ಮಂಗಳೂರಲ್ಲಿ ಗರ್ಭಿಣಿಯರ ಪರ ನಿಂತ ಜಯ ಕರ್ನಾಟಕ
ಮಂಗಳೂರು,ಮಾರ್ಚ್,17: ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದ 4 ಮಂದಿ ಗರ್ಭಿಣಿಯರನ್ನು ವೈದ್ಯರಿಲ್ಲ ಎಂಬ ಕಾರಣ ನೀಡಿ ಹಿಂದಕ್ಕೆ ಕಳುಹಿಸಿರುವ ಅಮಾನವೀಯ ಘಟನೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸಾಕ್ಷಿಯಾಗಿದ್ದು, ಜಯ ಕರ್ನಾಟಕ ರಿಕ್ಷಾ ಚಾಲಕ ಮಾಲೀಕರ ಸಂಘದ ಸದಸ್ಯರು ಆಸ್ಪತ್ರೆಗೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೆರಿಗೆ ನೋವು ಕಾಣಿಸಿಕೊಂಡಿದ್ದ 4 ಮಂದಿ ಗರ್ಭಿಣಿಯರು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಬೆಳಿಗ್ಗೆ ಬಂದಿದ್ದರು. ಅಲ್ಲಿನ ಸಿಬ್ಬಂದಿ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರಿಲ್ಲ ಎಂದು ಹೇಳಿ ಅವರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಅಲ್ಲದೆ ಕಬಕಾದಿಂದ ಹೆರಿಗೆ ಪರೀಕ್ಷೆಗಾಗಿ ಬಂದಿದ್ದ ಗರ್ಭಿಣಿಯನ್ನು ಹಿಂದಕ್ಕೆ ಕಳುಹಿಸಿ ತಮ್ಮ ವೃತ್ತಿಗೆ ಅಪಮಾನ ಎಸಗಿದ್ದಾರೆ.[ಕಾಮುಕ ಶಿಕ್ಷಕನಿಗೆ ಬಾರಿಸಿದ ಜಯ ಕರ್ನಾಟಕ]

ಜಯ ಕರ್ನಾಟಕ ರಿಕ್ಷಾ ಚಾಲಕ ಮಾಲೀಕರ ಸಂಘಕ್ಕೆ ತಿಳಿದದ್ದು ಹೇಗೆ?
ಕಬಕದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ ಆಟೋ ಚಾಲಕ ಕೆಲವೇ ನಿಮಿಷದೊಳಗೆ ಆಸ್ಪತ್ರೆಯಿಂದ ಹೊರಬಂದ ಮಹಿಳೆ ಬಳಿ ಕಾರಣ ಕೇಳಿದ್ದಾರೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಬಳಿ ಹೋದಾಗ ಸಿಬ್ಬಂದಿಯಿಂದ ಸ್ಪಷ್ಟ ಮಾಹಿತಿ ಸಿಗದಿದ್ದುದರಿಂದ ರಿಕ್ಷಾ ಚಾಲಕ ಈ ಕುರಿತು ತಮ್ಮ ಸಂಘಟನೆಯ ರಿಕ್ಷಾ ಚಾಲಕರಿಗೆ ವಿಷಯ ತಿಳಿಸಿದರು. ಬಳಿಕ ಸಂಘದ ಸದಸ್ಯರು ಆಸ್ಪತ್ರೆಗೆ ಬಂದು ಆಸ್ಪತ್ರೆಯ ಸಿಬ್ಬಂದಿಯಲ್ಲಿ ಈ ಬಗ್ಗೆ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.[ಬಾರ್ ನಲ್ಲಿ ಜಯ ಕರ್ನಾಟಕ-ಕರವೇ ಕಾರ್ಯಕರ್ತರ ಪುಂಡಾಟ]
ವಿಷಯ ತಿಳಿದು ಆಸ್ಪತ್ರೆಗೆ ಬಂದ ಆಸ್ಪತ್ರೆಯ ಸುರಕ್ಷಾ ರಕ್ಷಾ ಸಮಿತಿಯ ಸದಸ್ಯರಾದ ನಯನಾ ರೈ ಮತ್ತು ಹರಿಪ್ರಸಾದ್ ರೈ ಅವರು ಗರ್ಭಿಣಿಯರನ್ನು ಹಿಂದಕ್ಕೆ ಕಳುಹಿಸಿರುವ ಕುರಿತು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್ ಅವರಲ್ಲಿ ಪ್ರಶ್ನಿಸಿದರು. ಆ ವೇಳೆ ಅವರು 'ನನಗೆ ಈ ಕುರಿತು ಮಾಹಿತಿಯೇ ಇರಲಿಲ್ಲ" ಎಂದು ಸಬೂಬು ಹೇಳಿ ಜಾರಿಕೊಳ್ಳಲು ಪ್ರಯತ್ನಿಸಿದ್ದಾರೆ.[ಮಂಗಳೂರಲ್ಲಿ ಗರ್ಭಿಣಿ ಸಾವನ್ನಪ್ಪಲು ವೈದ್ಯರು ಕಾರಣರೇ?]
ಒಟ್ಟಿನಲ್ಲಿ ಈ ಘಟನೆಯಿಂದ ಗರ್ಭಿಣಿಯರಿಗೆ ಯಾವುದೇ ಸುರಕ್ಷತೆ ಇಲ್ಲ. ಆಸ್ಪತ್ರೆಯ ವೈದ್ಯರು ತಮ್ಮ ವೃತ್ತಿಯಲ್ಲಿ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications