ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ 2 ಗಂಟೆಗಳಿಗೊಮ್ಮೆ ವಾಟರ್ ಬೆಲ್!
ಮಂಗಳೂರು, ನವೆಂಬರ್ 22; ದಿನಕ್ಕೆ ಕನಿಷ್ಠ ಒಂದು ಲೀಟರ್ ಆದರೂ ನೀರು ಕುಡಿಯಬೇಕೆನ್ನೋದು ವೈದ್ಯರ ಮಾತು. ಆದರೆ ಮಕ್ಕಳಲ್ಲಿ ನೀರು ಕುಡಿಯುವ ಅಭ್ಯಾಸ ಕಡಿಮೆಯಾಗಿರುವ ಹಿನ್ನಲೆಯಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದೆ.
ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ನೀರು ಕುಡಿಯುವ ವ್ಯವಸ್ಥೆಯನ್ನು ಕೆಲವು ಖಾಸಗಿ ಶಾಲೆಗಳು ಜಾರಿಗೆ ತಂದಿದೆ. 'ವಾಟರ್ ಬೆಲ್' ಎಂದು ಕರೆಯುವ ಈ ಯೋಜನೆಯನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮದ ಶಾಲೆಯೊಂದು ಜಾರಿಗೆ ತಂದಿದೆ.
ದಕ್ಷಿಣ ಕನ್ನಡದ ವಿಶೇಷ ಶಾಲೆ; ಹಸಿರ ಬಳ್ಳಿಯೇ ಮೇಲ್ಛಾವಣಿ
ಈ ಶಾಲೆಯಲ್ಲಿ ಪ್ರತೀ ಎರಡು ಗಂಟೆಗೊಮ್ಮೆ ವಾಟರ್ ಬೆಲ್ ಮೊಳಗುತ್ತಿದ್ದು, ಈ ಬೆಲ್ ಆದ ತಕ್ಷಣವೇ ಮಕ್ಕಳು ತಮ್ಮ ತಮ್ಮ ವಾಟರ್ ಬಾಟಲ್ ಗಳ ನೀರನ್ನು ಕುಡಿಯಬೇಕಿದೆ. ಕಡಬ ತಾಲೂಕಿನ ಆಲಂಕಾರು ಸರಕಾರಿ ಶಾಲೆಯಲ್ಲಿ ವಾಟರ್ ಬೆಲ್ ಕಾರ್ಯಕ್ರಮವನ್ನು ತಮ್ಮ ಶಾಲೆಯಲ್ಲೂ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ನೀರು ಕುಡಿಯುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ.
ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ
ರಾಜ್ಯದ ಹಿಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಸರಕಾರಿ ಶಾಲೆಗಳಲ್ಲಿ ವಾಟರ್ ಬೆಲ್ ಎನ್ನುವ ಕಾರ್ಯಕ್ರಮವನ್ನು ಕಡ್ಡಾಯ ಮಾಡಬೇಕೆನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದರಾದರೂ, ಆ ಕಾರ್ಯಕ್ರಮ ಮಾತ್ರ ಸರಕಾರಿ ಶಾಲೆಗಳಲ್ಲಿ ಆರಂಭಗೊಂಡಿರಲಿಲ್ಲ. ಆದರೆ ಅಲಂಕಾರಿನ ಈ ಶಾಲೆ ಸಿಬ್ಬಂದಿಗಳು, ಮಕ್ಕಳ ಪೋಷಕರೊಂದಿಗೆ ಸೇರಿಕೊಂಡು ವಾಟರ್ ಬೆಲ್ ಕಾರ್ಯಕ್ರಮವನ್ನು ಶಾಲೆಯ ಮಕ್ಕಳ ದಿನಚರಿಯಲ್ಲಿ ಅಳವಡಿಸಿಕೊಳ್ಳುವ ಮಾದರಿ ಸರಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ.
1 ರಿಂದ 5ನೇ ತರಗತಿ ಶಾಲೆ ಓಪನ್; ವೇಳಾಪಟ್ಟಿ ಪ್ರಕಟ
ಮಕ್ಕಳಲ್ಲಿ ನಿರ್ಜಲೀಕರಣದ ಸಮಸ್ಯೆ, ಅಪೌಷ್ಟಿಕತೆಯ ಸಮಸ್ಯೆ, ತಲೆಸುತ್ತಿ ಬೀಳುವ ಹೀಗೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣ ಮಕ್ಕಳು ಶಾಲೆಯಲ್ಲಿ ನೀರು ಕುಡಿಯದಿರುವುದೇ ಆಗಿದೆ ಎನ್ನುವುದನ್ನು ಅರಿತುಕೊಂಡು ಅಲಂಕಾರು ಶಾಲೆಯಲ್ಲಿ ವಾಟರ್ ಬೆಲ್ ಯೋಜನೆಯನ್ನು ಅಳವಡಿಸಿಕೊಳ್ಳಲಾಗಿದೆ.
ಪ್ರತೀ ದಿನ ಶಾಲಾ ಸಮಯದಲ್ಲಿ ಪ್ರತೀ ಎರಡು ಗಂಟೆಗಳಿಗೊಮ್ಮ ವಾಟರ್ ಬೆಲ್ ಮೊಳಗಿಸಲಾಗುತ್ತಿದ್ದು, ಆ ಬೆಲ್ ಆದ ತಕ್ಷಣವೇ ಮಕ್ಕಳು ತಮ್ಮ ತಮ್ಮ ನೀರಿನ ಬಾಟಲ್ ಗಳಿಂದ ನೀರು ಕುಡಿಯಬೇಕಿದೆ.
ಆಯಾಯ ವಯೋಮಾನಕ್ಕೆ ತಕ್ಕಂತೆ ನೀರು ಕುಡಿಯಬೇಕೆಂಬ ನಿಯಮದ ಪ್ರಕಾರವೇ ಪ್ರತೀ ಎರಡು ಗಂಟೆಗೆ ಇಲ್ಲಿನ ಮಕ್ಕಳು ನೀರು ಕುಡಿಯುತ್ತಾರೆ. ಅಲ್ಲದೆ ನೀರಿಗೆ ಬಳಸುವ ಬಾಟಲ್ ಗಳು ಸ್ಟೀಲ್ ಬಾಟಲ್ ಗಳೇ ಆಗಿರಬೇಕೆಂದು ಸೂಚನೆಯನ್ನೂ ನೀಡಲಾಗಿದೆ.
ಪ್ಲಾಸ್ಟಿಕ್ ಬಾಟಲ್ ಗಳಿಂದ ಮಕ್ಕಳ ಆರೋಗ್ಯದ ಮೇಲೆ ಸಮಸ್ಯೆ ಬೀರುವ ಸಾಧ್ಯತೆಯಿರುವ ಕಾರಣಕ್ಕಾಗಿ ಸ್ಟೀಲ್ ಬಾಟಲ್ ಗಳಲ್ಲೇ ನೀರು ತರುವಂತೆ ಶಾಲೆಯ ಸಿಬ್ಬಂದಿಗಳು ಸೂಚಿಸಿದ್ದಾರೆ. ಅಲ್ಲದೆ ಎಲ್ಲಾ ಮಕ್ಕಳು ತಮ್ಮ ಮನೆಯಿಂದ ಬಿಸಿ ನೀರನ್ನೇ ಬಾಟಲ್ ಗಳಲ್ಲಿ ತುಂಬಿ ತರಬೇಕೆಂಬ ಸೂಚನೆಯನ್ನೂ ನೀಡಲಾಗಿದೆ. ಶಾಲೆಯಲ್ಲಿ ಶುದ್ಧೀಕರಿಸಿದ ನೀರಿನ ವ್ಯವಸ್ಥೆಯಿದ್ದರೂ, ಮನೆಯಿಂದಲೇ ಮಕ್ಕಳಿಗೆ ನೀರು ತರುವಂತೆ ಪ್ರೇರೇಪಿಸಲಾಗುತ್ತಿದೆ.
"ನೀರು 66 ರೋಗಗಳಿಗೆ ಮದ್ದು ಎನ್ನುವುದು ಸಾಬೀತಾಗಿದ್ದು, ಇಂಥಹ ನೀರನ್ನು ಮಕ್ಕಳು ಕುಡಿಯುವಂತೆ ಪ್ರೇರೇಪಿಸುವುದೇ ಈ ವಾಟರ್ ಬೆಲ್ ಉದ್ದೇಶ" ಎನ್ನುತ್ತಾರೆ ಆಲಂಕಾರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಲಿಂಗರಾಜು.
ಶಾಲೆಯ ಈ ಯೋಜನೆಗೆ ಶಾಲಾಭಿವೃದ್ಧಿ ಸಮಿತಿಯೂ ತಮ್ಮ ಸಹಕಾರವನ್ನು ನೀಡುವ ಮೂಲಕ ಮಕ್ಕಳು ಹೆಚ್ಚು ಹೆಚ್ಚು ನೀರು ಕುಡಿಯುವಂತೆ ಪ್ರೋತ್ಸಾಹಿಸುತ್ತಿದೆ. ತರಗತಿ ಸಮಯದ ಮಧ್ಯದಲ್ಲೇ ಈ ವಾಟರ್ ಬೆಲ್ ಮೊಳಗಿಸಲಾಗುತ್ತಿದ್ದು, ತರಗತಿಯಲ್ಲಿ ಅಧ್ಯಾಪಕರು ಇರುವ ಕಾರಣಕ್ಕಾಗಿ ಮಕ್ಕಳು ನೀರು ಕುಡಿಯುತ್ತಿದ್ದಾರೆಯೇ ಎನ್ನುವುದನ್ನು ಗಮನಿಸುವ ಕಾರ್ಯವೂ ಅಧ್ಯಾಪಕರ ಮೇಲಿದೆ.
ಮನೆಯಿಂದ ಪೋಷಕರು ಮಕ್ಕಳಿಗೆ ಶಾಲೆಯಲ್ಲಿ ನೀರು ಕುಡಿಯಲೆಂದು ವಾಟರ್ ಬಾಟಲ್ ನಲ್ಲಿ ತುಂಬಿಸಿಕೊಡುವ ನೀರು ಈ ಹಿಂದೆ ಬೆಳಿಗ್ಗೆ ಇದ್ದ ರೀತಿಯಲ್ಲೇ ಸಂಜೆ ಮನೆ ತಲುಪುತ್ತಿತ್ತು. ಶಾಲೆಯ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಬ್ಯುಸಿಯಾಗಿರುವ ವಿದ್ಯಾರ್ಥಿಗಳಿಗೆ ನೀರು ಕುಡಿಯಬೇಕು ಎನ್ನುವುದೇ ಮರೆತು ಹೋಗುತ್ತದೆ. ಆದರೆ ಇದೀಗ ವಾಟರ್ ಬೆಲ್ ಬಾರಿಸಿದ ತಕ್ಷಣ ನೀರು ಕುಡಿಯಬೇಕು ಎನ್ನುವುದನ್ನು ಮನಗಂಡ ವಿದ್ಯಾರ್ಥಿಗಳು ಈ ವ್ಯವಸ್ಥೆಗೀಗ ಸಂಪೂರ್ಣ ಒಗ್ಗಿಕೊಂಡಿದ್ದಾರೆ.
Recommended Video
ಆಹಾರವಿಲ್ಲದೆ ಬದುಕಬಹುದು ಆದರೆ ನೀರಿಲ್ಲದೆ ಬದುಕುವುದು ಸಾಧ್ಯವಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯವಾಗಿದೆ. ಮನುಷ್ಯ ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರಿನ ಅಂಶ ಇಲ್ಲದೇ ಹೋದಲ್ಲಿ ವ್ಯಾಧಿಗಳು ದೇಹದಲ್ಲಿ ಬರೋದು ಸರ್ವೇ ಸಾಮಾನ್ಯ ಎನ್ನುವುದನ್ನು ಅರಿತ ಆಲಂಕಾರಿನ ಈ ಸರಕಾರಿ ಶಾಲೆ ತೆಗೆದುಕೊಂಡ ವಾಟರ್ ಬೆಲ್ ಎನ್ನುವ ಕಾನ್ಸೆಪ್ಟ್ ದೇಶದ ಎಲ್ಲಾ ಶಾಲೆಗಳಲ್ಲೂ ಜರೂರಾಗಿ ಜಾರಿಯಾಗಬೇಕಿದೆ.