ಗೋಡೆಗಳ ಮೇಲೆ ಚಿತ್ತಾರ, ಸ್ಮಾರ್ಟ್ ಯುವಕರ 'ಸುಂದರ ಮಂಗಳೂರು' ಕನಸು
ಮಂಗಳೂರು, ಜೂನ್ 1: ನಗರವೊಂದು ಸ್ವಚ್ಛಗೊಳ್ಳುವುದರ ಜತೆಗೆ ಸಂಪೂರ್ಣ ಸುಂದರವಾಗಿ ಕಂಗೊಳಿಸಬೇಕು. ಗಬ್ಬು, ಗಲೀಜು, ಅಸಯ್ಯ ಭಾವ ಎಲ್ಲೂ ಮೂಡಬಾರದು, ಎಲ್ಲಿ ನೋಡಿದರಲ್ಲಿ ಭಾವ ಬುದ್ದಿಗೆ ಮುದ ನೀಡುವ ಚಿತ್ತಾರಗಳನ್ನು ಕಾಣಿಸಬೇಕು. ಇಂತಹದ್ದೊಂದು ಉದ್ದೇಶ ಇಟ್ಟುಕೊಂಡು ಜಿಲ್ಲೆಯ ಸಂಸ್ಕೃತಿ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಾ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಮಂಗಳೂರಿನ ಅದ್ವಿತ ಆರ್ಟ್ಸ್ ನ ಯುವ ಸದಸ್ಯರು.
ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ಯುವಕರ ತಂಡದ ಈ ಪರಿಕಲ್ಪನೆಗೆ, ಉತ್ಸಾಹೀ ಯುವಕರ ಪರಿಶ್ರಮಕ್ಕೆ ರಾಮಕೃಷ್ಣ ಮಿಷನ್ ಖುಷಿ ಖುಷಿಯಾಗಿ ನೆರವಿನ ಸಾಥ್ ನೀಡುತ್ತಿದೆ. ಮಾದರಿ ಸ್ಮಾರ್ಟ್ ಸಿಟಿಯನ್ನಾಗಿ ಮಂಗಳೂರನ್ನು ಪರಿವರ್ತಿಸುವುದೇ ಇವರೆಲ್ಲರ ಅಸೆ.[ಆಡು ಮುಟ್ಟದ ಸೊಪ್ಪಿಲ್ಲ' ಮಂಗ್ಳೂರಿನ ಭವಾನಿ ಜೋಗಿ ಆಡದ ಕ್ರೀಡೆಗಳಿಲ್ಲ]
ಬಿಡಿ ಬದಿಯ ಗೋಡೆಗಳಲ್ಲಿ ಈ ಯುವಪಡೆ ಕರಾವಳಿಯ ಗುತ್ತಿನಮನೆ, ಮೀನುಗಾರಿಕೆ, ಕಣಜ, ಗೋಮಟೇಶ್ವರ, ಭೂತ ಕೋಲ, ಹುಲಿವೇಷ, ರಾಕ್ಷಸ ವೇಶ, ಕೋಳಿ ಅಂಕ, ಕಂಬಳ, ಸೂರ್ಯಸ್ತಮಾನ ಮೊದಲಾದ ಆಕರ್ಷಕ ಚಿತ್ರಗಳನ್ನು ಬಿಡಿಸುತ್ತಿದೆ.

ತುಳುನಾಡ ವೈಭವ
ಈ ರೀತಿ ಚಿತ್ರಗಳನ್ನು ಬಿಡಿಸುವ ಮೂಲಕ ಖಾಲಿ ಗೋಡೆಗಳ ಮೇಲೆ ತುಳುನಾಡ ವೈಭವವನ್ನು ಯುವಕರು ತೆರೆದಿಟ್ಟಿದ್ದಾರೆ. ಇದು ಮಾತ್ರವಲ್ಲದೆ ಶಿಕ್ಷಣ ಜಾಗೃತಿ, ರವೀಂದ್ರ ಕಲಾಭವನ, ಬಾಲಕಾರ್ಮಿಕ ಪದ್ಧತಿ, ಪರಿಸರ ಸಂರಕ್ಷಣೆ, ನೀರು ಉಳಿಸಿ, ಅರೋಗ್ಯ ಜಾಗೃತಿ ಸೇರಿದಂತೆ ನಾನಾ ಜಾಗೃತಿ ಮೂಡಿಸುವ ಚಿತ್ರಗಳೂ ಗೋಡೆಯ ಸೌಂದರ್ಯವನ್ನು ಹೆಚ್ಚಿಸಿವೆ.

ಸೂಕ್ತ ಸ್ಪಂದನೆ ಸಿಕ್ಕಿದೆ
"ಮಂಗಳೂರು ನಗರ ಯಾವತ್ತೂ ಕ್ಲೀನ್. ಇದು ಮತ್ತಷ್ಟು ಸುಂದರವಾಗಿ ಕಾಣಬೇಕೆನ್ನುವ ಉದ್ದೇಶದಿಂದ ರಸ್ತೆಯ ಗೋಡೆಗಳಲ್ಲಿ ಜನಜಾಗೃತಿ ಮೂಡಿಸುವ, ತುಳುನಾಡಿನ ವೈಭವವನ್ನು ಹೇಳುವ ಚಿತ್ರ ಬಿಡಿಸಿದ್ದೇವೆ. ಜನರೂ ಇದಕ್ಕೆ ಸೂಕ್ತವಾಗಿ ಸ್ಪಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ," ಎನ್ನುತ್ತಾರೆ ಅದ್ವಿತ ಆರ್ಟ್ಸ್ ತಂಡ ಸದಸ್ಯೆ ಸೌಮ್ಯ ಭಟ್.[ಕಡಲ ನಗರಿಯಲ್ಲಿ ವಿಶ್ವ ಸರ್ಫಿಂಗ್ ಲೀಗ್, ಅಲೆಗಳ ಜತೆ ಅಟ]

'ಸುಂದರ ಮಂಗಳೂರು' ಆಗಬೇಕು
"ರಾಜ್ಯದ ನಾನಾ ಕಡೆ ನಾವು ಪ್ರವಾಸ ಮಾಡಿದ್ದೇವೆ. ಆದರೆ ಬೆಂಗಳೂರು ಸೇರಿದಂತೆ ಉಳಿದ ನಗರಕ್ಕೆ ಹೋಲಿಸಿದರೆ ನಮ್ಮ ಮಂಗಳೂರು ಸ್ವಚ್ಛ ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಕಲ್ಪನೆ ಪ್ರಕಾರ ಸ್ವಚ್ಛ ನಗರ ಅನ್ನುವುದಕ್ಕಿಂತ ಸುಂದರ ಮಂಗಳೂರು ಆಗಬೇಕು. ಆ ನಿಟ್ಟಿನಲ್ಲಿ ನಗರದ ಹೃದಯ ಭಾಗದ ರಸ್ತೆಯ ಗೋಡೆಗಳ ಮೇಲೆ ಚಿತ್ತಾರ ಬಿಡಿಸುವ ಮೂಲಕ ಜನಜಾಗೃತಿ ಮೂಡಿಸುವ ಕೆಲಸವನ್ನು ನಮ್ಮ ಕಲಾವಿದರ ತಂಡ ಮಾಡಿದೆ," ಎನ್ನುತ್ತಾರೆ ಅದ್ವಿತ ಆರ್ಟ್ಸ್ ತಂಡದ ಇನ್ನೊಬ್ಬ ಸದಸ್ಯರಾದ ಶೈಲೇಶ್ ಕೋಟ್ಯಾನ್.

ಕಂಪೌಂಡ್ ಗಳ ಮೇಲೆ ಚಿತ್ತಾರ
ಮಂಗಳೂರಿನ ಹೃದಯ ಭಾಗದಲ್ಲಿರುವ ಮಿನಿ ವಿಧಾನ ಸೌಧದಿಂದ ವೆನ್ಲಾಕ್ ವರೆಗಿನ ಸುಮಾರು 1300ಅಡಿ ಉದ್ದದ 95 ಬ್ಲಾಕ್ ನ ಕಾಂಪೌಂಡ್ ಗಳ ಮೇಲೆ ಈಗಾಗಲೇ ಸುಂದರ ಚಿತ್ರಗಳ ಮೂಲಕ ಚಿತ್ತಾರ ಮೂಡಿಸಲಾಗಿದೆ.

ರಾಮಕೃಷ್ಣ ಮಿಷನ್ ಸಾಥ್
ಚಿತ್ರ ಬಿಡಿಸುವ ಸಂಕಲ್ಪ ತೊಟ್ಟ ಅದ್ವಿತ ಆರ್ಟ್ಸ್ ತಂಡಕ್ಕೆ ಮಂಗಳೂರಿನ ರಾಮಕೃಷ್ಣ ಮಿಷನ್ ಸಂಸ್ಥೆ ಸಾತ್ ನೀಡಿದ್ದು ಸಂಪೂರ್ಣ ಪೇಂಟಿಂಗ್, ಚಹಾ -ತಿಂಡಿ ಖುರ್ಚು ವೆಚ್ಚದ ಜವಾಬ್ದಾರಿ ವಹಿಸಿ ಕೊಂಡಿದೆ. ಈ ಮೂಲಕ ಸುಂದರ ಮಂಗಳೂರು ಕಟ್ಟುವುದಕ್ಕೂ ಬದ್ಧವಾಗಿದೆ.












Click it and Unblock the Notifications