ಡಿ.21ರಿಂದ ಮಂಗಳೂರಿನಲ್ಲಿ ವೈಭವದ ಕರಾವಳಿ ಉತ್ಸವಕ್ಕೆ ಚಾಲನೆ
ಮಂಗಳೂರು ಡಿಸೆಂಬರ್ 20 : ಮಂಗಳೂರಿನಲ್ಲಿ 2018 ರ ಕರಾವಳಿ ಉತ್ಸವಕ್ಕೆ ನಾಳೆ ಡಿಸೆಂಬರ್ 21 ರಿಂದ ಚಾಲನೆ ದೊರಕಲಿದೆ. ಉತ್ಸವದ ಅಂಗವಾಗಿ ಕಲಾ ತಂಡಗಳನ್ನೊಳಗೊಂಡ ಆಕರ್ಷಕ ಮೆರವಣಿಗೆ ನೆಹರೂ ಮೈದಾನದಿಂದ ಹೊರಡಲಿದ್ದು, ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದವರೆಗೆ ಸಂಚರಿಸಲಿದೆ. ನಂತರ ವಸ್ತುಪ್ರದರ್ಶನ ಉದ್ಘಾಟನೆಯಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕರಾವಳಿ ಉತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಕೊಂಚಾಡಿಯಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಡಿಸೆಂಬರ್ 21 ರ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಉದ್ಘಾಟಿಸಲಿದ್ದಾರೆ. ಕರಾವಳಿ ಉತ್ಸವದ ಅಂಗವಾಗಿ ಮಂಗಳೂರು ನಗರದ ವಿವಿಧ ಕಡೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದ್ದು, ಡಿಸೆಂಬರ್ 21ರಿಂದ 45 ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನದಲ್ಲಿ ವೈವಿಧ್ಯಮಯ ಮನೋರಂಜನಾ ಚಟುವಟಿಕೆಗಳು, ಅಮ್ಯೂಸ್ ಮೆಂಟ್ ಗಳು, ಮಾರಾಟ ಮೇಳ, ಮಕ್ಕಳ ಮನರಂಜನಾ ತಾಣಗಳು ಇರಲಿವೆ.
ಬಾನವಳ್ಳಿ ಉಣ್ಣಕ್ಕಿ ಉತ್ಸವದಲ್ಲಿ ಅಲುಗಾಡುವ ಹುತ್ತ, ನಾಗಪ್ಪನ ಮಾಯೆಗೆ ಬೆರಗಾದ ಜನ
ಕರಾವಳಿ ಉತ್ಸವದ ಪ್ರಮುಖ ಭಾಗವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಲ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್ ಎರಡು ಕಡೆ ನಡೆಯಲಿವೆ. ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರತಿಭಾವಂತ ಕಲಾವಿದರು, ಖ್ಯಾತಿವೆತ್ತ ಕಲಾ, ಸಾಂಸ್ಕೃತಿಕ ತಂಡಗಳಿಂದ, ಕಲಾವಿದರಿಂದ ಆಕರ್ಷಕ, ಕಾರ್ಯಕ್ರಮಗಳು ನಡೆಯಲಿವೆ. ಯುವ ಉತ್ಸವ, ನಗೆ ಹಬ್ಬ, ಸಂಗೀತ, ನೃತ್ಯ, ನಾಟಕ, ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ವಿವಿಧ ಕ್ರೀಡಾಕೂಟಗಳು
ಕರಾವಳಿ ಉತ್ಸವ ಅಂಗವಾಗಿ ಜನವರಿ 28 ರಂದು ಕರಾವಳಿ ಉತ್ಸವ ಮೈದಾನ ಪಕ್ಕದಲ್ಲಿ ಪುರುಷರ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಮುಕ್ತ ಹ್ಯಾಂಡ್ ಬಾಲ್, ವಿಕಲಚೇತನರ ಕ್ರೀಡಾಕೂಟ, ಲಗೋರಿ ಪಂದ್ಯಾಟ ನಡೆಯಲಿದೆ. ಜನವರಿ 29ರಂದು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಪುರುಷರ ಹಾಗೂ ಮಹಿಳೆಯರಿಗೆ ಮುಕ್ತ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದೆ.
ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆಯೊಂದಿಗೆ ನಗದು ನೀಡಲಾಗುವುದು. ಶಾಲಾ ಕಾಲೇಜುಗಳ ಆಸಕ್ತ ಕ್ರೀಡಾ ಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಸುಮಾರು 200 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಬೀಚ್ ಉತ್ಸವ
ಬೀಚ್ ಉತ್ಸವವು ಜನವರಿ 28ರಿಂದ 30ರವರೆಗೆ ಪಣಂಬೂರು ಬೀಚ್ ನಲ್ಲಿ ನಡೆಯಲಿದೆ. ಪ್ರತೀ ದಿನ ಸಂಜೆ ಅನುಭವಿ ನೃತ್ಯ ತಂಡಗಳಿಂದ ಆಕರ್ಷಕ ನೃತ್ಯ ಸ್ಪರ್ಧೆ, ಸಂಗೀತ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ. ಇದಲ್ಲದೇ, ಬೆಳಿಗ್ಗೆ ಬೀಚ್ ವಾಲಿಬಾಲ್ ಪಂದ್ಯಾಟ, ಗಾಳಿಪಟ ತಯಾರಿ ಪ್ರಾತ್ಯಕ್ಷಿಕೆ, ಮರಳಿನಿಂದ ಶಿಲ್ಪಾಕೃತಿ ರಚನೆ, ಡ್ರಮ್ ಜಾಮ್ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ. ಆಕರ್ಷಕ ತಿಂಡಿ ತಿನಿಸುಗಳ ಆಹಾರೋತ್ಸವ ಕೂಡಾ ಪಣಂಬೂರು ಬೀಚ್ ನಲ್ಲಿ ನಡೆಯಲಿದೆ.
ಕರಾವಳಿ ಉತ್ಸವ ಉದ್ಘಾಟನೆಗೆ ಪ್ರಕಾಶ್ ರೈ, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಛಾಯಾ ಚಿತ್ರಗಳ ಪ್ರದರ್ಶನ
ಜನವರಿ 22ರಿಂದ 24ರವರೆಗೆ ಕದ್ರಿ ಪಾರ್ಕ್ ನಲ್ಲಿ ಮಂಗಳೂರಿನ ಇತಿಹಾಸ, ಪರಂಪರೆ ಸಾರುವ ಛಾಯಾ ಚಿತ್ರಗಳ ಪ್ರದರ್ಶನ ನಡೆಯಲಿದೆ. ಅದೇ ರೀತಿ, ಸ್ವಾತಂತ್ರ್ಯಪೂರ್ವ ಸಾಹಿತ್ಯಕ್ಕೆ ಕರಾವಳಿಯ ಕೊಡುಗೆಗಳ ಕೃತಿಗಳ ಮಾಹಿತಿ ಮತ್ತು ಪ್ರದರ್ಶನ ಕೂಡ ಇರಲಿದೆ.
ಮಣಿಕಾಂತ್ ಕದ್ರಿ ಲೈವ್
ಜನವರಿ 30ರಂದು ಸಂಜೆ 5 ಕರಾವಳಿ ಉತ್ಸವ ಸಮಾರೋಪ ಪಣಂಬೂರು ಬೀಚ್ ನಲ್ಲಿ ನಡೆಯಲಿದೆ. ಬಳಿಕ ಖ್ಯಾತ ಸಂಗೀತಗಾರ ಮಣಿಕಾಂತ್ ಕದ್ರಿ ಲೈವ್ ನಡೆಯಲಿದೆ.