ಯುಗಾದಿಗೆ ಮತ್ತೆ ಹಲಾಲ್ ಕಟ್ ವಿರುದ್ಧ ಜಟ್ಕಾ ಕಟ್ ಅಭಿಯಾನ: ಪ್ರಮೋದ್ ಮುತಾಲಿಕ್ರಿಂದ ಎಚ್ಚರಿಕೆಯ ಸಂದೇಶ
ಯುಗಾದಿಗೆ ಮತ್ತೆ ಹಲಾಲ್ ಕಟ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡುತ್ತೇವೆ ಎಂದು ಪ್ರಮೋದ್ ಮೊತಾಲಿಕ್ ಎಚ್ಚರಿಸಿದ್ದೇಕೆ ಎನ್ನುವ ವಿವರ ಇಲ್ಲಿದೆ ನೋಡಿ.
ಮಂಗಳೂರು, ಮಾರ್ಚ್, 20: ಕಳೆದ ಬಾರಿಯ ಯುಗಾದಿಯಂತೆ ಈ ಬಾರಿಯೂ ಜಟ್ಕಾ ಕಟ್ ಮುಂದುವರಿಸಿ-ಹಲಾಲ್ ಕಟ್ ಬಹಿಷ್ಕರಿಸಿ ಅಭಿಯಾನ ಮಾಡುತ್ತಿದ್ದೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮೊತಾಲಿಕ್ ಮಂಗಳೂರಿನಲ್ಲಿ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಯುಗಾದಿ ಸಂದರ್ಭದಲ್ಲಿ ಹಲಾಲ್ ವಿರುದ್ಧ ಜಟ್ಕಾ ಕಟ್ ಅಭಿಯಾನ ಮಾಡಿದ್ದೆವು. ಈ ಬಾರಿಯೂ ಅಭಿಯಾನವನ್ನು ಮುಂದುವರೆಸುತ್ತಿದ್ದೇವೆ. ಹಲಾಲ್ ಇಸ್ಲಾಂಗೆ ಸಂಬಂಧಿಸಿದ್ದು, ಹಿಂದೂಗಳಿಗೆ ಸಂಬಂಧಿಸಿದ್ದಲ್ಲ. ಮುಸ್ಲಿಮರು ಹಿಂದೂಗಳ ಜಟ್ಕಾ ಕಟ್ ಮಾಡಿರುವ ಮಾಂಸವನ್ನು ತಿನ್ನುವುದಿಲ್ಲ. ಹಾಗಾದರೆ ನಾವೇಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂಗಳ ವಿರುದ್ಧ ಷಡ್ಯಂತ್ರ
ಹಲಾಲ್ ಕಟ್ನಿಂದ ಜಲಾಮ್-ಉಲೇಮಾ ಟ್ರಸ್ಟ್ಗೆ ಎರಡು ಲಕ್ಷ ಕೋಟಿ ರೂಪಾಯಿ ಆದಾಯವಿದೆ. ಈ ಹಲಾಲ್ನ ಹಣ ಟೆರರಿಸ್ಟ್ಗಳಿಗೆ ಸಂದಾಯವಾಗುತ್ತದೆ. ಮಂಡ್ಯದಲ್ಲಿ ಹಿಜಾಬ್ ಪ್ರತಿಭಟನೆ ವೇಳೆ 'ಅಲ್ಲಾಹು ಅಕ್ಬರ್' ಎಂದು ಕೂಗಿದ ವಿದ್ಯಾರ್ಥಿನಿಗೆ ಇದೇ ಟ್ರಸ್ಟ್ ಐದು ಲಕ್ಷ ರೂಪಾಯಿ ನೀಡಿದೆ. ರಾಜ್ಯದಲ್ಲಿ ನಡೆದಿರುವ ಹಲವು ಗಲಭೆಯ ಹಿಂದೆ ಹಲಾಲ್ನ ಹಣವಿದೆ. ಹಲಾಲ್ ಸೇವಿಸಿ ಹಿಂದೂಗಳ ವಿರುದ್ಧ ಹಿಂದೂಗಳೇ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಪ್ರಮೋದ್ ಮೊತಾಲಿಕ್ ಹೇಳಿದರು.
ಸಚಿವರಿಂದ ಅವಹೇಳನಕಾರಿ ಹೇಳಿಕೆ
"ಇನ್ನು ಹಿಂದುತ್ವದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಸಚಿವ ಸುನೀಲ್ ಕುಮಾರ್ಗೆ ನಾಚಿಕೆ, ಮಾನ ಮರ್ಯಾದೆ ಇದೆಯೇ. ಕೇಸರಿ ಶಾಲು, ರಾಮಮಂದಿರ ನಿರ್ಮಾಣದ ಬಗ್ಗೆ ಸೊಕ್ಕಿನ ಮಾತು ಮಾತನಾಡುವ ಅವರಿಗೆ ಹಿಂದುತ್ವವೆಂದರೆ ಕೇವಲ ಭ್ರಷ್ಟಾಚಾರ ಮಾಡುವುದು, ಅಧಿಕಾರದ ದರ್ಪ ತೋರಿಸುವುದಷ್ಟೇ ಮಾತ್ರವೇ?. ಅವರಿಗೆ ತಾವು ಕೇಸರಿ ಶಾಲು ಹಾಕಿ ದತ್ತಪೀಠಕ್ಕೆ ಹೋರಾಟ ಮಾಡಿರುವುದು, ಲವ್ ಜಿಹಾದ್, ಗೋಕಳ್ಳ ಸಾಗಾಟದ ವಿರುದ್ಧ ಹೋರಾಟ ಮಾಡಿರುವುದು ಮರೆತು ಹೋಯಿತೇ," ಎಂದು ವಾಗ್ದಾಳಿ ನಡೆಸಿದರು.
ಸುನೀಲ್ ಕುಮಾರ್ ವಿರುದ್ಧ ಮುತಾಲಿಕ್ ಆಕ್ರೋಶ
ಸುನೀಲ್ ಕುಮಾರ್ ಈಗ ಏರಿರುವ ಸ್ಥಾನಕ್ಕೆ ಹಿಂದುತ್ವ ಹಾಗೂ ಕೇಸರಿ ಶಾಲು ಕಾರಣವಾಗಿದೆ. ಹಿಂದುತ್ವದ ಅಸ್ತಿತ್ವ, ಅಸ್ಮಿತೆ ಉಳಿಸುವ ಕಾರಣಕ್ಕೆ ರಾಮಮಂದಿರವನ್ನು ಕಟ್ಟಲಾಗಿದೆ. ಈ ಮಂದಿರ ನಿರ್ಮಾಣಕ್ಕೆ ಯುದ್ಧ, ಬಲಿದಾನ, ಜೈಲು, ಲಾಠಿಚಾರ್ಜ್ಗಳಾಯಿತು. ರಾಮಮಂದಿರ ಎಂಬುದು ಹಿಂದುತ್ವದ ಪ್ರತೀಕವಾಗಿದೆ. ವಿಜಯದ ಪತಾಕೆ ಎನ್ನುವುದು ಸುನಿಲ್ ಕುಮಾರ್ ಅವರಿಗೆ ಮರೆತು ಹೋಗಿದೆ. ಸುನೀಲ್ ಕುಮಾರ್ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಈ ಹೇಳಿಕೆಯನ್ನು ತಕ್ಷಣ ವಾಪಾಸ್ ತೆಗೆದುಕೊಂಡು, ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ
ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಗೋಕಳವು ಕಾರ್ಕಳದಲ್ಲಿ ಆಗಿದೆ. ಹಿಂದೂ ಸಂಘಟನೆಗಳ 300ಕ್ಕೂ ಅಧಿಕ ಕಾರ್ಯಕರ್ತರ ಮೇಲಿರುವ ಕೇಸ್ಗಳನ್ನು ಇನ್ನೂ ಹಿಂದೆತೆಗದುಕೊಂಡಿಲ್ಲ. 26 ಕಾರ್ಯಕರ್ತರ ಮೇಲಿರುವ ಗೂಂಡಾ ಕಾಯ್ದೆಯನ್ನು ಹಿಂದೆತೆಗೆದುಕೊಂಡಿಲ್ಲ. ಆದ್ದರಿಂದ ಕಾರ್ಕಳದಲ್ಲಿ ತಾನು ಅಧಿಕಾರ ಹಿಡಿದು ಇದನ್ನೆಲ್ಲಾ ಸರಿಪಡಿಸಲು ನಿರ್ಧರಿಸಿದ್ದೇನೆ. ನಾಳೆ ಉಡುಪಿಯಲ್ಲಿ ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಸುನೀಲ್ ಕುಮಾರ್ ಬ್ರಹ್ಮಾಂಡ ಭ್ರಷ್ಟಾಚಾರದ ಮೂರನೇ ಭಾಗವನ್ನು ಬಹಿರಂಗಪಡಿಸುತ್ತೇನೆ ಎಂದು ಎಚ್ಚರಿಸಿದರು.
ಆರಗ ಜ್ಞಾನೇಂದ್ರ ಕ್ಷಮೆಯಾಚಿಸಬೇಕು
ಹಾಗೆಯೇ ಗೃಹ ಸಚಿವ ಆರಗ ಜ್ಞಾನೇಂದ್ರ ಗುಳಿಗ ದೈವದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು, ಇದನ್ನು ಖಂಡಿಸಿ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಅಭಿಮಾನಿ ಬಳಗ ಮಂಗಳೂರಿನ ಪಚ್ಚನಾಡಿ ಬಂದಲೆಯ ಶ್ರೀಮಂತ ರಾಜಗುಳಿಗ ಕ್ಷೇತ್ರಕ್ಕೆ ಆಗಮಿಸಿ ದೈವದ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿತ್ತು.
ರತ್ನಾಕರ್ ಅಭಿಮಾನಿ ಬಳಗದವರು 50ಕ್ಕೂ ಅಧಿಕ ಜನ ತೀರ್ಥಹಳ್ಳಿಯಿಂದ ಮಂಗಳೂರಿನ ಬಂದಲೆ ಗುಳಿಗ ಕ್ಷೇತ್ರಕ್ಕೆ ವಾಹನ ಜಾಥಾದಲ್ಲಿ ಆಗಮಿಸಿದ್ದಾರೆ. ಈ ವೇಳೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಗುಳಿಗ ದೈವವನ್ನು ಅವಮಾನಿಸಿ ಮಾತನಾಡಿರುವ ಆರಗ ಜ್ಞಾನೇಂದ್ರರಿಗೆ ಶಿಕ್ಷೆ ಕೊಡಬೇಕು ಎಂದು ನಾವು ದೈವದ ಮುಂದೆ ಕೇಳುವುದಿಲ್ಲ. ಆದರೆ ಅವರಿಗೆ ಒಳ್ಳೆಯ ಬುದ್ಧಿ ನೀಡಬೇಕು. ಅವರು ತುಳುನಾಡಿನ ಯಾವುದಾದರೊಂದು ಗುಳಿಗ ಕ್ಷೇತ್ರಕ್ಕೆ ಆಗಮಿಸಿ ಕ್ಷಮೆಯಾಚನೆ ಮಾಡುವಂತಾಗಬೇಕು ಎಂದರು.












Click it and Unblock the Notifications