ಕಟೀಲು ದಸರಾ ಸಂಭ್ರಮದೊಂದಿಗೆ ಸಂಪನ್ನ
ಮಂಗಳೂರು, ಅಕ್ಟೋಬರ್ 01 : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ. ನವರಾತ್ರಿ ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ದೇವಳದಲ್ಲಿ ಪುಟಾಣಿಗಳಗೆ ವಿದ್ಯಾರಂಭ ಸಂಸ್ಕಾರ ವಿಶೇಷವಾಗಿ ನಡೆಯಿತು.
ಶನಿವಾರ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಅಕ್ಷರಭ್ಯಾಸ ಪ್ರಾರಂಭಿಸಿದರು. ವಿಜಯ ದಶಮಿ ದಿನ ಮಕ್ಕಳಿಗೆ ಕಟೀಲು ದೇವಿಯ ಸನ್ನಿಧಿಯಲ್ಲಿ ಅಕ್ಷರಭ್ಯಾಸ ಪ್ರಾರಂಭಿಸಿದರೆ ಸರಸ್ವತಿಯ ಅನುಗ್ರಹವಿರುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ವಿಜಯ ದಶಮಿಯನ್ನು ವಿದ್ಯಾ ದಶಮಿ ಎಂದೂ ಕರೆಯಲಾಗುತ್ತದೆ.

ಮಕ್ಕಳ ಕೈಯಲ್ಲಿ ಅರಿಶಿಣದ ತುಂಡಿನಿಂದ ಅಕ್ಕಿಯ ಮೇಲೆ ಬರೆಸುವ ಮೂಲಕ ಅಕ್ಷರಾಭ್ಯಾಸ ಪ್ರಾರಂಭಿಸಲಾಗುತ್ತದೆ. ಮುಂದಕ್ಕೆ ದುರ್ಗೆಯ ಅನುಗ್ರಹದಿಂದ ಮಕ್ಕಳು ವಿದ್ಯಾವಂತರಾಗುತ್ತಾರೆ ಎಂಬ ನಂಬಿಕೆ ಭಕ್ತರದ್ದು.

ಶುಕ್ರವಾರ ಮಹಾನವಮಿಯಂದು ಕಟೀಲು ದೇವಿಯ ಸನ್ನಿಧಿಯಲ್ಲಿ ಮಹಾರಂಗ ಪೂಜೆ ನಡೆಯಿತು. ಚಿನ್ನದ ಕೊಡಪಾನದಲ್ಲಿ ಆರತಿ, ಬೆಳ್ಳಿ ಪಾತ್ರೆ-ತಟ್ಟೆಗಳಲ್ಲಿ ಆರತಿ, ಹೂವಿನ ವಿನ್ಯಾಸ, ರಂಗೋಲಿ ವಿನ್ಯಾಸವಿರುವ ಆರತಿ ಸಹಿತ ನೂರಕ್ಕೂ ಹೆಚ್ಚು ವಿನ್ಯಾಸದಲ್ಲಿ ಸಂಕೀರ್ತನೆ, ತಾಳ-ಗಂಟೆಗಳ ಲಯ, ಚೆಂಡೆ ನಿನಾದದೊಂದಿಗೆ ಸುಮಾರು ಎರಡೂವರೆ ಗಂಟೆಗಳ ಕಾಲ 300 ಅರತಿಗಳನ್ನು ದುರ್ಗೆಗೆ ಬೆಳಗಲಾಯಿತು.
ಮೂಡೆ-ಪಾಯಸ ದಸರಾ ಉತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕಟೀಲುನ ವಿಶೇಷತೆ. ರಂಗಪೂಜೆಗೆ ಕಡುಬು ದೇವರಿಗೆ ನೈವೇದ್ಯ. ಈ ಹಿನ್ನೆಲೆಯಲ್ಲಿ ಮಹಾರಂಗ ಪೂಜೆಗೆ ಮರದ ದೊಡ್ಡ ದೋಣಿಯಲ್ಲಿ ಹಿಟ್ಟು ಕಲಸಿ 'ಮೂಡೆ' ಅಥವಾ ಕಡಬು ತಯಾರಿಸಲಾಗುತ್ತದೆ.
ಮಹಾನವಮಿಯ ರಾತ್ರಿ ಅನ್ನಪ್ರಸಾದದೊಂದಿಗೆ ಎಲ್ಲ ಭಕ್ತರಿಗೂ ಪ್ರಸಾದ ರೂಪವಾಗಿ ಮೂಡೆ ಹಾಗೂ ಗೋಧಿ ಪಾಯಸ ವಿತರಿಸಲಾಗುತ್ತದೆ . 36 ಮುಡಿ ಅಕ್ಕಿ ಹಿಟ್ಟು ಮತ್ತು 12 ಮುಡಿ ಉದ್ದುನ ಹಿಟ್ಟಿನ ಕಡುಬು ತಯಾರಿಸಲಾಗಿತ್ತು.












Click it and Unblock the Notifications