ಹಿಂಜಾವೇ ನಾಯಕ ಜಗದೀಶ್ ಕಾರಂತ್ ಕೀಳು ಮಟ್ಟದ ಭಾಷಣ ವೈರಲ್
ಮಂಗಳೂರು, ಸೆಪ್ಟೆಂಬರ್ 19: ತೀರಾ ಕೆಳಮಟ್ಟದ ಪದ ಪ್ರಯೋಗಿಸಿ ಪೊಲೀಸ್ ಅಧಿಕಾರಿಯೊಬ್ಬರನ್ನು ಅವಾಚ್ಯವಾಗಿ ನಿಂದಿಸಿ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಗದೀಶ್ ಕಾರಂತ್ ಮಾಡಿದ ಭಾಷಣ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
"ಸಂಪ್ಯ ಠಾಣೆಯ ಎಸ್ಐ ಖಾದರ್ ಅವರನ್ನು ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಪುತ್ತೂರು ಬಸ್ ಸ್ಟ್ಯಾಂಡ್ ನಲ್ಲಿ ಯಾಕೆ ಓಡಿಸಬಾರದು. ನಾನು ಓರ್ವ ಹಿಂದೂವಾಗಿ ನಿನಗೆ ರಸ್ತೆಯಲ್ಲಿ ಕಲ್ಲು ಹೊಡೆದು ನಿನ್ನನ್ನು ಹುಚ್ಚು ನಾಯಿಯಂತೆ ಯಾಕೆ ಅಟ್ಟಾಡಿಸಬಾರದು ? ನಿನ್ನ ತಲೆಯನ್ನು ಬೋಳಿಸಿ ಕತ್ತೆಯ ಮೇಲೆ ಕೂರಿಸಿ ಪುತ್ತೂರಿನಲ್ಲಿ ಮೆರವಣಿಗೆ ಮಾಡುವುದು ನಮಗೆ ಲೆಕ್ಕವೇ ಅಲ್ಲ," ಎಂದು ಕೀಳು ಮಟ್ಟದ ಭಾಷಣ ಮಾಡಿದ್ದರು.
ಭಾಷಣದ ವಿರುದ್ಧ ವ್ಯಾಪಕ ಆಕ್ರೋಶ ಕೇಳಿ ಬಂದಿದ್ದು ಪ್ರಕರಣ ದಾಖಲಿಸುವಂತೆ ಆಗ್ರಹ ಕೇಳಿ ಬಂದಿದೆ.

ಕಳೆದ ಶುಕ್ರವಾರ ಪುತ್ತೂರಿನ ಮೈದಾನದಲ್ಲಿ ಹಿಂದೂ ಜಾಗರಣಾ ವೇದಿಕೆ ಸಂಪ್ಯ ಠಾಣಾ ಎಸ್ಐ ಖಾದರ್ ಹಾಗೂ ಪೊಲೀಸ್ ಸಿಬ್ಬಂದಿ ಎಎಸ್ಐ ರಕ್ಷಾ ಮತ್ತು ಚಂದ್ರ ಅವರ ಹಿಂದೂ ವಿರೋಧಿ ನೀತಿ ವಿರುದ್ಧ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಇದರಲ್ಲಿ ಜಗದೀಶ್ ಕಾರಂತ್ ಖಾದರ್ ದಿಕ್ಸೂಚಿ ಭಾಷಣ ಮಾಡಿದ್ದರು. ಈ ವೇಳೆ ಅವರು ಮಾಡಿದ ಭಾಷಣದ ಕೆಲ ಉದ್ರೇಕಕಾರಿ, ಅಸಭ್ಯ ಮಾತುಗಳ ಕ್ಲಿಪ್ಪಿಂಗ್ಗಳು ಸಾಮಾಜಿಕ ಜಾಲತಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಕಾರಂತ್ ವೈರಲ್ ಭಾಷಣದಲ್ಲಿ ಏನಿದೆ?
ಧರ್ಮ ನಮಗೆ ಶ್ರೇಷ್ಠ. ನಮ್ಮ ದೇಶ ನಮಗೆ ಸರ್ವಶ್ರೇಷ್ಠ. ಇದಕ್ಕೆ ಅಡ್ಡಿ ಬರುವವರನ್ನೆಲ್ಲ ಮೆಟ್ಟಿ ನಿಲ್ಲುತ್ತೇವೆ ಎಂದು ಜಗದೀಶ್ ಕಾರಂತ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಸಂಪ್ಯ ಠಾಣೆಯ ಇನ್ಸ್ ಪೆಕ್ಟರ್ ಖಾದರ್ ತಲೆಯನ್ನು ಬೋಳಿಸಿ ಕತ್ತೆಯ ಮೇಲೆ ಕೂರಿಸಿ ಪುತ್ತೂರಿನಲ್ಲಿ ಮೆರವಣಿಗೆ ಮಾಡುವುದು ನಮಗೆ ಲೆಕ್ಕವೇ ಅಲ್ಲ. ಅದಕ್ಕೆ ಬರುವ ಕಾನೂನಿನ ಅಡ್ಡಿಗಳನ್ನು ಎದುರಿಸಲು ನಾವು ತಯಾರಾಗಿ ಬಿಟ್ಟರೆ ಸಾಕು ಎಂದಿದ್ದಾರೆ.
ಇನ್ನೂ ದಾಖಲಾಗದ ದೂರು
ಘಟನೆ ಕಳೆದ ಶುಕ್ರವಾರ ನಡೆದಿದ್ದರೂ ಈವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸ್ ಅಧಿಕಾರಿಯ ಬಗ್ಗೆ ಕೀಳಾಗಿ ಮಾತನಾಡಿದರು ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸುವ ಗೊಡವೆಗೂ ಹೋಗಿಲ್ಲ.
"ಓರ್ವ ಪೊಲೀಸ್ ಅಧಿಕಾರಿಯನ್ನು ಈ ಪರಿ ಅವಮಾನಿಸಿದ್ದರೂ ಪೊಲೀಸ್ ಇಲಾಖೆ ಮೌನವಹಿಸಿರುವುದು ಆತಂಕಕಾರಿ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಯನ್ನು ಆತನ ಧರ್ಮದ ಕಾರಣಕ್ಕೆ ಗುರಿಯಾಗಿಸಿ ದಾಳಿ ನಡೆಸುವುದು ಸಾಮಾಜಿಕವಾಗಿ ವ್ಯತಿರಿಕ್ತ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ," ಎಂದು ಡಿವೈಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ.
"ನಾಗರಿಕ ಸಮಾಜ ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕು. ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭ ಕೋಮು ಅಶಾಂತಿ ಸೃಷ್ಟಿಸುವ ಉದ್ದೇಶ ಇಂತಹ ಪ್ರತಿಭಟನೆಯ ಹಿಂದಿರುವುದು ಸ್ಪಷ್ಟವಾಗಿದೆ. ಈ ಹಿಂದೆ ಇದೇ ಜಗದೀಶ್ ಕಾರಂತ್ ಸುರತ್ಕಲ್ನಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ವಾರದೊಳಗೆ ಸುರತ್ಕಲ್ ಹೊತ್ತಿ ಉರಿದಿತ್ತು. ಹತ್ತಕ್ಕೂ ಹೆಚ್ಚು ಅಮಾಯಕರು ಕೋಮು ಗಲಭೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು," ಎಂದು ಮುನೀರ್ ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ.
ಈಗ ಅದೇ ಕಾರಂತರು ಪುತ್ತೂರಿನಲ್ಲಿ ಕೋಮು ಸಂಘರ್ಷದ ಮಾತನಾಡಿದ್ದಾರೆ. ಇದೆಲ್ಲ ತಿಳಿದೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇಂತಹ ಭಾಷಣಕ್ಕೆ ಅವಕಾಶ ನೀಡಬಾರದಿತ್ತು ಎಂದು ಮುನೀರ್ 'ಒನ್ಇಂಡಿಯಾ ಕನ್ನಡ'ದ ಜತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications