ಕಾಟಿಪಳ್ಳ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ 13ನೇ ಆರೋಪಿ ಸೆರೆ
ಮಂಗಳೂರು, ಜುಲೈ 17 : ಕಾಟಿಪಳ್ಳದಲ್ಲಿ ನಡೆದಿದ್ದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ನ ಕೃಷ್ಣಾಪುರ ನಿವಾಸಿ ಸಫ್ವಾನ್ ಅಲಿಯಾಸ್ ಚಪ್ಪು (23) ಬಂಧಿತ.
ಕಳೆದ ಜನವರಿ 3ರಂದು ಮಧ್ಯಾಹ್ನ ಮಂಗಳೂರಿನ ಕಾಟಿಪಳ್ಳದ 2ನೇ ಬ್ಲಾಕ್ ನಲ್ಲಿ ಅಬ್ದುಲ್ ಮಜೀದ್ ಎಂಬುವವರ ಮನೆಯ ಎದುರು ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ರನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿ, ಆ ನಂತರ ಪರಾರಿಯಾಗಿತ್ತು.
ಬಿಜೆಪಿ ಕಾರ್ಯಕರ್ತರಾಗಿದ್ದ ದೀಪಕ್ ರಾವ್ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ರಾಜಕೀಯ ಆರೋಪ- ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿದ್ದ ಮಂಗಳೂರು ಪೊಲೀಸರು, 12 ಆರೋಪಿಗಳನ್ನು ಬಂಧಿಸಿದ್ದರು. ಆ ಸಂದರ್ಭದಲ್ಲಿ ಸಫ್ವಾನ್ ತಲೆ ಮರೆಸಿಕೊಂಡಿದ್ದ.

ಕೊಲೆ ಪ್ರಕರಣದ ಪ್ರಮುಖ ಅರೋಪಿ ಸಫ್ವಾನ್ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ನಗರದ ಸುರತ್ಕಲ್ ನ ಮುಕ್ಕ ಬಳಿ ಮನೆಯೊಂದಲ್ಲಿ ಅಡಗಿದ್ದ ಆತನನ್ನು ಬಂಧಿಸಿದ್ದಾರೆ. ಆ ಮೂಲಕ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿದೆ.












Click it and Unblock the Notifications