ಪೂಜಾರಿ V/S ಕಾಗೋಡು, ಮುಗಿಯದ ಮಾತಿನ ಸಮರ
ಮಂಗಳೂರು, ಜ. 7 : ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರ ಮಾತಿನ ಸಮರ ಮುಗಿಯುವಂತೆ ಕಾಣುತ್ತಿಲ್ಲ. ಜನಾರ್ದನ ಪೂಜಾರಿ ಯಾರು? ಗೊತ್ತಿಲ್ಲ ಎಂದು ಹೇಳಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಹೇಳಿಕೆಗೆ ಪೂಜಾರಿ ತಿರುಗೇಟು ನೀಡಿದ್ದು, 'ಕಾಗೋಡು ತಿಮ್ಮಪ್ಪ ಅವರು ಅರಳು ಮರಳು ರೋಗದಿಂದ ಬಳಲುತ್ತಿದ್ದಾರೆ' ಎಂದು ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು, 'ನಾಲ್ಕು ಬಾರಿ ಸಂಸತ್ತಿಗೆ ನಾನು ಆಯ್ಕೆಯಾಗಿದ್ದೇನೆ, ಕೇಂದ್ರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ, ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷನಾಗಿ ದುಡಿದಿದ್ದೇನೆ' ಆದರೂ ನಾನು ಯಾರು? ಎಂದು ಕಾಗೋಡು ತಿಮ್ಮಪ್ಪ ಪ್ರಶ್ನಿಸುತ್ತಾರಲ್ಲ ಎಂದರು. ['ಜನಾರ್ದನ ಪೂಜಾರಿ ಯಾರು?' : ಸ್ಪೀಕರ್ ಕಾಗೋಡು ಪ್ರಶ್ನೆ]

'ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿರುವ ನನಗೆ ಕಾಗೋಡು ತಿಮ್ಮಪ್ಪ ಪೂಜಾರಿ ಯಾರು?' ಎಂದು ಪ್ರಶ್ನಿಸುತ್ತಾರೆ. 'ಅರಳು ಮರಳು ರೋಗದಿಂದ ಅವರು ಬಳಲುತ್ತಿದ್ದಾರೆ' ಎಂದು ಜನಾರ್ದನ ಪೂಜಾರಿ ಲೇವಡಿ ಮಾಡಿದರು. 'ರಾಜ್ಯಸಭಾ ಸದಸ್ಯನಾಗಿ ಕೆಲಸ ಮಾಡಿರುವ ನಾನು, ಇದೇ ಕಾಗೋಡು ತಿಮ್ಮಪ್ಪಗೆ ಟಿಕೆಟ್ ನೀಡಿರುವುದನ್ನು ಸ್ಮರಿಸಲಿ, ವಿರೋಧ ಪಕ್ಷದ ಕೆಲಸವನ್ನು ಮಾಡಲು ನಿಮಗೆ ಅಧಿಕಾರನ್ನು ಕೊಟ್ಟವರು ಯಾರು?' ಎಂದು ಪೂಜಾರಿ ಪ್ರಶ್ನಿಸಿದರು. [ಸರ್ಕಾರ ಟೀಕಿಸುವ ಕಾಗೋಡು ತಿಮ್ಮಪ್ಪ ವಿರುದ್ಧ ದೆಹಲಿಗೆ ಪತ್ರ!]
ನನ್ನ ಕರ್ತವ್ಯ ಮಾಡಿದ್ದೇನೆ : 'ನಾನು ವಿಧಾನಸಭಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಇದಕ್ಕೆ ವಿರೋಧ ವ್ಯಕ್ತಪಡಿಸುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಬುಧವಾರ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, 'ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಅದೇ ರೀತಿ ನನ್ನ ಕಾರ್ಯ ವೈಖರಿ ಬಗ್ಗೆ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ' ಎಂದರು.
ಕಾಗೋಡು ಏನು ಹೇಳಿದ್ದರು : ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಾಗೋಡು ತಿಮ್ಮಪ್ಪ ಅವರು 'ಸ್ಪೀಕರ್ ಕಾಗೋಡು ತಿಮ್ಮಪ್ಪ ಪ್ರತಿಪಕ್ಷದವರಂತೆ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ, ಸರ್ಕಾರ ಬೀಳಿಸುತ್ತಾರೆಯೇ?' ಎಂದ ಪ್ರಶ್ನಿಸಿದ್ದ ಪೂಜಾರಿ ಅವರಿಗೆ ತಿರುಗೇಟು ಕೊಟ್ಟಿದ್ದರು. 'ಜನಾರ್ದನ ಪೂಜಾರಿ ಯಾರು? ಎಂಬುದೇ ತಿಳಿದಿಲ್ಲ' ಎಂದು ಹೇಳಿಕೆ ನೀಡಿದ್ದರು.












Click it and Unblock the Notifications