ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮೇಳೈಸಲಿದೆ ಅದ್ಧೂರಿಯ ಕಂಬಳ
ಮಂಗಳೂರು, ಜುಲೈ 28: ತುಳುನಾಡು ಜಾನಪದ ಕ್ರೀಡೆ ಕಂಬಳಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿತ್ತು. ಇದೀಗ ಕಂಬಳ ಕುರಿತ ತಿದ್ದುಪಡಿಯನ್ನು ಜುಲೈ 20 ರಂದು ರಾಜ್ಯ ಸರ್ಕಾರವು ತನ್ನ ರಾಜಪತ್ರದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ಸದ್ಯಕ್ಕೆ ಕಾನೂನು ತೊಡಕು ನಿವಾರಣೆಯಾಗಿದೆ. ಈ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಮತ್ತೆ ಕಂಬಳ ಕ್ರೀಡಾ ಮೇಳೈಸಲಿದೆ.
ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಉಳಿಸಲು ರಾಜ್ಯಾದ್ಯಂತ ಕಂಬಳ ಸಮಿತಿ, ಜನಪ್ರತಿನಿಧಿಗಳು, ಸೆಲೆಬ್ರಿಟಿಗಳು, ಕಂಬಳಾಭಿಮಾನಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಸಾಮೂಹಿಕ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ನಂತರ ರಾಜ್ಯಸರಕಾರ 'ಕರ್ನಾಟಕ ಪ್ರಾಣಿ ಹಿಂಸಾಚಾರ ತಡೆಗಟ್ಟುವ ವಿಧೇಯಕ'ಕ್ಕೆ ತಿದ್ದುಪಡಿ ತಂದಿತ್ತು.

ಇದಕ್ಕೆ ರಾಜ್ಯಪಾಲರು ಸಹಿಹಾಕದೆ ನೇರ ರಾಷ್ಟ್ರಪತಿಗಳಿಗೆ ಕಳುಹಿಸಿ ಕೊಟ್ಟಿದ್ದರು. ರಾಷ್ಟ್ರಪತಿಗಳು 'ಕರ್ನಾಟಕ ಪ್ರಾಣಿ ಹಿಂಸಾಚಾರ ತಡೆಗಟ್ಟುವ (ತಿದ್ದುಪಡಿ) ವಿಧೇಯಕ - 2017'ಕ್ಕೆ ಜುಲೈ 3ರಂದು ಸಹಿ ಹಾಕಿದ್ದರು. ಇದರಿಂದ ತುಳುನಾಡಿನ ಜಾನಪದ ಕ್ರೀಡೆಗೆ ಮತ್ತೆ ಚಾಲನೆ ದೊರಕಿತ್ತು. ಜತೆಗೆ ಉತ್ತರ ಕರ್ನಾಟಕದ ಎತ್ತಿನಗಾಡಿ ಓಟಕ್ಕೂ ಹಾದಿ ಸುಗಮವಾಗಿತ್ತು.
ಇದೀಗ ಕರ್ನಾಟಕ ಗೆಜೆಟ್ ನಲ್ಲಿಯೂ ಇದು ಪ್ರಕಟವಾಗುವುದರೊಂದಿಗೆ ಕಂಬಳಕ್ಕಿದ್ದ ಎಲ್ಲಾ ಅಡೆತಡೆಗಳೂ ನಿವಾರಣೆಯಾಗಿವೆ. ಈ ನಿಟ್ಟಿನಲ್ಲಿ ಹೋರಾಟ ಮಾಡಿದ ಎಲ್ಲರನ್ನೂ ಸೇರಿಸಿಕೊಂಡು ದೊಡ್ಡ ಮಟ್ಟದಲ್ಲಿ ವಿಜಯೋತ್ಸವ ಆಯೋಜಿಸಲು ಚಿಂತನೆ ನಡೆಯುತ್ತಿದೆ.
"ಕಂಬಳ ಹೋರಾಟ ಯಶಸ್ವಿಗೊಳಿಸಲು ಕಾರಣಕರ್ತರಾದ ಎಲ್ಲರನ್ನು ಒಗ್ಗೊಡಿಸಿ ಒಂದು ವಿಜಯೋತ್ಸವ ಕಂಬಳ ಶ್ರೀಘ್ರದಲ್ಲೇ ನಡೆಯಲಿದೆ," ಎಂದು ಮಾಜಿ ಸಚಿವ ಅಭಯಚಂದ್ರ ಜೈನ 'ಒನ್ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.












Click it and Unblock the Notifications