ವಿಜಯಾ ಬ್ಯಾಂಕ್ ವಿಲೀನಕ್ಕೆ ಐವನ್ ಡಿಸೋಜಾ ವಿರೋಧ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಮಂಗಳೂರು, ಸೆಪ್ಟೆಂಬರ್ 19 : ಬ್ಯಾಂಕುಗಳ ವಿಲೀನಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರದ ನಿರ್ಧಾರವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ವಿರೋಧಿಸಿದ್ದಾರೆ.
ಇತರ ಎರಡು ಬ್ಯಾಂಕ್ ಗಳ ಜೊತೆಗೆ ವಿಜಯಾ ಬ್ಯಾಂಕ್ ಅನ್ನು ವಿಲೀನಗೊಳಿಸುವ ನಿರ್ಧಾರವನ್ನು ಈ ಕೂಡಲೇ ಕೈಬಿಡದೆ ಇದ್ದಲ್ಲಿ ಕೇಂದ್ರ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.
ಕನ್ನಡ ನೆಲದ ವಿಜಯಾ ಬ್ಯಾಂಕ್ ಗೆ ಏಕೆ ಹೀಗೆ ವಿಲೀನದ ಶಿಕ್ಷೆ?
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಿತ ವಿಜಯಾ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದೆ. ಕರಾವಳಿಯಲ್ಲಿ 1931ರಲ್ಲಿ ಆರಂಭವಾದ ಈ ಬ್ಯಾಂಕ್ ಗ್ರಾಮೀಣ ಜನರಿಗೆ, ಕೃಷಿಕರಿಗೆ ಸೇವೆಯನ್ನು ಒದಗಿಸಿ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದೆ. ವಿಜಯ ಬ್ಯಾಂಕ್ ಈ ಮೂಲಕ ಮನೆಮಾತಾಗಿದೆ ಎಂದು ಹೇಳಿದರು.
ದೇಶದ ಪ್ರತಿಷ್ಠಿತ ಇತರ ರಾಷ್ಟ್ರೀಕೃತ ಬ್ಯಾಂಕುಗಳೆಲ್ಲ ಇತ್ತೀಚಿನ ವರ್ಷಗಳಲ್ಲಿ ನಷ್ಟ ಅನುಭವಿಸುತ್ತಿವೆ. ಆದರೆ ಅದರ ನಡುವೆಯೂ ಲಾಭಗಳಿಸಿದ ಎರಡನೇ ಬ್ಯಾಂಕ್ ಎಂಬ ಹೆಗ್ಗಳಿಕೆ ವಿಜಯಾ ಬ್ಯಾಂಕ್ನದ್ದು.
ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ವಿಲೀನ
ಈ ಬ್ಯಾಂಕನ್ನು ಮುಲ್ಕಿ ಸುಂದರ್ ರಾಮ್ ಶೆಟ್ಟಿಯವರು ಸ್ಥಾಪನೆ ಮಾಡಿದ್ದೇ ಬಡವರಿಗಾಗಿ. ಬೇರೆ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಬೇಕಿದ್ದರೆ ವಿಲೀನಗೊಳಿಸಲಿ. ಆದರೆ ವಿಜಯಾ ಬ್ಯಾಂಕನ್ನು ವಿಲೀನಗೊಳಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕರಾವಳಿಯ ಹೆಮ್ಮೆಯಾಗಿರುವ ವಿಜಯಾ ಬ್ಯಾಂಕ್ ಉಳಿಸುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಮುಂದಾಗಬೇಕು. ಎಲ್ಲಾ ಸಂಸದರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಬೇಕು. ಬ್ಯಾಂಕಿನ ಉದ್ಯೋಗಿಗಳ ಸಹಕಾರದಿಂದ ನಿಯೋಗದ ಮೂಲಕ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.