸಾವಿನ ದುಃಖ ಸಹಿಸಲು ಸಾಧ್ಯವಾಗುತ್ತಿಲ್ಲ. ದೀಪಕ್ ಕೊಂದವರು ನಾಶವಾಗಿ ಹೋಗಲಿ, ಅವರಿಗೆ ಗಲ್ಲು ಶಿಕ್ಷೆಯಾಗಲಿ' ಎಂದು ದೀಪಕ್ ಅವರು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕ ಮಜೀದ್ ಕಣ್ಣೀರಿಟ್ಟಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಮಜೀದ್, ದೀಪಕ್ ನನ್ನ ಜತೆ 7 ವರ್ಷ ಕೆಲಸ ಮಾಡಿದ್ದ. ಸಿಮ್ ವಿತರಕನಾಗಿ ಕೆಲಸ ನಿರ್ವಹಿಸುತ್ತಿದ್ದ, ಒಳ್ಳೆಯ ಹುಡುಗ, ಎಲ್ಲರ ಜತೆ ಸ್ನೇಹ ಮನೋಭಾವ ಹೊಂದಿದ್ದ. ಆತನ ಹತ್ಯೆಗೆ ಕಾರಣ ಏನೆಂಬುದು ನನಗೆ ಗೊತ್ತಿಲ್ಲ. ಬಹುಶಃ ಈದ್ ಮಿಲಾದ್ ಬಂಟಿಂಗ್ಸ್ ಕಟ್ಟುವ ವಿಷಯದಲ್ಲಿ ಆದ ಸಣ್ಣ ಜಗಳ ಇದಕ್ಕೆ ಕಾರಣ ಇರಬಹುದು. ಮಿಕ್ಕಂತೆ ಅವನು ನಮ್ಮವರ ಅಂಗಡಿಗೆ ಹೋದಾಗಲೆಲ್ಲ ನಮ್ಮ ಭಾಷೆ(ಬ್ಯಾರಿ)ಯಲ್ಲೇ ಮಾತನಾಡುತ್ತಿದ್ದ. ಎಲ್ಲರ ಜತೆ ಚೆನ್ನಾಗಿ ಇರುತ್ತಿದ್ದ ಎಂದಿದ್ದಾರೆ.
ಅವನು ಮೊದಲು ಐಡಿಯಾ ಸಿಮ್ ವಿತರಣೆ ಮಾಡುತ್ತಿದ್ದ ನಂತರ ನನ್ನ ಜತೆ ಸೇರಿ ಏರ್ ಟೆಲ್ ಸಿಮ್ ವಿತರಣೆ, ನಂಬರ್ ಪೋರ್ಟಿಂಗ್ ಕೆಲಸ ಮಾಡುತ್ತಿದ್ದ. ಏಳು ವರ್ಷದಲ್ಲಿ ಒಮ್ಮೆ ಕೂಡಾ ಇಬ್ಬರಿಗೂ ಜಗಳವಾಗಿದ್ದಿಲ್ಲ. ಎಂದರು.
ಘಟನೆ ದಿನ ಬೆಳಗ್ಗೆ 9.30ಗೆ ಬಂದು 10 ಗಂಟೆ ಮೇಲೆ ಡಿಸ್ಟ್ರಿಬ್ಯೂಷನ್ ಗೆ ಹೋಗುತ್ತಿದ್ದ. ಅಂಗಡಿಗೆ ಬರುವ ಮುಂಚೆ ಕರೆ ಮಾಡಿದ್ದ. ನಾನು ಹೊರಗಡೆ ಬಂದು ನೋಡಿದಾಗ ಕಾರಿನಿಂದ ಬಂದಿದ್ದ ನಾಲ್ವರು ದುಷ್ಕರ್ಮಿಗಳು ದೀಪಕ್ ಕೊಚ್ಚಿಹಾಕಿದ್ದರು. ನಂತರ, ಫ್ರೆಂಡ್ ಒಬ್ಬರು ಸತೀಶ್ ಆಚಾರ್ಯ ಅವರನ್ನು ಕರೆದೆ ಇಬ್ಬರು ಸೇರಿ ಪೊಲೀಸರಿಗೆ ವಿಷಯ ತಿಳಿಸಿದೆವು.