ಗಡಿ ಬಂದ್ ಮಾಡಿದ ಕರ್ನಾಟಕ; ಕೇರಳದ ಆಕ್ಷೇಪ
ಮಂಗಳೂರು, ಫೆಬ್ರವರಿ 23: ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣ ಹೆಚ್ಚಾದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ಸಂಪರ್ಕಿಸುವ 9 ರಸ್ತೆಗಳನ್ನು ಬಂದ್ ಮಾಡಿದೆ.
ಕರ್ನಾಟಕದ ಸರ್ಕಾರದ ತೀರ್ಮಾನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಡಿಗಳನ್ನು ಬಂದ್ ಮಾಡಿ, ವಾಹನಗಳಿಗೆ ನಿರ್ಬಂಧ ಹೇರುವುದು ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಗಡಿಗಳನ್ನು ಬಂದ್ ಮಾಡಿರುವ ಕರ್ನಾಟಕ ಸರ್ಕಾರದ ತೀರ್ಮಾನವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಕೇಂದ್ರದ ಒಪ್ಪಿಗೆ ಇಲ್ಲದೇ ಯಾವುದೇ ರಾಜ್ಯವೂ ಗಡಿಗಳನ್ನು ಬಂದ್ ಮಾಡುವಂತಿಲ್ಲ ಎಂದು ಕೇರಳ ಹೇಳಿದೆ.

ಸೋಮವಾರ ಬೆಳಗ್ಗೆ 6 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದಿಂದ ಆಗಮಿಸುವವರಿಗೆ ತಲಪಾಡಿ, ಸಾರಡ್ಕ, ನೆಟ್ಟಣಿಗ, ಮುಡ್ನೂರು, ಮೇಣಾಲ ಮತ್ತು ಜಾಲ್ಸೂರು ಮೂಲಕ ಮಾತ್ರ ಸಂಚಾರ ನಡೆಸಲು ಅವಕಾಶ ನೀಡಿದೆ.
ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವವರು ಕೋವಿಡ್ ನೆಗೆಟಿವ್ ವರದಿ ಇರುವುದನ್ನು ಖಚಿತಪಡಿಸಿಕೊಂಡು ಪ್ರವೇಶ ಪಡೆಯಬೇಕು ಎಂದು ಹೇಳಿದೆ. ಗಡಿ ಚೆಕ್ ಪೋಸ್ಟ್ಗಳಲ್ಲಿ ಆರೋಗ್ಯ ಇಲಾಖೆಯ ತಂಡ ತಪಾಸಣೆ ಕೈಗೊಂಡಿದೆ.
ಅನ್ ಲಾಕ್ ಮಾರ್ಗಸೂಚಿಯನ್ನು ಹೊರಡಿಸುವಾಗ ಕೇಂದ್ರ ಗೃಹ ಇಲಾಖೆ ಅಂತರರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧ ಹೇರಬಾರದು ಎಂದು ಹೇಳಿತ್ತು. ರಾಜ್ಯಗಳು ಗಡಿಯನ್ನು ಮುಚ್ಚುವಂತಹ ಸಂದರ್ಭದಲ್ಲಿ ಕೇಂದ್ರದ ಒಪ್ಪಿಗೆ ಪಡೆಯಬೇಕು ಎಂದು ಸೂಚಿಸಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಗಡಿಯ ಮೂಲಕ ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು ಗಡಿ ಚೆಕ್ ಪೋಸ್ಟ್ಗಳಲ್ಲಿ ಹೆಸರು ದಾಖಲಿಸಬೇಕು. ಪ್ರತಿಯೊಬ್ಬರು ಸಹ 72 ಗಂಟೆಯೊಳಗೆ ನಡೆಸಲಾದ ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಆಂಬ್ಯುಲೆನ್ಸ್ಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಹಿಂದೆ ಲಾಕ್ ಡೌನ್ ಸಮಯದಲ್ಲಿಯೂ ಗಡಿ ಬಂದ್ ಮಾಡಿದಾಗ ಕೇರಳ ಆಕ್ಷೇಪ ವ್ಯಕ್ತಪಡಿಸಿತ್ತು.












Click it and Unblock the Notifications