ಕಲ್ಲಡ್ಕ ಭಟ್, ಶರಣ್ ಪಂಪ್ವೆಲ್ ಬಂಧನಕ್ಕೆ ಜು.15ರ ಗಡುವು ನೀಡಿದ SDPI
ಮಂಗಳೂರು, ಜುಲೈ 5: ಅಶ್ರಫ್ ಕೊಲೆ ಪ್ರಕರಣದ ರೂವಾರಿಗಳಾದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್ವೆಲ್ ಅವರನ್ನು ಜುಲೈ 15ರೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಜು.15ರಂದು 'ಕಲ್ಲಡ್ಕ ಚಲೋ' ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಗರದಲ್ಲಿ ನಡೆದ ಹೆಚ್ಚಿನ ಎಲ್ಲಾ ಘಟನೆಗಳಲ್ಲಿ ಬಂಧಿತರಾದ ಬಹುತೇಕರು ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ಟರ ಆಪ್ತರು. ಆದ್ದರಿಂದ ಪ್ರಭಾಕರ್ ಹಾಗೂ ಶರಣ್ ಅವರನ್ನು ಕೂಡಲೇ ಬಂಧಿಸಬೇಕು," ಎಂದರು.
"ಕೋಮುಗಲಭೆ, ಕೊಲೆ, ಹಿಂಸಾಚಾರ ಹಾಗೂ ನೈತಿಕ ಪೊಲೀಸ್ಗಿರಿಗಳಂತಹ ಘಟನೆಗಳು ಇನ್ನು ಮುಂದೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರುಕಳಿಸುವುದರಲ್ಲಿ ಸಂದೇಹವಿಲ್ಲ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಶರಣ್ ಪಂಪ್ವೆಲ್ ಅವರ ಬಂಧನವಾಗಬೇಕು. ಇವರನ್ನು ಬಂಧಿಸಿದರೆ ಮಾತ್ರ ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಲು ಸಾಧ್ಯವಿದೆ," ಎಂದರು.
"ಮಿಥುನ್ ಪೂಜಾರಿ ಮೇಲೆ ಹಲವು ಪ್ರಕರಣಗಳಿದ್ದು, ರೌಡಿ ಶೀಟರ್ ಕೂಡ ಆಗಿದ್ದಾನೆ. ಮೇ 25ರಂದು ಕಲ್ಲಡ್ಕದಲ್ಲಿ ಮುಸ್ಲಿಂ ಯುವಕರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ರೂವಾರಿ ಇದೇ ಮಿಥುನ್ ಪೂಜಾರಿಯಾಗಿದ್ದು, ಆತನ ಬಂಧನ ಈವರೆಗೆ ಆಗಿಲ್ಲ. ಬಂಟ್ವಾಳದ ರಿಕ್ಷಾ ಚಾಲಕ ಇಕ್ಬಾಲ್ ಕೊಲೆಯ ಆರೋಪಿಗಳೂ ಇದೇ ತಂಡದವರಾಗಿದ್ದು, ನಾಸಿರ್ ಸಜಿಪ ಎಂಬವರನ್ನು ಕೊಲೆಗೈದವರು ಕೂಡ ಕಲ್ಲಡ್ಕ ಕುಕ್ಕಾಜೆ ಪರಿಸರದ ಸಂಘ ಪರಿವಾರದ ಕಾರ್ಯಕರ್ತರಾಗಿದ್ದಾರೆ," ಎಂದು ಇಕ್ಬಾಲ್ ಬೆಳ್ಳಾರೆ ಹೇಳಿದ್ದಾರೆ.
"ಜಲೀಲ್ ಕರೋಪಾಡಿಯನ್ನು ಹತ್ಯೆಗೈದ ಪ್ರಮುಖ ಆರೋಪಿಯಾದ ನರಸಿಂಹ ಶೆಟ್ಟಿ ಮಾಣಿ ಪ್ರಭಾಕರ ಭಟ್ ಆಪ್ತನಾಗಿದ್ದು, ಮುಹಮ್ಮದ್ ಅಶ್ರಫ್ರ ಕೊಲೆಗೈದವರು ಕೂಡ ಪ್ರಭಾಕರ ಭಟ್ ಮತ್ತು ಶರಣ್ ಪಂಪ್ವೆಲ್ ಆಪ್ತರಾಗಿದ್ದಾರೆ," ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ಅಥಾವುಲ್ಲಾ ಮಾತನಾಡಿ, ಅಶ್ರಫ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಶರಣ್ ಪಂಪ್ವೆಲ್ರನ್ನು ಜು.15ರೊಳಗೆ ಬಂಧಿಸಿ, ಕೊಲೆಯ ಹಿಂದಿನ ಷಡ್ಯಂತ್ರ ಬಹಿರಂಗವಾಗಬೇಕು. ಇಲ್ಲದಿದ್ದರೆ ಜು.15ರಂದು ಹಮ್ಮಿಕೊಂಡಿರುವ ಚಳವಳಿಯ ರೂಪುರೇಷೆಗಳನ್ನು ಬಹಿರಂಗ ಪಡಿಸುವುದಾಗಿ ಅವರು ಜಿಲ್ಲಾಡಳಿತ ಮತ್ತು ಸರಕಾರವನ್ನು ಎಚ್ಚರಿಸಿದ್ದಾರೆ.